ಹಳಿಯಾಳ:- 2018ರ ಈ ವಿಧಾಸಭಾ ಚುನಾವಣೆಯಲ್ಲಿ ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೇಸ್ ಪಕ್ಷ ಸಂಪೂರ್ಣ ಬಹುಮತದಿಂದ ಆಯ್ಕೆಯಾಗಿ ಸರ್ಕಾರ ರಚಿಸಲಿದೆ ಎಂದು ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ, ಸಚಿವ ಆರ್.ವಿ.ದೇಶಪಾಂಡೆ ಭವಿಷ್ಯ ನುಡಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಯಾಗಿ 4 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ ದೇಶಪಾಂಡೆ ಅವರೊಂದಿಗೆ ಅವರ ಧರ್ಮಪತ್ನಿ ರಾಧಾಬಾಯಿ ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ದಾಂಡೇಲಿ ಬ್ಲಾಕ್ ಅಧ್ಯಕ್ಷ ಸೈಯದ್ ತಂಗಳ ಇದ್ದರು. ನಾಮಪತ್ರ ಸಲ್ಲಿಸಿದ ನಂತರ ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ನಡೆದ ಮೆರವಣಿಗೆ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಹಳಿಯಾಳದ ಕಾಳಿನದಿ ನೀರಾವರಿ ಯೋಜನೆ ಕಾಮಗಾರಿ ಚುನಾವಣೆ ಗಿಮಿಕ್ ಎಂದು ಆರೋಪಿಸುತ್ತಿರುವುದು ಸರಿಯಾದ ಕ್ರಮವಲ್ಲ ಹೆಗಡೆ ಮಾತನಾಡುವ ಮೊದಲು ವಿಚಾರ ಮಾಡಿ ಮಾತನಾಡಲಿ ಯೋಜನೆ ಟೆಂಡರ್ ಕರೆಯದೆ ಗಿಮಿಕ್ ಆಗಿದೆ ಎಂಬುದನ್ನು ದಾಖಲೆಗಳ ಸಮೇತ ಸಾಬಿತು ಪಡಿಸಿದರೇ ತಾವು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೊಷಿಸಿದ ದೇಶಪಾಂಡೆ ಆದರೇ ಅನಂತಕುಮಾರ ರಾಜಿನಾಮೆ ನೀಡುವುದು ಬೇಡ ಅವರು ವೃಥಾ ಸುಳ್ಳು ಆರೋಪಗಳನ್ನು ಮಾಡುವುದನ್ನು ಕಡಿಮೆ ಮಾಡಲಿ, ತಮ್ಮ ಮಾತಿನ ಮೇಲೆ ಹಿಡಿತ ಸಾದಿಸಲಿ ಎಂದು ಕಿವಿ ಮಾತು ಹೇಳಿದರು. ಇನ್ನೂ ಸ್ಥಳೀಯ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಈ ಹಿಂದೆ ಶಾಸಕರಾಗಿದ್ದ 5 ವರ್ಷ ಏನು ಅಭಿವೃದ್ದಿ ಮಾಡಿದ್ದಾರೆ ? ಬರಿ ಅಧಿಕಾರ ಮಾಡಿದರಾಗುವುದಿಲ್ಲ ಜನರ ಸೇವೆ ಮಾಡಬೇಕು ಆಗ ಜನ ಒಪ್ಪುತ್ತಾರೆ. ಭಾಷಣಗಳಿಂದ ಯಾರು ಜನಪ್ರತಿನಿಧಿಯಾಗಿ ಆಯ್ಕೆಯಾಗಲು ಸಾಧ್ಯವಿಲ್ಲ ಎಂದರು. ದಾಂಡೇಲಿ ತಾಲೂಕನ್ನಾಗಿ ಘೊಷಣೆ ಮಾಡಿದ್ದು, ಹಳಿಯಾಳ ಪಟ್ಟಣಕ್ಕೆ 24*7 ಮಾದರಿ ನೀರು ಯೋಜನೆ ಜಾರಿ ಸೇರಿದಂತೆ ಹಲವಾರು ಅಭಿವೃದ್ದಿ ಪರ ಯೋಜನೆಗಳು ಹಾಗೂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದ್ದು ತಮ್ಮ ಗೆಲುವು ಶತಸಿದ್ದ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಮಾತನಾಡಿ ಈ ಹಿಂದೆ ಯಡ್ಯೂರಪ್ಪ ಅವರು ಟಿಪ್ಪು ಜಯಂತಿ ಮಾಡಿ ಟಿಪ್ಪುಗೆ ಜೈಕಾರ ಹಾಕಿ ಈಗ ಬಿಜೆಪಿಗೆ ಬಂದ ಮೇಲೆ ಟಿಪ್ಪುವಿನ ವಿರೋಧ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೀಸಿದ ಅವರು ವಿವಿಧ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿದ ಯಡ್ಯೂರಪ್ಪ ಎಂದಿಗೂ ಮುಖ್ಯಮಂತ್ರಿ ಆಗಲಾರರು ಎಂದರು. ಕಾಳಿನದಿ ನೀರಾವರಿ ಯೋಜನೆ ಕುರಿತು ಮಾತನಾಡಿ ಸೊತು ಮೂಲೆ ಗುಂಪಾದ ಮಾಜಿ ಶಾಸಕ ಸುನೀಲ್ ಹೆಗಡೆಗೆ ಅಪವಾದ, ಸುಳ್ಳು ಆರೋಪಗಳನ್ನು ಮಾಡುವುದು ಬಿಟ್ಟು ಬೇರೆ ಕೆಲಸವಿಲ್ಲ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತನ್ನ ರಾಜಕೀಯ ಜೀವನದಲ್ಲಿ ಟಿಕೆ ಮಾಡಿದ್ದೇ ಸಾಧನೆ ಎಂದು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ದೇಶಪಾಂಡೆ ಪುತ್ರರಾದ ಪ್ರಸಾದ, ಪ್ರಶಾಂತ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಮೊದಲಾದ ಮುಖಂಡರು ಇದ್ದರು.
Leave a Comment