ಹಳಿಯಾಳ ; ಪಟ್ಟಣದ ಸ್ವಚ್ಚತೆ ಮತ್ತು ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಪಟ್ಟಣದ ಜನರಿಗೆ ವಿತರಿಸಲು ಕಳೆದ ನವೆಂಬರ್ ತಿಂಗಳಲ್ಲಿಯೇ ತಂದಿದ್ದ ಲಕ್ಷಾಂತರ ರೂ ಮೌಲ್ಯದ ಸಾವಿರಾರು ಕಸ ವಿಲೇವಾರಿ(ಡಸ್ಟಬಿನ್) ಬಕೆಟ್ಗಳು ಪುರಸಭೆ ಅಧಿಕಾರಿಗಳ ದಿವ್ಯ ನೀರ್ಲಕ್ಷ್ಯದಿಂದ ಪುರಸಭೆಯ ಸಭಾ ಭವನದಲ್ಲಿ ಬಿದ್ದು ಧೂಳು ತಿನ್ನುತ್ತಿದ್ದು ಸಚಿವ ಆರ್.ವಿ.ದೇಶಪಾಂಡೆ ಹಾಗೂ ಪಟ್ಟಣದ ಜನರ ಆಕ್ರೊಶಕ್ಕೆ ಕಾರಣವಾಗಿದೆ. ಕಳೆದ 7 ತಿಂಗಳ ಹಿಂದೆ ಪಟ್ಟಣದಲ್ಲಿ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡುವ ಸಲುವಾಗಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಮನೆ ಮನೆಗೆ ಕಸ ವಿಲೇವಾರಿ ಮಾಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ 15 ಲಕ್ಷ ರೂಗಳನ್ನು ಖರ್ಚು ಮಾಡಿ ವಿವಿಧ ರಂಗಿನ ಒಟ್ಟೂ 7800 ಬಕೆಟ್ಗಳನ್ನು ಖರೀದಿಸಲಾಗಿತ್ತು. ಹಸಿ ಕಸಕ್ಕಾಗಿ ಹಸಿರು ಬಣ್ಣದ ಬಕೆಟ್ ಹಾಗೂ ಒಣ ಕಸಕ್ಕಾಗಿ ನೀಲಿ ಬಕೆಟ್ಗಳನ್ನು ನೀಡಲು ಉದ್ದೇಶಿಸಲಾಗಿತ್ತು. ಈ ಕುರಿತು ಪುರಸಭೆಯಲ್ಲಿ ವಿಶೇಷ ಸಭೆಗಳು ನಡೆದು ಪ್ರತಿ ಬಕೆಟ್ಗೆ 180 ರೂ ಗಳನ್ನು ವೆಚ್ಚ ಮಾಡಲಾಗಿದೆ. ಪ್ರತಿ ಮನೆಗೆ ಎರಡು ಬಕೆಟ್ಗಳನ್ನು ಉಚಿತವಾಗಿ ನೀಡಲು ಉದ್ದೇಶಿಸಿ. ಕಸ ವಿಲೇವಾರಿಗೆ ಕೈ ಜೋಡಿಸುವಂತೆ ಮನವಿಗಳನ್ನು ಮಾಡುವುದರ ಮೂಲಕ ಅರಿವು ಕಾರ್ಯಕ್ರಮಗಳನ್ನು ಪ್ರತಿ ವಾರ್ಡಗಳಿಗೆ ತೆರಳಿ ಅಲ್ಲಿಯ ಜನಪ್ರತಿನಿಧಿಯೊಂದಿಗೆ ಪ್ರಚಾರ ಕೈಗೊಳ್ಳಲಾಗಿತ್ತು. ಆದರೆ ಇದುವರೆಗೂ ಕಸ ವಿಲೇವಾರಿ ಬಕೆಟ್ಗಳನ್ನು ವಿತರಿಸದೇ ಇರುವುದು ಅಧಿಕಾರಿಗಳ ಕಾರ್ಯವೈಖರಿಗೆ ಜನ ಗರಂ ಆಗಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಪಟ್ಟಣದ ವಾರ್ಡ ನಂ 19 ರಲ್ಲಿ ಕೆಲ ಕುಟುಂಬಳಿಗೆ ಹಸಿರು ಮತ್ತು ನೀಲಿ ಬಣ್ಣದ ಬಕೆಟ್ಗಳನ್ನು ವಿತರಿಸಿ ಡಸ್ಟಬಿನ್ ವಿತರಣೆಗೆ ಚಾಲನೆ ನೀಡಿದ್ದರು ಆದರೆ 4 ತಿಂಗಳು ಕಳೆದರೂ ಸಹ ಇದುವರೆಗೆ ಪುರಸಭೆಯವರು ಬಕೆಟ್ಗಳನ್ನು ವಿತರಿಸದೇ ತಮ್ಮ ಸಭಾಭವನದಲ್ಲಿ ಸಂಗ್ರಹಿಸಿಟ್ಟು ಅವುಗಳು ಧೂಳು ತಿನ್ನುವಂತೆ ಮಾಡಿರುವುದು ಸಾರ್ವಜನೀಕರಿಂದ, ಜನಪ್ರತಿನಿಧಿಗಳಿಂದ ಸಚಿವ ದೇಶಪಾಂಡೆ ಗಮನಕ್ಕೆ ಬಂದಿದ್ದು ಪುರಸಭೆಯ ಅಧಿಕಾರಿಗಳ ಕಾರ್ಯವೈಖರಿಗೆ ಕೆಂಡಾಮಂಡಲರಾಗಿರುವ ಅವರು ಕೂಡಲೇ ವಿತರಣೆ ಮಾಡದಿದ್ದರೇ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಮುಖ್ಯಾಧಿಕಾರಿಗೆ ನೀಡಿದ್ದಾರೆ. ಕಸ ವಿಲೇವಾರಿ ಬಕೆಟ್ಗಳನ್ನು ಖರೀದಿಸಿ ಬಳಿಕ ನವೆಂಬರ್ ತಿಂಗಳಿನಲ್ಲಿ ಅವುಗಳನ್ನು ವಿತರಿಸಲು ಸಚಿವರು ಚಾಲನೆ ನೀಡಿದ್ದರೂ ಸಹಿತ ಈವರೆಗೆ ಚುನಾಯಿತ ಜನಪ್ರತಿನಿಧಿಗಳು ಮಾತ್ರ ತೆಲೆ ಕೆಡಿಸಿಕೊಳ್ಳದೇ ಇರುವುದು ಡಸ್ಟ್ಬಿನ್ಗಳು ಧೂಳು ತಿನ್ನುತ್ತಿರುವುದಕ್ಕೆ ಹಾಗೂ ಸಭೆ, ಸಮಾರಂಭಗಳು ನಡೆಯಬೇಕಾದ ಸಭಾ ಭವನ ಕೂಡ ಗೋದಾಮು ಆಗಿ ಪರಿವರ್ತನೆ ಆಗಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದ್ದು ಸಚಿವರ ಎಚ್ಚರಿಕೆಯ ಆದೇಶದಿಂದಾದರು ಎಚ್ಚೆತ್ತು ಧೂಳು ತಿನ್ನುತ್ತಿರುವ ಬಕೆಟ್ಗಳನ್ನು ಜನರಿಗೆ ಪುರಸಭೆ ವಿತರಣೆ ಮಾಡಲಿದೆಯೇ ಕಾದು ನೋಡಬೇಕಾಗಿದೆ. ಹೇಳಿಕೆ :- ಪಟ್ಟಣದಲ್ಲಿ ಒಟ್ಟೂ 6450 ಕುಟುಂಬಗಳು ವಾಸಿಸುತ್ತೀವೆ. ಇವರಿಗೆ ಒಟ್ಟೂ 12900 ಬಕೆಟ್ಗಳ ಬೇಡಿಕೆ ಇದ್ದು, ಇದರಲ್ಲಿ ಇಗಾಗಲೇ 7800 ಬಕೆಟ್ಗಳನ್ನು ಖರೀದಿಸಲಾಗಿದೆ. ಇನ್ನೂಳಿದ 5100 ಬಕೆಟ್ಗಳನ್ನು ಖರೀದಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂದಿನ ಕೆಲವೇ ದಿನಗಳಲ್ಲಿ ವಾರ್ಡ ನಂ 1 ರಿಂದ 10ರಲ್ಲಿ ಹಸಿರು ಮತ್ತು ವಾರ್ಡ ನಂ 11ರಿಂದ 20 ರಲ್ಲಿ ನೀಲಿ ಬಕೆಟ್ಗಳನ್ನು ವಿತರಣೆ ಮಾಡಲಿದ್ದೇವೆ ಕೇಶವ ಚೌಗುಲೆ ಹಳಿಯಾಳ ಪುರಸಭೆ ಮುಖ್ಯಾಧಿಕಾರಿ.
Leave a Comment