ಹಳಿಯಾಳ : ಹಳಿಯಾಳ ಜೋಯಿಡಾ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನಗೆ ಮತದಾರರು ನೀಡಿದ ತೀರ್ಪನ್ನು ಧನಾತ್ಮಕವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಮುಂದುವರೆಯಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸುನೀಲ್ ಹೆಗಡೆ ಹೇಳಿದರು. ಚುನಾವಣಾ ಫಲಿತಾಂಶದ ನಂತರ ಮಂಗಳವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಸುಮಾರು 30 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಹಾಗೂ ತಮ್ಮನ್ನು ಅಭಿವೃದ್ದಿಯ ಹರಿಕಾರ ಎಂದು ಕರೆದುಕೊಳ್ಳುವ ದೇಶಪಾಂಡೆ ಚುನಾವಣೆಯಲ್ಲಿ ಕೇವಲ 5 ಸಾವಿರ ಮತಗಳಿಂದ ಜಯ ಸಾಧಿಸಿದ್ದಾರೆ. ಇದು ಅವರ ತಾಂತ್ರಿಕ ಜಯವಾಗಿದೆ ಹೊರತು ಅದು ಜನರ ಜಯವಾಗಿಲ್ಲ ಎಂದ ಅವರು ಕಳೆದ ನಾಲ್ಕು ದಶಕಗಳ ಇತಿಹಾಸವನ್ನು ನೋಡಿದಾಗ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೇವಲ 7 ಸಾವಿರ ಮತಗಳನ್ನು ಪಡೆಯುತ್ತಿದ್ದರು. ಆದರೆ ಈ ಬಾರಿ ಇತಿಹಾಸದಲ್ಲಿಯೇ ಮೊದಲ ಬಾರಿ ಎಂಬಂತೆ 56 ಸಾವಿರಕ್ಕೂ ಅಧಿಕ ಮತಗಳು ಹರಿದು ಬಂದಿದ್ದು ಇದು ನಮಗೆ ಸಂದ ಜಯವಾಗಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ದೇಶಪಾಂಡೆ ಗೆದ್ದು ಸೋತಿದ್ದಾರೆ. ಆದರೆ ಬಿಜೆಪಿ ಮಾತ್ರ ಗೆಲುವು ಸಾಧಿಸಿದೆ ಎಂದ ಅವರು ಜನರು ದೇಶಪಾಂಡೆ ಅವರನ್ನು ವಿರೋಧಿಸಿದ್ದು ಸೃಷ್ಟವಾಗಿದೆ. ಮುಂದಿನ ದಿನಗಳಲ್ಲಿ ಬಲಿಷ್ಠ ವಿರೋಧ ಪಕ್ಷವಾಗಿ ಆಡಳಿತ ಪಕ್ಷವನ್ನು ಪ್ರತಿ ಹೆಜ್ಜೆಗೂ ಕಟ್ಟಿ ಹಾಕುತ್ತೇವೆ ಎಂದ ಅವರು, ದೇಶಪಾಂಡೆ ಮತ್ತು ಅವರ ಪಟಾಲಂ ಮುಂದಿನ ದಿನಗಳಲ್ಲಿ ತಮ್ಮ ಅಧಿಕಾರ ಬಲ, ತೋಳಬಲ ಮತ್ತು ಹಣಬಲವನ್ನು ಉಪಯೋಗಿಸಿಕೊಂಡು ಪಕ್ಷದ ಕಾರ್ಯಕರ್ತರು ಮತ್ತು ಸಾಮಾನ್ಯ ಜನರಿಗೆ ಅನವಶ್ಯಕವಾಗಿ ತೊಂದರೆ ನೀಡಲು ಮುಂದಾದರೇ ಅದರ ಪರಿಣಾಮವನ್ನು ಅವರು ಎದರಿಸಬೇಕಾಗುತ್ತದೆ. ಅಲ್ಲದೇ ಅಧಿಕಾರಿಗಳು ಸಹ ಕಾನೂನು ಕಟ್ಟಡೆಗಳನ್ನು ಬಿಟ್ಟು ದೇಶಪಾಂಡೆ ಆದೇಶ ಪಾಲಿಸಲು ಮುಂದಾದರೇ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದ ಅವರು ಇನ್ನೂ ಮುಂದೆ ದೇಶಪಾಂಡೆ ಅವರ ಅಂಧಾ ದರ್ಭಾರ ನಡೆಯಲು ಬಿಡುವುದಿಲ್ಲ ಎಂದು ಸೃಷ್ಟ ಪಡಿಸಿ, ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತಕ್ಕೆ ತಮ್ಮ ಬೆಂಬಲವಿದೆ ಎಂದು ಸಾರಿದರು. ಪಟ್ಟಣದಲ್ಲಿ ಅವ್ಯಾಹತ ಮತ್ತು ಕಾನೂನು ಬಾಹಿರವಾಗಿ ನಡೆಯುತ್ತಿರುವ ದನದ ಮಾಂಸ ಮಾರುಕಟ್ಟೆ ಹಾಗೂ ವಧಾ ಕೇಂದ್ರವನ್ನು ತಕ್ಷಣ ಬಂದ್ ಮಾಡಬೇಕು, ಅಲ್ಲದೇ ಪಟ್ಟಣದ ಎಲ್ಲಾ ಭಾಗಗಳಲ್ಲಿ ವ್ಯಾಪಾರ ನಡೆಸುತ್ತಿರುವ ಚಿಕನ್ ಅಂಗಡಿಗಳ ಮೇಲೆ ನಿಯಂತ್ರಣ ಸಾಧಿಸಿ ಅವರಿಗೆ ಪಟ್ಟಣದ ಹೊರ ಭಾಗದಲ್ಲಿ ಒಂದು ಕೇಂದ್ರವನ್ನು ಆರಂಭಿಸಿ ಪಟ್ಟಣದಲ್ಲಿ ಆರೋಗ್ಯ ಕಾಪಾಡಲು ಮುಂದಾಗುವಂತೆ ಮನವಿ ಮಾಡಿ, ಇದನ್ನು ಮಾಡಲು ತಾಲೂಕಾ ಮತ್ತು ಪೋಲಿಸ್ ಇಲಾಖೆ ಹಿಂದೇಟು ಹಾಕಿದರೇ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಮತ್ತು ಕಾನೂನು ಸಮರ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಗ್ರಾಮೀಣ ಭಾಗಗದಲ್ಲಿ ದೇಶಪಾಂಡೆ ಅವರು ಶಿವಾಜಿ ಪುತ್ಥಳಿಗಳನ್ನು ಸ್ಥಾಪಿಸಲು ಅಡ್ಡಿ ಪಡಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅವಕಾಶ ಕೋರಲಾಗುವುದು. ಕಾನೂನು ರೀತಿಯಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುವುದು. ಇದಕ್ಕೂ ದೇಶಪಾಂಡೆ ಅಡ್ಡಿ ಪಡಿಸಿದರೇ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ಮುಂದಿನ ಅನಾಹುತಗಳಿಗೆ ದೇಶಪಾಂಡೆ ಅವರೇ ಹೊಣೆಗಾರರಾಗಲಿದ್ದಾರೆ. ಚುನಾವಣೆಯ ಸಮಯದಲ್ಲಿ ಮುಸ್ಲಿಂ ಸಮುದಾಯದವರು ಬಹಿರಂಗವಾಗಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ್ ಸೂಚಿಸಿರುವುದು ಕಾನೂನು ಬಾಹಿರವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಇದನ್ನು ಗಂಬೀರವಾಗಿ ಪರಿಗಣಿಸಲಿದ್ದು, ಇದು ಕಾಂಗ್ರೇಸ್ ಪಕ್ಷಕ್ಕೆ ತಿರುಗುಬಾಣವಾಗಲಿದೆ ಎಂದ ಅವರು, ಬಿಜೆಪಿ ಎಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ ಎಂದರು. ಹಳಿಯಾಳ ಪಟ್ಟಣವನ್ನು ಸಿಂಗಾಪೂರವನ್ನಾಗಿ ಮಾಡುತ್ತೇನೆ ಎಂದು ವಾದ್ದಾನ ಮಾಡಿದ್ದ ದೇಶಪಾಂಡೆ ಅವರ ನೆರಳಿನಲ್ಲಿಯೇ ಪಟ್ಟಣದ ಪುರಸಭೆಯಲ್ಲಿ ಬೃಷ್ಟಾಚಾರ ತಾಂಡವಾಡುತ್ತಿದೆ. ಪುರಸಭೆಯ ಸದಸ್ಯರು ದಲ್ಲಾಳಿಗಳಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಾನು ಶಾಸಕನಾದ ಅವಧಿಯಲ್ಲಿ ಮಂಜೂರಾದ ಪಟ್ಟಣಕ್ಕೆ 24 ಗಂಟೆಗಳ ಕಾಲ ಕುಡಿಯುವ ನೀರು ಪೊರೈಕೆಯ ಯೋಜನೆಯನ್ನು ಇದೀಗ ಅವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಅಲ್ಲದೇ ಯೋಜನೆಯ ಹೆಸರಿನಲ್ಲಿ ಭಾರೀ ಬ್ರಷ್ಟಾಚಾರ ನಡೆದಿದ್ದು ಇದರ ತನಿಖೆಗಾಗಿ ಸೂಕ್ತ ದಾಖಲೆ ಪತ್ರಗಳ ಸಮೇತ ಹೋರಾಟ ನಡೆಸುವುದಾಗಿ ಸೃಷ್ಟ ಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಿವಾಜಿ ನರಸಾನಿ, ಅನಿಲ್ ಮುತ್ನಾಳೆ, ತುಕಾರಾಮ ಪಟ್ಟೇಕಾರ, ಪ್ರಕಾಶ ಕೋರವರ, ನಾರಾಯಣ ಬೆಳಗಾಂವಕರ, ಅಪ್ಪು ಚರಂತಿಮಠ, ಸಿದ್ದು ಶೆಟ್ಟಿ, ಅನಿಲ್ ಗಿರಿ, ಯಲ್ಲಪ್ಪಾ ಸಾಣಿಕೊಪ್ಪ, ಸಂತಾನ ಸಾವಂತ ಮತ್ತೀತರರು ಹಾಜರಿದ್ದರು.
Leave a Comment