ಹಳಿಯಾಳ:- ಪ್ರತಿ ಚುನಾವಣೆಯಲ್ಲಿ ಒಂದು ನಾಟಕವಾಡುವ ಸಚಿವ ಆರ್.ವಿ.ದೇಶಪಾಂಡೆ ಈ ಚುನಾವಣೆಯಲ್ಲಿ ಕಾಳಿನದಿ ನೀರಾವರಿ ಯೋಜನೆ ಜಾರಿ ಆಗಿದೆ ಎನ್ನುವ ರಾಜಕೀಯ ನಾಟಕವಾಡಿದ್ದು ಮೇ.17ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶಪಾಂಡೆ ಬಣ್ಣ ಬಯಲು ಮಾಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದೇಶಪಾಂಡೆ ಅವರು ಪತ್ರಿಕೆ ಒಂದರಲ್ಲಿ ಕಾಳಿನದಿ ನೀರಾವರಿ ಯೋಜನೆ ಅನುಷ್ಠಾನವಾಗುತ್ತಿರುವ ಕುರಿತು ಹೇಳಿದ್ದು ಅದು ಶುದ್ದ ಸುಳ್ಳಾಗಿದ್ದು ಚುನಾವಣೆ ಗಿಮಿಕ್ ಆಗಿದೆ ಅಲ್ಲದೇ ನೀರಾವರಿ ಯೋಜನೆ ಪೈಪಲೈನ್ ಮೂಲಕ ಮಾಡಲು ಬರುವುದಿಲ್ಲ ಬದಲಾಗಿ ಕೆನಾಲ್ ಮೂಲಕ ಯೋಜನೆ ಜಾರಿ ಮಾಡಬೇಕಾಗುತ್ತದೆ ಆದರೇ ಇದು ನೀರಾವರಿ ಯೋಜನೆ ಆಗಿರದೆ ಧಾರವಾಡ ಜಿಲ್ಲೆ ಅಳ್ನಾವರಕ್ಕೆ ನೀರು ಕೊಟ್ಟು ಹಳಿಯಾಳ ಕ್ಷೇತ್ರದ ಜನತೆಗೆ ದ್ರೋಹ ಬಗೆಯುವ ಯೋಜನೆ ಆಗಿದೆ ಎಂದು ಆರೋಪಿಸಿದರು. ನೀರಾವರಿ ಯೋಜನೆ ನಾಟಕವಾಗಿದೆ ಎನ್ನುವ ಹೇಳಿಕೆಗೆ ಈಗಲೂ ತಾವು ಬದ್ದರಿದ್ದು ದೇಶಪಾಂಡೆಗೆ 2 ವರ್ಷಗಳ ಕಾಲಾವಧಿ ನೀಡುತ್ತೇನೆ ಅಷ್ಟರಲ್ಲಿ ಅವರು ನೀರಾವರಿ ಯೋಜನೆ ಜಾರಿಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಿದ ಮೇಲೆಯೇ ಚುನಾವಣೆ ಎದುರಿಸೊಣ ಅಲ್ಲಿಯವರೆಗೂ ಕ್ಷೇತ್ರದಲ್ಲಿ ಚುನಾವಣೆ ಮುಂದುಡುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸೊಣ ಎಂದು ಸವಾಲ್ ಹಾಕಿದ ಸುನೀಲ್ ಹೆಗಡೆ ಕಳೆದ ಚುನಾವಣೆಯಲ್ಲಿ ಹಾಗೂ ಆಯ್ಕೆಯಾದ ಬಳಿಕ ಕ್ಷೇತ್ರವನ್ನು ಸಿಂಗಾಪೂರ ಮಾಡುತ್ತೇನೆ ಎಂದಿದ್ದ ತಾವು ಈಗ ಏಕೆ ಮತದಾರರ ಬಳಿ ಮತಯಾಚನೆಗೆ ತೆರಳುತ್ತಿದ್ದೀರಿ ನೀವು ಅಭಿವೃದ್ದಿ ಮಾಡಿರುವುದು ನಿಜವೇ ಆದರೇ ಜನರು ನಿಮ್ಮನ್ನು ಆಯ್ಕೆ ಮಾಡುತ್ತಾರೆ ಅದಕ್ಕಾಗಿ ಇಬ್ಬರು ಈ ಕ್ಷಣದಿಂದಲೇ ಪ್ರಚಾರ ಕಾರ್ಯ ಮೊಟಕು ಗೊಳಿಸಿ ಮನೆಯಲ್ಲಿ ಕುಳಿತುಕೊಳ್ಳಣ ಜನರಿಗೆ ಆಯ್ಕೆ ಮಾಡಲು ಅವಕಾಶ ನೀಡೊಣ ಎಂದು ಹೆಗಡೆ ದೇಶಪಾಂಡೆಗೆ ಇನ್ನೊಂದು ಸವಾಲ್ ಹಾಕಿದರು. ಮೊನ್ನೆ ರಾಮನಗರಕ್ಕೆ ಬಂದಿದ್ದ ಕೇಂದ್ರ ಸಚಿವ ಗಡ್ಕರಿ ಅವರು ಹಳಿಯಾಳ ಕ್ಷೇತ್ರದಲ್ಲಿ ನೀರಾವರಿ ಯೋಜನೆ, ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ಪೆನಲ್ ಅಳವಡಿಸಿ ರೈತರಿಗೆ ಆದಾಯ ತರುವ ಯೋಜನೆ ಮಾಡಲು 1000ಕೋಟಿ ರೂ. ಅನುದಾನ ನೀಡುವ ಭರವಸೆ ನಿಡಿದ್ದಾರೆಂದರು. ಚುನಾವಣೆ ಹಿನ್ನೆಲೆ ದೇಶಪಾಂಡೆ ಅವರು ರುಡಸೆಟ್ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಚುನಾವಣಾ ಆಯೋಗಕ್ಕೆ ಸಾಕ್ಷಿ ಆಧಾರಗಳ ಸಮೇತ ದೂರು ನೀಡಲಾಗಿದೆ ಎಂದ ಅವರು ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದು ಹೀಗೆ ಮುಂದುವರೆದರೇ ಬೆಂಗಳೂರು ಚುನಾವಣಾ ಆಯೋಗಕ್ಕೆ ದೂರು ನೀಡಲಾಗವುದು ಎಂದು ಎಚ್ಚರಿಕೆ ನೀಡಿದರು. ಕ್ಷೇತ್ರದಲ್ಲಿ ಎಷ್ಟು ಉದ್ಯೋಗಾವಕಾಶಗಳನ್ನು ದೇಶಪಾಂಡೆ ಸೃಷ್ಠಿಸಿದ್ದಾರೆ ? ಮರಾಠರನ್ನು 2ಎಗೆ ಹಾಗೂ ಕುಣಬಿ ಜನರನ್ನು ಎಸ್ಟಿ ವರ್ಗಕ್ಕೆ ಸೇರಿಸದ ಅವರು ಕ್ಷೇತ್ರದಲ್ಲಿ ರಾಷ್ಟ್ರಪುರುಷ ಶಿವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆಗೆ ಅವಕಾಶ ನೀಡದೆ ಮಹಾಪುರುಷನ ಮೂರ್ತಿಗಳು ರಸ್ತೆಯ ಮೇಲೆ ನಿಲ್ಲಬೇಕಾದ ದೌರ್ಭಾಗ್ಯ ಹಿಂದೂಗಳಿಗೆ ಬಂದೊದಗಿದ್ದು ಬಿಜೆಪಿ ಅಧಿಕಾರಕ್ಕೆ ಬಂದ 1 ತಿಂಗಳಲ್ಲಿ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಿವಾಜಿ ನರಸಾನಿ, ತುಕಾರಾಮ ಮಾಂಜ್ರೇಕರ, ಸಂತೊಷ ರೆಡೆಕರ, ಸೊನಪ್ಪಾ ಸುಣಕಾರ, ಎಸ್.ಎ.ಶೆಟವಣ್ಣವರ, ವಿಎಮ್. ಪಾಟೀಲ್ ಇದ್ದರು.
Leave a Comment