ದಾಂಡೇಲಿ : ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ಹೀಗೆ ಮೂರು ತಾಲೂಕುಗಳನ್ನೊಳಗೊಂಡ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಶಾಶ್ವತ ಅಭಿವೃದ್ಧಿಯ ಮಹತ್ವಕಾಂಕ್ಷಿ ಉದ್ದೇಶವನ್ನಿಟ್ಟುಕೊಂಡು ತಾಲೂಕುವಾರು ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ನುಡಿದಂತೆ ನಡೆಯುವ ಕ್ಷೇತ್ರದ ಅಭಿವೃದ್ಧಿಯ ಪ್ರಣಾಳಿಕೆ ನಮ್ಮ ಪ್ರಣಾಳಿಕೆ ಎಂದು ಹಳಿಯಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಬುಧವಾರ ನಗರದ ಡಿಲಕ್ಸ್ ಸಭಾಭವನದಲ್ಲಿ ನಡೆದ ಪಕ್ಷದ ಮೂರು ತಾಲೂಕಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸಿದ್ದಪಡಿಸಲಾದ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಕಳೆದ 2013 ರ ಚುನಾವಣೆಯ ಸಂದರ್ಭದಲ್ಲಿಯೂ ಕ್ಷೇತ್ರದಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ರಾಜ್ಯದ ಪ್ರಣಾಳಿಕೆಯಲ್ಲಿದ್ದ 159 ಭರವಸೆಗಳಲ್ಲಿ 157 ಭರವಸೆಗಳನ್ನು ಈಡೇರಿಸುವುದರ ಮೂಲಕ ನುಡಿದಂತೆ ನಡೆದ ಹೆಗ್ಗಳಿಕೆ ರಾಜ್ಯ ಕಾಂಗ್ರೆಸ್ ಸರಕಾರಕ್ಕಿದೆ ಎಂದು ದೇಶಪಾಂಡೆಯವರು ಹೇಳಿದರು.
ದಾಂಡೇಲಿಗೆ ಕಾಳಿ ನದಿಯಿಂದ ದಿನದ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆಯನ್ನು ನೀಡಲಾಗಿದೆ. ನೂತನ ದಾಂಡೇಲಿ ತಾಲೂಕಿಗೆ ಅಗತ್ಯಬೇಕಾದ ಮೂಲಸೌಕರ್ಯಗಳನ್ನು ಮತ್ತು ಸಿಬ್ಬಂದಿಗಳನ್ನು ಶೀಘ್ರದಲ್ಲಿ ನಿಯೋಜಿಸುವುದು. ರೈಲ್ವೆ ಮಾಲೀಕತ್ವದ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವುದು. ಇನ್ನಿತರ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವುದು. ಗೌಳಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಪ್ರಯತ್ನಿಸುವುದು. ಶಾಹಿ ಎಕ್ಸಪೋಟ್ರ್ಸ್ ಗಾರ್ಮೆಂಟ್ಸ್ ಕಾರ್ಖಾನೆಯನ್ನು ಶೀಘ್ರ ಪ್ರಾರಂಭಿಸಲಾಗುವುದು. ವಿಟಿಯು ಉನ್ನತೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು. ಅಳ್ನಾವರ-ಅಂಬೇವಾಡಿ ಪ್ಯಾಸೆಂಜರ್ ರೈಲು ಶೀಘ್ರ ಪ್ರಾರಂಭಿಸುವುದು. ನೇಗಿಲ ಯೋಗಿಯ ಹಿತ ಕಾಯುವ ದೃಷ್ಟಿಯಿಂದ ರೈತ ಬೆಳಕು ಎಂಬ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸುವುದು. ಹಳಿಯಾಳದ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು. ಮರಾಠಾ ಸಮುದಾಯವನ್ನು 3 ಬಿಯಿಂದ 2ಎ ವರ್ಗಕ್ಕೆ ಸೇರ್ಪಡೆಗೊಳಿಸುವುದು. ಹಳಿಯಾಳ ಕ್ಷೇತ್ರದ ವ್ಯಾಪ್ತಿಯಲ್ಲಿ ಐಟಿ-ಬಿಟಿ ಸ್ಪಾರ್ಟ್ ಆಪ್ ಪ್ರಾರಂಭಿಸಲು ಉತ್ತೇಜನ ನೀಡುವುದು. ಬಾಕಿಯಿರುವ ಪಂಪ್ ಸೆಟ್ ಗಳನ್ನು ಶೀಘ್ರ ಸಕ್ರಮಗೊಳಿಸುವುದು. ಕೃಷಿ ಕ್ಷೇತ್ರದ ಸಮಗ್ರ ವಿಕಾಸಕ್ಕೆ ಪೂರಕವಾಗುವಂತೆ ಕೃಷಿ/ತೋಟಗಾರಿಕಾ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಕ್ಷೇತ್ರದಲ್ಲಿ ಸ್ಥಾಪಿಸುವುದು. ಹಳಿಯಾಳದಲ್ಲಿ ಸುಸಜ್ಜಿತ ಸ್ಟೇಡಿಯಂ ನಿರ್ಮಿಸುವುದು. ಜೊಯಿಡಾ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಅನುಷ್ಟಾನಕ್ಕೆ ತರುವುದು. ರಾಮನಗರ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಮೊದಲಾದ ಭರವಸೆಗಳುಳ್ಳ ಪ್ರಣಾಳಿಕೆಯನ್ನು ದೇಶಪಾಂಡೆಯವರು ವಿವರಿಸಿದರು.
ಹಳಿಯಾಳ, ಜೊಯಿಡಾ ಮತ್ತು ದಾಂಡೇಲಿ ತಾಲೂಕುಗಳನ್ನು ಅಭಿವೃದ್ಧಿ ಕಾರ್ಯದಲ್ಲಿ ರಾಷ್ಟ್ರದಲ್ಲೆ ಮಾದರಿ ತಾಲೂಕುಗಳನ್ನಾಗಿಸಬೇಕೆಂಬ ಮಹತ್ವದ ಉದ್ದೇಶವನ್ನಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದು, ಮತತದಾರರು ತಮ್ಮ ಅಮೂಲ್ಯ ಮತ ನೀಡಿ ಕ್ಷೇತ್ರದ ಜನರ ಸೇವೆ ಮಾಡಲು ಅಮೂಲ್ಯ ಅವಕಾಶ ನೀಡುವಂತೆ ವಿನಂತಿಸಿದರು.
ಹಳಿಯಾಳ ತಾಲೂಕಿಗೆ 27 ಭರವಸೆಗಳು, ದಾಂಡೇಲಿ ತಾಲೂಕಿಗೆ 41 ಮತ್ತು ಜೊಯಿಡಾ ತಾಲೂಕಿಗೆ 42 ಭರವಸೆಗಳು ಸಚಿವ ದೇಶಪಾಂಡೆಯವರ ಪ್ರಣಾಳಿಕೆಯಲ್ಲಿ ಒಳಗೊಂಡಿದೆ.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳುಂಕೆ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಜೊಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ, ಪ್ರಸಾದ ದೇಶಪಾಂಡೆ, ಪ್ರಶಾಂತ ದೇಶಪಾಂಡೆ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
Leave a Comment