ಹಳಿಯಾಳ : ಪ್ರತಿಯೊಬ್ಬರಿಗೆ ಆರೋಗ್ಯ ಮುಖ್ಯವಾಗಿದ್ದು ಸರಿಯಾದ ಆಹಾರ ಪದ್ದತಿ ಅಳವಡಿಸಿಕೊಂಡು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕೆಂದು ಜೊತೆಗೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿದರೇ ಉತ್ತಮ ಪರಿಸರದೊಂದಿಗೆ ಉತ್ತಮ ಆರೋಗ್ಯ ಹೊಂದಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭವಾದ “ಡಯಾಲಿಸಸ್” ವಿಭಾಗಕ್ಕೆ ಚಾಲನೆ ನೀಡಿ ದಾಂಡೇಲಿ ವೆಸ್ಟಕೊಸ್ಟ ಪೇಪರ್ ಮಿಲ್ ವತಿಯಿಂದ ಸಿಎಸ್ಆರ್ ಯೋಜನೆ ಅಡಿಯಲ್ಲಿ ನೀಡಲಾದ ವೈದ್ಯಕೀಯ ಉಪಕರಣಗಳು ಹಾಗೂ ಇತರ ಪರಿಕರಗಳನ್ನು ತಾಲೂಕಾ ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದರು. ಆರ್ಥಿಕವಾಗಿ ಸದೃಢರಲ್ಲದವರಿಗೆ ದೂರದ ಊರಿಗೆ ಹೋಗಿ ಚಿಕಿತ್ಸೆ ಪಡೆಯುವುದು ಕಸ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೇಸ್ ಸರ್ಕಾರ ಅನೇಕ ಸೌಲಭ್ಯಗಳನ್ನು ಪಟ್ಟಣ, ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ದುಬಾರಿಯಾಗಿರುವ ಶಸ್ತ್ರಚಿಕಿತ್ಸೆತಗಳು ಉಚಿತವಾಗಿ ನಡೆಯಲಿವೆ ಎಂದ ದೇಶಪಾಂಡೆ ಡಯಾಲಿಸಸ್ ಚಿಕಿತ್ಸೆ ಉಚಿತವಾಗಿದೆ ಎಂದು ತಿಳಿಸಿದರು. ಸರ್ಕಾರಿ ನೌಕರರು ಸಾರ್ವಜನೀಕರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಕರೆ ನೀಡಿದ ಅವರು ಶಾಸಕರಾದವರು ಕೆವಲ ರಸ್ತೆ, ಸೇತುವೆ ಕಟ್ಟುವ ಕಾರ್ಯ ಮಾಡದೆ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ನೀಡುವ ಕೆಲಸವನ್ನು ಮಾಡಬೇಕೆಂದು ಸಲಹೆ ನೀಡಿದರು. ವೆಸ್ಟಕೊಸ್ಟ ಪೇಪರ್ ಮಿಲ್ಸ್ ದಾಂಡೇಲಿ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಮಾತನಾಡಿ ಸಚಿವರಿಗೆ ಸಮಾಜದ ಪರ ಇರುವ ಮುಂದಾಲೋಚನೆ ಹಾಗೂ ಅವರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿ ಅವರ ಪ್ರಯತ್ನದಿಂದಾಗಿ ಸಿಎಸ್ಆರ್ ಯೋಜನೆಯಡಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳಾಗಿದ್ದು ಅದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಜರಾಯಿ ಇಲಾಖೆಯಿಂದ ತಾಲೂಕಿನ 17 ದೇವಸ್ಥಾನಗಳ ನವೀಕರಣ ಹಾಗೂ ಜೀರ್ಣೋದ್ದಾರಕ್ಕಾಗಿ ಸುಮಾರು 54 ಲಕ್ಷ ರೂ. ಅನುದಾನದ ಚೆಕ್ಗಳನ್ನು ಸಚಿವರು ವಿತರಿಸಿದರು. ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಜಿಪಂ ಸದಸ್ಯ ಕ್ರಷ್ಣಾ ಪಾಟೀಲ್, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಡಿಎಚ್ಓ ಅಶೋಕ, ತಾಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ರಮೇಶ ಕದಂ, ವೈದ್ಯಾಧಿಕಾರಿಗಳಾದ ಗುರುಪ್ರಸಾದ ಆಚಾರಿ, ಸೀಮಾ ಬಿರ್ಜೆ, ಆಶಾ ಎಮ್.ಡಿ, ಲಕ್ಷ್ಮೀ, ನದಿಂ ಇದ್ದರು.
Leave a Comment