ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳಿಗಿಂತ ತಮ್ಮ ಪಕ್ಷದ ಕೆಲವು ಕಾರ್ಯಕರ್ತರು, ಮುಖಂಡರಿಗೆ ಹಾಗೂ ಗುತ್ತಿಗೆದಾರರಿಗೆ ಸರ್ಕಾರದ ಕಾಮಗಾರಿಗಳ ಗುತ್ತಿಗೆ ಕೆಲಸ ನೀಡಿ ಅವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ಸರ್ಕಾರದ ಹಣ ಹಗಲು ದರೊಡೆ ಮಾಡಿದ್ದಾರೆ ಹೊರತು ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ ಹೀಗಾಗಿ ಅವರ ಸೋಲು ನಿಶ್ಚಿತ ಎಂದು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಬಿಜೆಪಿ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದರು. ಪಟ್ಟಣದಲ್ಲಿ ಗುರುವಾರ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ಮೆರವಣಿಗೆ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆ ಸಮಯದಲ್ಲಿ ರಾಜಕೀಯ ಗಿಮಿಕ್ ಮಾಡಲು ಟೆಂಡರ್ ಕರೆಯದೆಯೇ ಕಾಳಿನದಿ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡುವ ನಾಟಕವಾಡಿರುವ ದೇಶಪಾಂಡೆ ಗ್ರಾಮಾಂತರ ಭಾಗದಲ್ಲಿ ಹಾಗೂ ಜೋಯಿಡಾದಲ್ಲಿ ನೀರಿನ ಸಮಸ್ಯೆ ಹಾಗೆ ಇದೆ. ಕೈಗಾರಿಕಾ ಮಂತ್ರಿಯಾಗಿ ಕ್ಷೇತ್ರದಲ್ಲಿ ಒಂದೆ ಒಂದು ಕೈಗಾರಿಕೆ ಸೃಷ್ಠಿಸಿಲ್ಲ ಹಾಗೂ ಉದ್ಯೋಗಾವಕಾಶಗಳು ಯುವಕರಿಗೆ ದೊರೆಯದೆ ಗೋವಾ-ಮಹಾರಾಷ್ಟ್ರ ರಾಜ್ಯಗಳಿಗೆ ದುಡಿಮೆ ಅರಸಿ ಗುಳೆ ಹೊಗುವ ದೌರ್ಭಾಗ್ಯ ಯುವಕರಿಗೆ ಬಂದಿದೆ ಎಂದರು. ರಾಷ್ಟ್ರಪುರುಷ, ಅಪ್ಪಟ ದೇಶಪ್ರೇಮಿ ಶಿವಾಜಿ ಮಹಾರಾಜರಂತಹ ಮಹಾನ್ ರಾಜನ ಮೂರ್ತಿ ಸ್ಥಾಪನೆಗೆ ಹಳಿಯಾಳ ಕ್ಷೇತ್ರದಲ್ಲಿ ಅವಕಾಶ ನೀಡದೆ ಇರುವಂತೆ ನೋಡಿಕೊಳ್ಳುತ್ತಿರುವ ದೇಶಪಾಂಡೆ ಅವರ ಸೂಚನೆಯಿಂದ ಇಂದು ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಶಿವಾಜಿ ಮೂರ್ತಿಗಳು ರಸ್ತೆಯಲ್ಲಿ ನಿಂತಿದ್ದು ಛತ್ರಪತಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದ ಸುನೀಲ್ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಳಿಯಾಳಕ್ಕೆ ಬಂದರು ಮರಾಠರಿಗೆ 2ಎ ಮೀಸಲಾತಿ ಕುರಿತು ಚಕಾರವೆತ್ತಿಲ್ಲ ಆದರೇ ಸ್ಥಳೀಯ ಕಾಂಗ್ರೇಸ್ ನಾಯಕರು ಮಾತ್ರ ಮರಾಠರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಮರಾಠರನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಕ್ಷೇತ್ರದಲ್ಲಿ ತಾವು ಆಯ್ಕೆಯಾದ 3 ತಿಂಗಳೊಳಗೆ ಮರಾಠರನ್ನು 2ಎಗೆ ಸೇರಿಸಲಾಗುವುದು, ಗೌಳಿ ಹಾಗೂ ಕುಣಬಿ ಜನರನ್ನು ಎಸ್ಟಿ ಪಂಗಡಕ್ಕೆ ಮಾನ್ಯತೆ ನೀಡಲಾಗುವುದು, ಎಲ್ಲ ಬಡವರಿಗೆ ಸೂರು ಒದಗಿಸಲಾಗುವುದು ನಮ್ಮದು ಸಬ್ ಕಾ ಸಾತ್ ಸಬಕಾ ವಿಕಾಸ್ ಸರ್ಕಾರ ಆಗಲಿದೆ ಎಂದು ಸುನೀಲ್ ಹೆಗಡೆ ಹೇಳಿದರು. ನಾಮಪತ್ರ ಸಲ್ಲಿಕೆ :- ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಮಠದ ಅವರಿಗೆ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಸುನಿಲ್ ಹೆಗಡೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ.ಹೆಗಡೆ, ಪತ್ನಿ ಸುವರ್ಣಾ ಸುನಿಲ್ ಹೆಗಡೆ ಇದ್ದರು. ತಂದೆ ವಿಡಿ ಹೆಗಡೆ ಮಾತನಾಡಿ ಕ್ಷೇತ್ರದಲ್ಲಿ ಕಾಂಗ್ರೇಸ್ ಭ್ರಷ್ಟಾಚಾರ ಹೆಚ್ಚಾಗಿದ್ದು ಇದರಿಂದ ರೋಸಿ ಹೊಗಿರುವ ಜನತೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಅಭಿವೃದ್ದಿಗೆ ಸಹಕಾರಿಯಾಗಲಿದ್ದಾರೆ. ಕಾಂಗ್ರೇಸ್ ದುರಾಡಳಿತ ಮುಕ್ತ ಮಾಡಲಿದ್ದಾರೆಂದರು.
Leave a Comment