ಹಳಿಯಾಳ :- ಚುನಾವಣೆ ಸಂಧರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು ಸಚಿವರ ಪರವಾಗಿ ವಕಾಲತ್ತು ವಹಿಸುತ್ತಿದ್ದು ಇದನ್ನು ಚುನಾವಣಾ ಆಯೋಗದ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಬಿಜೆಪಿ ಪಕ್ಷದ ಯುವ ಘಟಕದಿಂದ ಪಟ್ಟಣದಲ್ಲಿ ನಡೆದ ಬೈಕ್ ರ್ಯಾಲಿಯ ಸಮಾರೋಪ ಸಮಾರಂಭಲ್ಲಿ ಮಾತನಾಡಿದ ಅವರು ಸಚಿವ ದೇಶಪಾಂಡೆಯವರು ಕೆ.ಡಿ.ಸಿ.ಸಿ ಬ್ಯಾಂಕ ಎಮ್.ಡಿ ಹಾಗೂ ತಾಲೂಕಿನ ಸಹಕಾರಿ ಸಂಘಗಳ ಕಾರ್ಯದರ್ಶಿಗಳ ಸಭೆಯನ್ನು ಕರೆದು ರೈತರ ಸಾಲಮನ್ನಾ ಮಾಡಲಾಗಿದೆ ಎಂಬ ಪತ್ರವನ್ನು ದೇಶಪಾಂಡೆಯವರು ರೈತರಿಗೆ ಕಳಿಸುವ ಹೊಸ ಚುನಾವಣಾ ನಾಟಕ ಆರಂಭಿಸಲಿದ್ದಾರೆಂದು ಆರೋಪಿಸಿದರು. ಸಾಲಮನ್ನಾ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಭಾವನೆಗಳೊಂದಿಗೆ ಚೆಲ್ಲಾಟವಾಡಿದ್ದು, ಸಾಲಮನ್ನಾ ಹಣ ಬಿಡುಗಡೆ ಮಾಡದೇ ಇರುವುದರಿಂದ ರೈತರಿಗೆ ಹೊಸಸಾಲವು ಸಿಗದೇ ರೈತರನ್ನು ಸಂಕಷ್ಟಕ್ಕೆ ನೂಕಿದ್ದು, ಇಂತಹ ರೈತ ವಿರೋಧಿ ಸರ್ಕಾರವನ್ನು ಬದಲಾಯಿಸಲು ರೈತರು ಮುಂದಾಗಿದ್ದಾರೆಂದರು. ಮೂವತ್ತು ವರ್ಷಗಳ ನೀರಾವರಿಯಂತಹ ಯೋಜನೆ ಮಾಡದ ಈ ಹಿಂದೇಯೇ ಕಾಳಿನದಿ ನೀರಾವರಿ ಯೋಜನೆಯಂತಹ ಯೋಜನೆಗಳನ್ನು ಪ್ರಾರಂಭಿಸದ ದೇಶಪಾಂಡೆ ಅವರು ಕಾಳಿನದಿ ನೀರಾವರಿ ಯೋಜನೆಗಾಗಿ ನಾನು ಪಾದಯಾತ್ರೆ ನಡೆಸಿದ್ದಾಗ ಅದನ್ನು ಟೀಕಿಸಿದ್ದ ಸಚಿವರು ಕಾಳಿನದಿ ಯೋಜನೆ ಕಾರ್ಯಸಾಧುವಾಗಲ್ಲ ಎಂದು ಪ್ರಚಾರ ಮಾಡಿದ್ದವರು ಇಂದು ಚುನಾವಣೆ ಹೊಸ್ತಿಲಲ್ಲಿರುವಾಗ ಯೋಜನೆ ಆರಂಭಿಸಿ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆಂದು ಕಿಡಿಕಾರಿದರು. ಭಾಷಣದಲ್ಲಿ ಕಾಂಗ್ರೇಸ್ ಪಕ್ಷವನ್ನು ಟೀಕಿಸುತ್ತಿದ್ದ ಸುನೀಲ್ ಹೆಗಡೆ ಒಮ್ಮೆಲೆ ವಿ.ಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರನ್ನು ಅಭಿನಂದಿಸಿ ಕಾರ್ಯಕರ್ತರನ್ನು ದಂಗುಬಡಿಸಿದರು. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಜನರಿಕ್ ಔಷದಿ ಅಂಗಡಿ ಯೋಜನೆಯನ್ನು ಹಳಿಯಾಳ ಪಟ್ಟಣದಲ್ಲಿ ಪರಿಚಯಿಸಿರುವ ವಿ.ಪ ಸದಸ್ಯ ಘೋಟ್ನೇಕರ ಅವರ ಕಾರ್ಯ ಶ್ಲಾಘನೀಯ ಮೋದಿಯವರ ಬಗ್ಗೆ ಅವರಲ್ಲಿ ಅಪಾರ ಗೌರವವನ್ನು ಕಂಡು ನಾನು ಅಭಿನಂದಿಸುತ್ತೆನೆ. ಮುಂಬರುವ ವಿಧಾನ ಸಭಾ ಚುಣಾವಣೆಯಲ್ಲಿ ಘೋಟ್ನೇಕರ ಅವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎನ್ನುವ ಮೂಲಕ ರಾಜಕೀಯ ಬಾಂಬ್ ಸಿಡಿಸಿದರು. ಬಿಜೆಪಿ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ ಕರ್ನಾಟಕ ಹಾಗೂ ಹಳಿಯಾಳ ಕ್ಷೇತ್ರ ಪರಿವರ್ತನೆಗೆ ಸಕಾಲ ಕೂಡಿಬಂದಿದೆ, ಮೋದಿಯವರನ್ನು ಬೆಂಬಲಿಸಲು ರಾಜ್ಯದಲ್ಲಿ ಹಾಗೂ ಹಳಿಯಾಳದಲ್ಲಿಯೂ ಮತದಾರರು ಬಿಜೆಪಿಯನ್ನೇ ಚುನಾಯಿಸಲಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷ ಶಿವಾಜಿ ನರಸಾನಿ ವಹಿಸಿದ್ದರು. ಮುಖಂಡರಾದ ಅನಿಲ ಮುತ್ನಾಳ, ಅಪ್ಪು ಚರಂತಿಮಠ, ಎಸ್.ಎ.ಶೆಟವಣ್ಣನವರ, ಸಂತಾನ ಸಾವಂತ, ಸೋನಪ್ಪ ಸುಣಕಾರ, ಶಂಕರ ಗಳಗಿ, ವಿ.ಎಮ್.ಪಾಟೀಲ, ಉಮೇಶ ದೇಶಪಾಂಡೆ, ವಿಲಾಸ ಯಡವಿ, ಪ್ರದೀಪ ಹಿರೇಕರ, ಜಯಲಕ್ಷ್ಮೀ ಚವ್ಹಾನ, ರೂಪಾ ಇದ್ದರು. ಬೈಕ್ ರ್ಯಾಲಿ: ಇಲ್ಲಿಯ ಗಣೇಶ ಕಲ್ಯಾಣ ಮಂಟಪದಿಂದ ಬಿಜೆಪಿ ಘಟಕದ ವತಿಯಿಂದ ಬೈಕ್ ರ್ಯಾಲಿ ಆರಂಭಗೊಂಡಿತು. ಪಟ್ಟಣದ ಮುಖ್ಯ ಬೀದಿಯಲ್ಲಿ ಸಾಗಿ ಬಿಜೆಪಿ ಪರ ಪ್ರಚಾರ ಕೈಗೊಂಡಿತು. ಮಾಜಿ ಶಾಸಕ ಸುನೀಲ ಹೆಗಡೆ, ಘಟಕ ಅಧ್ಯಕ್ಷ ಶಿವಾಜಿ ನರಸಾನಿ ಹಾಗೂ ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ರ್ಯಾಲಿಗೆ ಚಾಲನೆ ನೀಡಿದರು.
Leave a Comment