ಹಳಿಯಾಳ:-
ದಾಂಡೇಲಿ ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆ ಕುರಿತಂತೆ ಸಚಿವ ದೇಶಪಾಂಡೆ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಿ ಬಿಜೆಪಿ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಆರೋಪಿಸಿದರು. ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಶಿವಾಜಿ ಪುಥ್ಥಳಿ ಸ್ಥಾಪನೆ ಮಾಡಲು ಸಾಧ್ಯವಿಲ್ಲ ನಿಮ್ಮ ಮತಗಳು ನಮಗೆ ಬೇಡವೆಂದು ಸಚಿವ ದೇಶಪಾಂಡೆ ಹೇಳಿದ್ದಾರೆಂದು ಅವರು ಹಿಂದೂ ವಿರೋಧಿಯಾಗಿದ್ದಾರೆಂದು ಆಪಾದಿಸಿ ಸಚಿವರ ವಿರುದ್ದ ಸಾಮಾಜಿಕ ಜಾಲತಾಣ ಹಾಗೂ ವಾಟ್ಸಪ್ಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿರುವುದು ದುರ್ದೈವದ ಸಂಗತಿಯಾಗಿದ್ದು ವಿರೋಧ ಪಕ್ಷದವರು ಇಷ್ಟೊಂದು ಕೀಳು ಪ್ರಚಾರಕ್ಕೆ ಇಳಿಯಬಾರದಿತ್ತು ಎಂದರು. ಈ ಹಿಂದೆ ಹಲವಾರು ಸಂಘನೆಗಳು ಹಳಿಯಾಳ-ದಾಂಡೇಲಿಯಲ್ಲಿ ಶಿವಾಜಿ ಮಹಾರಾಜ, ಭಗತಸಿಂಗ್, ಡಾ.ಬಿ.ಆರ್.ಅಂಬೇಡ್ಕರ ಸೇರಿದಂತೆ ಮಹಾನ್ ಪುರುಷರ ಪುಥ್ಥಳಿಗಳನ್ನು ಸ್ಥಾಪಿಸುವಂತೆ ಮನವಿ ಮಾಡಿರುವ ಬಗ್ಗೆ ತಿಳಿಸಿದ ಘೊಟ್ನೇಕರ ಈ ಬಗ್ಗೆ ಸುಪ್ರಿಂಕೋರ್ಟ ಮಾರ್ಗಸೂಚಿಯಿದ್ದು ಅದರಂತೆ ವಿಧಾನಸಭೆಯಲ್ಲಿ ಅಂಗೀಕಾರವಾದ ಬಳಿಕ ಪುಥ್ಥಳಿ ಸ್ಥಾಪನೆಗೆ ಅವಕಾಶ ದೊರೆಯುತ್ತದೆ ಎಂದು ತಿಳಿಸಿದ ಘೋಟ್ನೇಕರ ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆಯಲು ನಡೆದಿರುವ ಎಲ್ಲ ಪ್ರಯತ್ನಗಳ ದಾಖಲೆಗಳನ್ನು ಮಾಧ್ಯಮಕ್ಕೆ ಸದ್ಯದಲ್ಲೇ ಬಿಡುಗಡೆ ಮಾಲಾಗುವುದೆಂದರು. ಸಾವು-ಸಂಘರ್ಷ-ಗಲಾಟೆ, ದೊಂಬಿಗಳನ್ನೇ ಎದುರು ನೊಡುತ್ತಿರುವ ಬಿಜೆಪಿ ಪಕ್ಷದವರು ಸಚಿವ ದೇಶಪಾಂಡೆ ಹಾಗೂ ಕಾಂಗ್ರೇಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಾಂಗ್ರೇಸ್ ಸರ್ಕಾರದ ಜನಪ್ರೀಯತೆಯನ್ನು ಕಂಡು ಬಿಜೆಪಿ ಪಕ್ಷದಲ್ಲಿ ನಡುಕ ಉಂಟಾಗಿದ್ದು ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದು ರಾಜ್ಯದಲ್ಲಿ ಮೋದಿ, ಅಮಿತ್ ಶಾ ಆಟ ನಡೆಯಲ್ಲ ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು. ಏಕ್ ಮರಾಠಾ ಲಾಕ್ ಮರಾಠಾ ಕಾರ್ಯಕ್ರಮ ಮರಾಠಾ ಸಮಾಜದ ಅಭಿವೃದ್ದಿಗೆ ಹಾಗೂ 2ಎ ಮೀಸಲಾತಿ ಪಡೆಯಲು ಪಕ್ಷಾತೀತವಾಗಿ ನಡೆಸುತ್ತಿರುವ ಹೋರಾಟವಾಗಿದ್ದು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಶ್ನೇಯೇ ಇಲ್ಲವೆಂದು ಸ್ಪಷ್ಟಪಡಿಸಿದ ಘೊಟ್ನೇಕರ ಮರಾಠಾ ಸಮಾಜದಲ್ಲಿ ಜಾತಿ ಆಧಾರಿತ ರಾಜಕಾರಣಕ್ಕೆ ಅವಕಾಶ ನೀಡಿಲ್ಲ ತಾವು ಕೂಡ ಸಂಘಟನೆಯನ್ನು ಬಳಸಿಕೊಂಡು ರಾಜಕಾರಣ ಮಾಡುವುದಿಲ್ಲ ಇನ್ನೂ ವಿಧಾನಸಭೆ ಚುನಾವಣೆಗೆ ತಾವು ಸ್ಪರ್ದಿಸುವ ಪ್ರಶ್ನೇಯೇ ಇಲ್ಲವೆಂದು ಪತ್ರಕರ್ತರು ಕೇಳಿದ ಪ್ರಶ್ನೇಗಳಿಗೆ ಉತ್ತರಿಸಿದರು. ಮರಾಠಾ ಸಮಾಜಕ್ಕೆ 3ಬಿಯಿಂದ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ನಿರಂತರವಾಗಿ ನಡೆಯಲಿದ್ದು ಸಮಾಜದ ಒಳಿತಿಗೆ ಸರ್ಕಾರದ ವಿರುದ್ದವು ಹೊರಾಟ ಅನಿವಾರ್ಯ ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಘಂಟಾಘೋಷವಾಗಿ ಹೇಳಿದ ವಿಪ ಸದಸ್ಯ ಘೋಟ್ನೇಕರ ಸುಳ್ಳು ಸುದ್ದಿಗಳಿಗೆ ಯಾರು ಕಿವಿಗೊಡಬಾರದೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಘೊಟ್ನಕರ, ಎಮ್.ವಿ.ಘಾಡಿ, ಟಿ.ಆರ್.ನಾಕಾಡಿ ಇದ್ದರು.
Leave a Comment