ಹಳಿಯಾಳ:
ರಾಷ್ಟ್ರೀಕೃತ ಬ್ಯಾಂಕಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಎನ್.ಡಿ.ಎ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತರಾಜ್ ಇಲಾಖೆಯಿಂದ ಮಂಜೂರಾದ 33.60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹಳ್ಳಿಸಂತೆ ಮಾರುಕಟ್ಟೆಯ ಪ್ರಾಂಗಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು ಮುರ್ಕವಾಡ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಹಳ್ಳಿಸಂತೆ ಮಾರುಕಟ್ಟೆಯಿಂದ ಸಮಯದೊಂದಿಗೆ ಹಣದ ಉಳಿತಾಯವು ಆಗಲಿದೆ ಎಂದರು.
ಈಗಾಗಲೇ ತೇರಗಾಂವನಲ್ಲಿ ಈ ಮಾರುಕಟ್ಟೆ ಉದ್ಘಾಟನೆಗೊಂಡಿದ್ದು ಕಾವಲವಾಡ ಗ್ರಾಮಕ್ಕೂ ಕೂಡ ಹಳ್ಳಿಸಂತೆ ಮಾರುಕಟ್ಟೆ ಮಂಜೂರಾಗಿದೆ ಎಂದ ದೇಶಪಾಂಡೆ ಮುರ್ಕವಾಡ ಜನರ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ ಇನ್ನೂ ಅವಶ್ಯವಿರುವ ಬೇಡಿಕೆಗಳನ್ನು ನಿಮ್ಮೆಲ್ಲರ ಸಹಕಾರದಿಂದ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ತಾಲೂಕಿನ ಕೆರೆಗಳಿಗೆ ಕಾಳಿನದಿ ನೀರಾವರಿ ಯೋಜನೆಯಿಂದ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ದೊರಕಿದ್ದು ತಾಲೂಕಿನ 91ಕ್ಕೂ ಹೆಚ್ಚಿನ ಗ್ರಾಮಗಳಿಗೆ ಕಾಳಿನದಿಯಿಂದ ನಿರಂತರ ನೀರು ಸಿಗುವ ಯೋಜನೆ ಈಗಾಗಲೇ ಟೆಂಡರ್ ಆಗಿದ್ದು ಗ್ರಾಮೀಣ ಭಾಗದ ಜನರ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ, ಬಿಜೆಪಿಯಂತೆ ಬರಿ ಭರವಸೆ, ಭಾಷಣದಿಂದ ಅಭಿವೃದ್ದಿ ಸಾಧ್ಯವಿಲ್ಲ ಎಲ್ಲಾ ವರ್ಗದ ಜನರನ್ನು ಸೇರಿಸಿ ಕಾಂಗ್ರೇಸ್ ಸರ್ಕಾರ ಅಭಿವೃದ್ದಿಗಾಗಿ ಶ್ರಮಿಸುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ವಿವಿಧ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ :- ಹಳಿಯಾಳ-ಜೋಯಿಡಾ ತಾಲೂಕಿನ 358 ಅಂಗನವಾಡಿಗಳಿಗೆ ಇನ್ಫೋಸಿಸ್ ಕಂಪೆನಿಯವರು ಸಿಎಸ್ಆರ್ ಯೋಜನೆಯಡಿ ನೀಡಿದ 358 ಸ್ಟೀಲ್ ಕಪಾಟ ಹಾಗೂ ಮಕ್ಕಳಿಗೆ ಕುಳಿತುಕೊಳ್ಳಲು ಮ್ಯಾಟಗಳನ್ನು ಸಚಿವರು ವಿತರಿಸಿದರು. ಸಚಿವರು ಪ್ರಾರಂಭದಲ್ಲಿ ಪಟ್ಟಣದ ಕೆಡಿಸಿಸಿ ಬ್ಯಾಂಕ್ 2ನೇ ಶಾಖೆಯ ನೂತನ ಸಭಾ ಭವನ ಉಧ್ಘಾಟಿಸಿದರು. ಕೆಆರ್ಡಿಸಿಎಲ್ ವತಿಯಿಂದ ಮಂಜೂರಾದ ತಾಲೂಕಿನ ಅಗಸಲಕಟ್ಟಾ ವಾಡಾ ಗ್ರಾಮದ ಸೇತುವೆ ಹಾಗೂ ಯಡೋಗಾ ಗ್ರಾಮದ ಸೇತುವೆಗೆ ಶಿಲಾನ್ಯಾಸ ನೆರವೆರಿಸಿದರು.
ಈ ಸಂದರ್ಭದಲ್ಲಿ ಮುರ್ಕವಾಡ ಗ್ರಾಮದ ಬಿಜೆಪಿ-ಜೆಡಿಎಸ್ ಪಕ್ಷದಿಂದ ಯುವ ಮುಖಂಡರು ಕಾಂಗ್ರೇಸ್ಗೆ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಮಾರುತಿ ಕಮ್ಮಾರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯೆ ಮಹೇಶ್ರಿ ಮಿಶ್ಯಾಳಿ, ಪ್ರಮುಖರಾದ ಅರುಣ ಕಲಾಲ, ವಿಮಲಾ ಕೊರ್ವೆಕರ, ಸಂಜು ಮಿಶ್ಯಾಳೆ, ನರೇಂದ್ರಬಾಬು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಸಹದೇವ ಮೇತ್ರಿ, ರಮೇಶ ಪಾಟೀಲ್, ಸಂಜು ಜೋಶಿ ಇದ್ದರು.
Leave a Comment