ಹಳಿಯಾಳ :
ಎರಡು ದಶಕಗಳ ಹಿಂದೆ ನ್ಯಾಯಯುತವಾಗಿ ಹೋರಾಟ ನಡೆಸಿ ಪಡೆಯಲಾಗಿದ್ದ ಅಂಗನವಾಡಿ ನೌಕರರಿಗೆ ನೀಡಲಾಗುವ ಬೇಸಿಗೆಯ 15 ದಿನಗಳ ಕಾಲದ ಹಕ್ಕು ರಜೆಯನ್ನು ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರಿಗೆ ಎಕಕಾಲದಲ್ಲಿ ನೀಡುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ಮನವಿ ನೀಡುವ ಮೂಲಕ ಆಗ್ರಹಿಸಿದ್ದಾರೆ. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ತೆರಳಿ ಉಪನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಸಿಡಿಪಿಒ ಶಾರದಾ ಮರಾಠೆ ಅವರಿಗೆ ಸಲ್ಲಿಸಿದರು. ಜೆ.ಎಚ್. ಪಟೇಲ್ ಅವರು 1997ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 21 ದಿನಗಳ ಸತ್ಯಾಗ್ರಹ ಮಾಡುವುದರ ಮೂಲಕ ಈ ರಜೆಯನ್ನು ಪಡೆಯಲಾಗಿತ್ತು. ಇದೀಗ ಸರ್ಕಾರ ರಜೆಯನ್ನು ಹಿಂದಕ್ಕೆ ಪಡೆದು ಅದರ ಬದಲಾಗಿ ನಮ್ಮ ಹಕ್ಕಿನ ರಜೆಯ ಅವಧಿಯಲ್ಲಿಯೇ ಎರಡು ಪಟ್ಟು ಕೆಲಸ ಮಾಡಿಸಲು ಮುಂದಾಗಿದೆ. ಇದನ್ನು ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ವಿರೋಧ ವ್ಯಕ್ತ ಪಡಿಸಿ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ಆದ್ದರಿಂದ ಎಕ ಕಾಲದಲ್ಲಿ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರಿಗೆ 15 ದಿನಗಳ ರಜೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಜಯಶ್ರೀ ಹಿರೇಕರ ಹಾಗೂ ಬ್ರಿಜಿಟಾ ಬ್ರಿಗಾಂಜಾ, ಗಿರಿಜಾ ಮರಾಠೆ, ಜ್ಯೋತಿ ತಾಂಬಿಟ್ಕರ, ಸುಜಾತಾ ವಾಲೇಕರ, ಗೀತಾ ಚವ್ಹಾಣ ರತ್ನಾ ಶಿಂಧೆ ಇತರರು ಇದ್ದರು.
Leave a Comment