ಹಳಿಯಾಳ ;- ಸರಿಯಾದ ಸಮಯದಲ್ಲಿ ತಾಲೂಕಿನ ರೈತರಿಗೆ ಉತ್ತಮ ತಳಿ ಹಾಗೂ ಇಳುವರಿಯನ್ನು ನೀಡುವಂತಹ ಬಿತ್ತನೆಯ ಬೀಜಗಳನ್ನು ಪೊರೈಕೆ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ನೂರಾರು ರೈತರು ಪಟ್ಟಣದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಇಗಾಗಲೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ರೈತರು ಕೃಷಿ ಜಮೀನುಗಳನ್ನು ಸ್ವಚ್ಚ ಮಾಡಿ ಬೀಜಗಳನ್ನು ಬಿತ್ತನೆ ಮಾಡಲು ತಯಾರಿದ್ದು ಈ ಸಮಯದಲ್ಲಿ ಉತ್ತಮ ಇಳುವರಿ ಮತ್ತು ಹೆಚ್ಚು ಫಸಲು ಬರುವ ಗೋವಿನ ಜೋಳ ಮತ್ತು ಭತ್ತದ ಬೀಜಗಳನ್ನು ಪೊರೈಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಸಮೂಹ ಹಳಿಯಾಳ ಹೋಬಳಿಯ ವ್ಯಾಪ್ತಿಗೆ ಬರುವ ಪಟ್ಟಣದ ಕೃಷಿ ಇಲಾಖೆಯ ಪರಿಸರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಆದಷ್ಟು ಬೇಗನೆ ಉತ್ತಮ ತಳಿಯ ಬೀಜಗಳನ್ನು ಪೊರೈಸುವಂತೆ ಆಗ್ರಹಿಸಿದರು. ಡಿಕೆಸಿ ಗೋವಿನಜೋಳದ ಬೀಜಗಳು ಉತ್ತಮವಾಗಿದ್ದು ಇಳುವರಿಯು ಚೆನ್ನಾಗಿದೆ. ಅಂತಹ ಕಂಪನಿಯ ಬೀಜಗಳನ್ನು ಪೊರೈಕೆ ಮಾಡುವ ಬದಲು ಸಿಪಿಸಿ ಹೆಸರಿನ ಬೀಜಗಳನ್ನು ಪೊರೈಕೆ ಮಾಡಲು ಕೃಷಿ ಇಲಾಖೆ ಉತ್ಸುಕವಾಗಿದೆ. 4 ಕೆಜಿ ಗೋವಿನ ಜೋಳದ ಚೀಲಕ್ಕೆ ಮಾರುಕಟ್ಟೆ ಬೆಲೆ 1200 ಆಗಿದ್ದು, ಇದನ್ನು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಕೃಷಿ ಇಲಾಖೆಯ ಮೂಲಕ 5 ಕೆಜಿ ತೂಕದ ಒಂದು ಚೀಲಕ್ಕೆ 1050 ರೂ ಆಗಿದ್ದು ಇದರಿಂದ ರೈತರಿಗೆ ಆರ್ಥಿಕವಾಗಿ ಉಳಿತಾಯ ಮತ್ತು ಉತ್ತಮ ಬೀಜಗಳು ಸಿಗುವ ವಿಶ್ವಾಸ ವ್ಯಕ್ತವಾಗುತ್ತದೆ. ಆದರೆ ಇಲ್ಲಿಯ ಕೃಷಿ ಇಲಾಖೆಯ ಅಧಿಕಾರಿಗಳು ಬೀಜಗಳನ್ನು ಪೊರೈಸುವ ಕಂಪನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಇಲ್ಲಿಯ ವಾತಾವರಣಕ್ಕೆ ಒಗ್ಗದ ಹಾಗೂ ಹೆಚ್ಚು ಇಳುವರಿಯನ್ನು ನಿರೀಕ್ಷೆ ಮಾಡದಂತಹ ಸಿಪಿಸಿ ಹೆಸರಿನ ಗೋವಿನ ಜೋಳದ ಬೀಜಗಳನ್ನು ವಿತರಣೆ ಮಾಡಲು ಮುಂದಾಗಿದ್ದಾರೆ ಎಂದು ರೈತರು ಆಕ್ರೋಶಭರಿತರಾಗಿ ಆರೋಪಿಸಿದರು. ರೈತರನ್ನು ನಿಯಂತ್ರಿಸುವುದಕ್ಕಾಗಿ ಪೋಲಿಸರು ಆಗಮಿಸುವಂತಹ ಪರಿಸ್ಥಿತಿಯು ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ಮಾತನಾಡಿ, ಮಳೆಗಾಲದ ಮುಂಚೆಯೇ ಕಳೆದ ಬಾರಿಯ ಬಿತ್ತನೆ ಮಾಡಿದ ಭೂಮಿಯ ಪ್ರಮಾಣವನ್ನು ಅಂದಾಜು ಮಾಡಿ ಮೊದಲೇ ಬೀಜಗಳ ಪೊರೈಕೆಗಾಗಿ ಆದೇಶ ನೀಡಲಾಗುತ್ತದೆ. ಆದರೆ ಇದೀಗ ರೈತರು ಡಿಕೆಸಿ ಗೋವಿನಜೋಳದ ಬೀಜಗಳಿಗಾಗಿ ಬೇಡಿಕೆ ಸಲ್ಲಿಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅವುಗಳನ್ನು ತಾಲೂಕಿನ ಮುರ್ಕವಾಡ, ಸಾಂಬ್ರಾಣಿ, ದಾಂಡೇಲಿ ಮತ್ತು ಹಳಿಯಾಳ ಹೋಬಳಿಗಳ ಮೂಲಕ ಪೊರೈಸಲಾಗುವುದೆಂದರು.
Leave a Comment