ಹಳಿಯಾಳ:- ಪೋಲಿಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಕೆಲವು ವರ್ಷಗಳ ಹಿಂದೆ ಸ್ಥಗೀತಗೊಂಡಿದ್ದ ಓಸಿ(ಮಟಕಾ) ದಂಧೆ ಈಗ ಮತ್ತೇ ಕೆಲವು ವರ್ಷಗಳಿಂದ ಪಟ್ಟಣದಲ್ಲಿ ಸದ್ದಿಲ್ಲದೇ ಹೈಟೆಕ್ ಮಾದರಿಯಲ್ಲಿ ನಡೆಯುತ್ತಿದ್ದು ಓಸಿ ಆಟಕ್ಕೆ ಈಗ ಮೊಬೈಲ್ ಫೊನ್ಗಳೇ ಸೇತುವೆಯಾಗಿರುವುದು ಗುಟ್ಟಾಗಿ ಉಳಿದಿಲ್ಲ. ಪಕ್ಕದ ಮಹಾರಾಷ್ಟ್ರ ರಾಜ್ಯದ ಮುಂಬಯಿಯಲ್ಲಿ ಜನಪ್ರಿಯಗೊಂಡಿರುವ ಮಟಕಾ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಜನಪ್ರೀಯವಾಗಿದೆ. ಕಾಲ ಬದಲಾದಂತೆ ತನ್ನ ವಹಿವಾಟು ಆಡುವ ವಿಧಾನವನ್ನು ಬದಲಾಯಿಸಿಕೊಂಡಿರುವ ಇವರಿಗೆ ಈಗ ಪೆನ್ನು ಪಟ್ಟಿ ಬೆಕೆಂದಿಲ್ಲ ಕೇವಲ ಅಂಡ್ರಾಯ್ಡ್ ಸ್ಮಾರ್ಟ ಫೊನ್ ಇದ್ದರೇ ಸಾಕು. ಗ್ರಾಹಕರಿಗೆ ಮಟಕಾ ಆಡಲು, ಮಟಕಾ ಥೇರಿಯನ್ನು ತಿಳಿಸುವ ಚಾರ್ಟನ್ನು ವೀಕ್ಷಿಸುವ, ಮೊಬೈಲ್ ಮೂಲಕ ಹಣ ಕಟ್ಟುವ ಕ್ಯಾಶಲೆಸ್ ಸಿಸ್ಟಮ್ ಅಳವಡಿಸಿ ಕೊಂಡ ವಿಶೇಷ ಸತ್ತಾ-ಮಟಕಾ ಅಪ್ಲಿಕೆಷನ್, ವೆಬ್ ಸೈಟಗಳು, ವ್ಯಾಟ್ಸಪ್ಗಳು ಭಾರಿ ಪ್ರಮಾಣದಲ್ಲಿ ಪ್ರಾರಂಭವಾಗಿವೆ. ಈ ಹೊಸ ತಂತ್ರಜ್ಞಾನವನ್ನು ಬಳಸಿ ಹಳಿಯಾಳದಲ್ಲೂ ಮಟಕಾ ನಡೆದಿದೆ. ಪೋಲಿಸರು ದಾಳಿ ನಡೆಸಿದರೂ ಯಾವುದೇ ಮಾಹಿತಿ ಕುರುಹು ಸಿಗದಿರುವ ರೀತಿಯಲ್ಲಿ ಈಗ ಮಟಕಾ ಚೀಟಿಯನ್ನು ಬರೆಯುವಂತಹ ವಿಧಾನ ತಾಲೂಕಿನಲ್ಲಿ ಚಾಲ್ತಿಯಲ್ಲಿದೆ. ಗ್ರಾಹಕರು ಹೇಳಿದ ಸಂಖ್ಯೆ ಹಾಗೂ ಅದಕ್ಕೆ ಬಾಜಿಯಿಟ್ಟ ಹಣದ ಮೊತ್ತವನ್ನು ಮೊಬೈಲ್ ಮೂಲಕ ತಮ್ಮ ಕೇಂದ್ರಗಳಿಗೆ ಸಂದೇಶವನ್ನು ರವಾನಿಸಿ, ಗ್ರಾಹಕರು ಬಯಸಿದರೇ ಅವರಿಗೆ ಮಟಕಾ ಚೀಟಿಯನ್ನು ನೀಡುತ್ತಾರೆ. ಹಿಂದೇ ಕೇವಲ ಗೂಡಂಗಡಿಗಳಲ್ಲಿ ಮಾತ್ರ ಸೀಮಿತವಾಗಿದ್ದ ಮಟಕಾ ಈಗ ಸಾರ್ವಜನಿಕರು ಹೇಳುವಂತೆ ಸ್ಟೇಷನರಿ, ಜವಳಿ, ರೆಡಿಮೆಡ್ ಬಟ್ಟೆ, ಗಾಧಿ ಮಾರಾಟಗಾರರು, ಕೋಲ್ಡ್ರಿಂಕ್ಸ್ ಅಂಗಡಿಗಳಲ್ಲೂ ಓಸಿಯನ್ನು ಬರೆದು ಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪೀಶ್ ಮಾರ್ಕೇಟ್ ಸರ್ಕಲ್, ಚರ್ಚ ರಸ್ತೆ ಕ್ರಾಸ್, ಶಿವಾಜಿ ವೃತ, ಯಲ್ಲಾಪುರ ರಸ್ತೆ, ವಿ.ಆರ್.ಡಿ ರಸ್ತೆ, ಮುಖ್ಯಬೀದಿ, ಸರ್ಕಾರಿ ತಾಲೂಕಾ ಆಸ್ಫತ್ರೆ ರಸ್ತೆ, ಬಸ್ ಸ್ಟ್ಯಾಂಡ ರಸ್ತೆ, ಅರ್ಬನ್ ಬ್ಯಾಂಕ್ ಸರ್ಕಲ, ಹೆಸ್ಕಾಂ ರಸ್ತೆ ಮೊದಲಾದೆಡೆ ಮಟಕಾ ವ್ಯಾಪಕವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಪಟ್ಟಣದ ಕೆಲ ಗೂಡಂಗಡಿಗಳಲ್ಲಿ ಮಟಕಾ ಚೀಟಿ ಸ್ವೀಕರಿಸಲು ಹಾಗೂ ಮಟಕಾ ಬುಕ್ಕಿ ಆಗಲು ನಡೆದ ಫೈಪೋಟಿ, ಗ್ರಾಹಕರಿಗೆ ಪಾವತಿಸಬೇಕಾಗಿದ್ದ ಪೇಮೆಂಟ್ ನೀಡುವಲ್ಲಿ ವಿಳಂಭ, ಗ್ರಾಹಕರಿಗೆ ವಂಚನೆ ಇತ್ಯಾಧಿ ಒಳಜಗಳವು ಬೀದಿಗೆ ಬಂದ ಕಾರಣ ಗುಪ್ತವಾಗಿ ನಡೆಯುತ್ತಿದ್ದ ಮಟಕಾ ಆಟ ಈಗ ಬಯಲಾಗಿದೆ.
ದಾಳಿ ಪ್ರಕರಣ ದಾಖಲು :- ವ್ಯಾಪಕ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಸಿ.ಪಿ.ಐ ಎಸ್.ಹೊಳೆಣ್ಣನವರ ಹಾಗೂ ಪಿ.ಎಸ್.ಐ ಆನಂದಮೂರ್ತಿ ನೇತ್ರತ್ವದ ಪೋಲಿಸರು ತಂಡವು ಪಟ್ಟಣದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಮಟಕಾ ಬುಕ್ಕಿಗಳನ್ನು ಹಾಗೂ ಮಟಕಾ ಬರೆಯುತ್ತಿದ್ದವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 14685ರೂ, ಮಟಕಾ ಆಟಕ್ಕೆ ಬಳಸಿದ ಏಳು ಮೊಬೈಲಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಗಾಧಿ ಮಾರಾಟದ ಅಂಗಡಿಯನ್ನು ನಡೆಸುತ್ತಿದ್ದ ದಾದಾಪೀರ ನದಾಪ ಇವನ ಬಳಿ 5990ರೂ ಹಾಗೂ ವಹಿವಾಟಕ್ಕೆ ಬಳಸುತ್ತಿದ್ದ ಮೂರು ಮೊಬೈಲಗಳು, ಗೂಡಂಗಡಿಯನ್ನು ನಡೆಸುತ್ತಿದ್ದ ಪಿ.ಎ.ಡಿಸೋಜ ಬಳಿ 2295ರೂ ಹಾಗೂ ಎರಡು ಮೊಬೈಲ್, ಆರ್.ಎಮ್.ಜಾವಳೆಕರ ಬಳಿ 6400ರೂ ಮತ್ತು 2 ಮೊಬೈಲಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಬುಕ್ಕಿಗಳಾದ ಜಾಕೀರ ಸನ್ನಿಧಿ ಹಾಗೂ ಕಲಘಟಗಿಯ ಶ್ರೀಕಾಂತ ಕದಂ ಮೇಲೆ ಪ್ರಕರಣ ದಾಖಲಾಗಿದ್ದು ಇವರಿಗಾಗಿ ಹುಟುಕಾಟ ನಡೆದಿದ್ದು ಇನ್ನೂಳಿದ ಬಂಧಿತ ಮೂವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
Leave a Comment