ಹಳಿಯಾಳ:- ರಾಷ್ಟ್ರಪುರುಷರು, ಕ್ರಾಂತಿಕಾರಿಗಳನ್ನು ಸದಾ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುವ ಹಾಗೂ ಅಗೌರವ ನೀಡುತ್ತಾ ಕೇವಲ ಭ್ರಷ್ಟಾಚಾರವನ್ನೇ ಮೂಲಮಂತ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೇಸ್ ಸರ್ಕಾರವನ್ನು ಈ ಬಾರಿ ಕಿತ್ತೊಗೆಯಿರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜಿ ಕರೆ ನೀಡಿದರು. ಶುಕ್ರವಾರ ಹಳಿಯಾಳಕ್ಕೆ ಆಗಮಿಸಿದ ಅವರು ಇಲ್ಲಿಯ ಶ್ರೀ ಶಿವಾಜಿ ಮೈದಾನದಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶವನ್ನು ಉಧ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು ಅವರಿಗೆ ಪರಿಹಾರ ನೀಡದೆ ಸಿದ್ದರಾಮಯ್ಯ ಸರ್ಕಾರ ನಿರಂತರ ಭ್ರಷ್ಟಾಚಾರದಲ್ಲಿ ಕಾಲಕಳೆಯುತ್ತಿದ್ದು ಕರ್ನಾಟಕದ ಸಿದ್ದರಾಮಯ್ಯ ಅವರು ಕಾಂಗ್ರೇಸ್ನ ಎಟಿಎಮ್ ಇದ್ದಂತೆ ಅವರು ರಾಜ್ಯದ ಸಂಪತ್ತು ಲೂಟಿ ಮಾಡುವುದರಲ್ಲೇ ಕಾಲಹರಣ ಮಾಡಿ ರೈತರನ್ನು, ಯುವಕರನ್ನು ಅತಂತ್ರ ಸ್ಥಿತಿಯಲ್ಲಿಟ್ಟು ರಾಜ್ಯದ ಮತದಾರರಿಗೆ ದ್ರೋಹ ಬಗೆದಿದ್ದಾರೆಂದರು. ರಾಷ್ಟ್ರೀಯ ಪುರುಷರನ್ನು, ಕ್ರಾಂತಿಕಾರಿಗಳನ್ನು ಸದಾಕಾಲ ಅವಮಾನಿಸುವ ಕಾಂಗ್ರೇಸ್ ಸರ್ಕಾರ ಮಠ ಮಂದಿರಗಳ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದು ದೌರ್ಭಾಗ್ಯದ ಸಂಗತಿಯಾಗಿದ್ದು ಇಂತಹ ಸರ್ಕಾರ ಆಡಳಿತ ನಡೆಸಲು ಯೋಗ್ಯವಿಲ್ಲ ಎಂದು ಕಿಡಿ ಕಾರಿದರು. ಸಿದ್ದರಾಮಯ್ಯ ಅವರೇ ಉತ್ತರ ಪ್ರದೇಶ ಸರ್ಕಾರದ ಜೊತೆ ನಿಮ್ಮನ್ನು ತುಲನೆ ಮಾಡಬೇಡಿ ಹಾಗೇನಾದರು ಮಾಡಿದರೇ ನೀವು ಕ್ಷಣ ಮಾತ್ರ ನಿಮ್ಮ ಸ್ಥಾನದಲ್ಲಿ ಉಳಿಯುವುದಿಲ್ಲ ನಾವು ಓಟ ಬ್ಯಾಂಕ್ ರಾಜಕಾರಣ ಮಾಡುವರಲ್ಲ ಭ್ರಷ್ಟಾಚಾರ ಮುಕ್ತ, ಗುಂಡಾಗಿರಿ ಮುಕ್ತ ಪಾರದರ್ಶಕ ಆಡಳಿತ ನಮ್ಮದು ಎಂದರು. ರಾಷ್ಟ್ರಪುರುಷ ಶಿವಾಜಿ ಮಹಾರಾಜರಂತಹ ವ್ಯಕ್ತಿಯ ಪುಥ್ಥಳಿ ಸ್ಥಾಪನೆಗೆ ಅವಕಾಶ ನೀಡದೆ ಅವರಿಗೆ ಅಗೌರವ ತೋರುವ ಕಾಂಗ್ರೇಸ್ ಸರ್ಕಾರವನ್ನು ಮೊದಲು ಕಿತ್ತೊಗೆಯಿರಿ ಕರ್ನಾಟಕ ನೆಲದಲ್ಲಿ ರಾಷ್ಟ್ರಪುರುಷರು, ಸಂತರು, ಕ್ರಾಂತಿಕಾರಿಗಳಿಗೆ ಗೌರವ ನೀಡುವ, ಅಭಿವೃದ್ದಿ ಪರ ಬಿಜೆಪಿ ಪಕ್ಷ ಬೆಂಬಲಿಸಿ ಎಂದ ಯೋಗಿ ಅವರು ಹಳಿಯಾಳ ಕ್ಷೇತ್ರದಲ್ಲಿ ಅಭ್ಯರ್ಥಿ ಸುನೀಲ್ ಹೆಗಡೆ ಅವರನ್ನು ಬಹುಮತಗಳಿಂದ ಆರಿಸಿ ತನ್ನಿ ಹಳಿಯಾಳ ಕ್ಷೇತ್ರದಲ್ಲಿ ಕೈಗಾರಿಕೆ, ನೀರಾವರಿ ಯೋಜನೆ, ನೀರಿನ ಸಮಸ್ಯೆ ಪರಿಹಾರ ಸೇರಿದಂತೆ ಶಿವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು. ಹಿಂದೂಗಳ ಪೂಜನೀಯ ಗೋಮಾತೆಯ ಭಕ್ಷಣೆ ಮಾಡುವ ಬಗ್ಗೆ ಸಮರ್ಥನೆಯ ಮಾತನಾಡುವ ಶಾಸಕರನ್ನು ಹೊಂದಿರುವ ಸಿದ್ದರಾಮಯ್ಯ ನವರೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲಾಗುವುದು ಎಂದು ಘೊಷಿಸಿದರು. ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಸಚಿವ ಆರ್.ವಿ.ದೇಶಪಾಂಡೆ ಸುಧಿರ್ಘ 35 ವರ್ಷ ಆಡಳಿತ ನಡೆಸಿದರು ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿ ಮಾಡಿಲ್ಲ, ನೀರಾವರಿ ಯೋಜನೆಗಳಲ್ಲಿ, ಕುಡಿಯುವ ನೀರಿಗೆ ಸಮಸ್ಯೆಗೆ ಪರಿಹಾರ ನೀಡದೆ ಇರುವ ಅವರನ್ನು ಸೋಲಿಸಿ ನನ್ನನ್ನು ಗೆಲ್ಲಿಸಿದರೇ ಕ್ಷೇತ್ರದಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವುದಾಗಿ ಹೇಳಿದರು. ಸುಮಾರು 12 ಸಾವಿರಕ್ಕೂ ಅಧಿಕ ಜನ ಸೇರಿದ್ದ ಸಮಾವೇಶ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಡಿ ಹೆಗಡೆ, ಹನುಮಂತ ಕೊಟಬಾಗಿ, ಮಂಗೇಶ ದೇಶಪಾಂಡೆ, ವಿಜಯಕುಮಾರ ಗುಪ್ತಾ, ಸ್ವಾಮೀಜಿಗಳಾದ ಮಂಜುನಾಥ ಮಹಾರಾಜ, ಹಂಡಿಬಡಂಗನಾಥ ಸ್ವಾಮೀಜಿ, ಸಾಗರನಾಥ ಮಹಾರಾಜ, ತಾಲೂಕಾಧ್ಯಕ್ಷರಾದ ಶಿವಾಜಿ ನರಸಾನಿ, ತುಕಾರಾಮ, ಬಸವರಾಜ ಕಳಸೆಟ್ಟಿ ಶ್ರೀಕಾಂತ ಹೂಲಿ, ಶ್ರೀಪತಿ ಭಟ್, ವಿಎಮ್ ಪಾಟಿಲ್, ಪ್ರಮುಖರು ಇದ್ದರು.
Leave a Comment