ಹಳಿಯಾಳ:- ಹಳಿಯಾಳ ಪುರಸಭೆಯ ಆಡಳಿತ ವೈಖರಿಯ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮುಖ್ಯಾಧಿಕಾರಿ ಸರ್ಕಾರದ ಯೋಜನೆ ಅನುಷ್ಟಾನದಲ್ಲಿ ಕಾಳಜಿ ವಹಿಸಬೇಕು ಅಲ್ಲದೇ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಿ, ಹಿರಿಯ ಅಧಿಕಾರಿಗಳು ತಮ್ಮ ಅಧಿನದ ಇಲಾಖೆಗಳ ಮೇಲ್ವಿಚಾರಣೆಯನ್ನು ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಪ್ರಥಮ ಕೆ.ಡಿ.ಪಿ ಸಭೆಯಲ್ಲಿ ಸಚಿವ ಆರ್.ವಿ.ದೇಶಪಾಂಡೆ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿ ಪುರಸಭೆ ಅಧಿಕಾರಿಗಳು, ಹಳಿಯಾಳ, ದಾಂಡೇಲಿ ಪೌರ ಸಂಸ್ಥೆಯ ಅಧಿಕಾರಿಗಳ ಮೇಲೆ ಹರಿಹಾಯ್ದರಲ್ಲದೇ ಲ್ಯಾಂಡ್ ಆರ್ಮಿ, ಪಿ.ಎಮ್.ಜಿ.ಎಸ್.ವೈ ಇಲಾಖೆ, ಬಿ.ಸಿ.ಎಮ್ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದಿದ್ದರೇ ಕಠಿಣ ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಸಿದರು. ಆಶ್ರಯ ಫಲಾನುಭಿವಗಳ ಆಯ್ಕೆಯಲ್ಲಿ ಹಿಂದಿನ ಬಾರಿ ಭ್ರಷ್ಟಾಚಾರ ನಡೆದಿದ್ದು ನನ್ನ ಗಮನಕ್ಕೆ ಬಂದಿದೆ ಹಿಂದಿನದನ್ನು ಈಗ ಕೆದಕಲು ಹೋಗುವುದಿಲ್ಲ, ಇನ್ನೂ ಮುಂದಾದರೂ ಯೋಜನೆಯ ಅನುಷ್ಟಾನ ಪಾರದರ್ಶಕವಾಗಲಿ ಎಂದ ಅವರು ಇನ್ನೂ ಜನ ಆಶ್ರಯ ಮನೆಗಾಗಿ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆಂದರೆ ಫಲಾನುಭವಿಗಳ ಆಯ್ಕೆ ಸರಿಯಾಗಿ ನಡೆಯುತ್ತಿಲ್ಲ ಎಂದರ್ಥ ಎಂದು ಬೇಸರದಿಂದ ನುಡಿದ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಪಿ.ಡಿ.ಒ ಹಾಗೂ ಕಾರ್ಯದರ್ಶಿಗಳನ್ನು ಎದ್ದು ನಿಲ್ಲಿಸಿ ಸರ್ಕಾರದ ನಿಯಮಾವಳಿ ಅನುಸರಿಸಿ ಫಲಾನುಭವಿಗಳ ಆಯ್ಕೆ ನಡೆಸುವಂತೆ ಸೂಚಿಸಿದರು. ಹಳಿಯಾಳ ಆಸ್ಫತ್ರೆಯಲ್ಲಿ ಸಣ್ಣಪುಟ್ಟ ಪ್ರಕರಣಗಳನ್ನು ಹುಬ್ಬಳ್ಳಿ ಧಾರವಾಡಕ್ಕೆ ಕಳಿಸುವುದೇಕೆ ಎಂದು ವೈದ್ಯಾಧಿಕಾರಿಗಳಿಗೆ ಪ್ರಶ್ನಿಸಿದ ಸಚಿವರು ಹಳಿಯಾಳ ಆಸ್ಫತ್ರೆಯಲ್ಲಿ ಬಾಣಂತಿಯರ ಚಿಕಿತ್ಸೆ ಜನನ ಪ್ರಮಾಣದ ಮಾಹಿತಿಯನ್ನು ಕೇಳಿ ತಾಲೂಕಿನ ಜನತೆಗೆ ಉತ್ತಮ ವೈದ್ಯಕೀಯ ಸೌಲಭ್ಯ ದೊರಕಲಿ ಎಂಬ ಸದುದ್ದೇಶದಿಂದ ಸರ್ಕಾರ ಹಾಗೂ ಖಾಸಗಿ ಉದ್ದಿಮೆಗಳ ನೆರವಿನಿಂದ ಸಾಕಷ್ಟು ಸೌಲಭ್ಯಗಳನ್ನು ಸ್ಥಳೀಯ ಆಸ್ಫತ್ರೆಗೆ ನೀಡಿದ್ದೆನೆ ಆದರೂ ಇಲ್ಲಿ ಸರಿಯಾಗಿ ಚಿಕಿತ್ಸೆಯನ್ನು ನೀಡುತ್ತಿಲ್ಲ ಎಂಬ ದೂರು ಕೇಳಿ ನೋವಾಗುತ್ತಿದೆ ಎಂದ ಅವರು ವೈದ್ಯಕೀಯ ವಿಭಾಗದಲ್ಲಿ ವ್ಯವಸ್ಥಿತ ಜಾಲವೊಂದಿದ್ದು ಅದಕ್ಕಾಗಿ ಇಲ್ಲಿ ದಾಖಲಾಗುವ ರೋಗಿಗಳನ್ನು ಧಾರವಾಡ ಹುಬ್ಬಳ್ಳಿ ಖಾಸಗಿ ಆಸ್ಫತ್ರೆಗೆ ದಾಖಲಿಸಲು ಶಿಪಾರಸ್ಸು ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದ್ದು ರೋಗಿಗಳೊಂದಿಗೆ ವೈದ್ಯರು ಸಿಬ್ಬಂದಿಗಳು ಸೌಜನ್ಯತೆಯಿಂದ ಪ್ರೀತಿಯಿಂದ ನಡೆದು ಕೊಳ್ಳಿ, ಮತ್ತೇ ಸಾರ್ವಜನಿಕರಿಂದ ನನಗೆ ದೂರು ಬರದಂತೆ ನೋಡಿಕೊಳ್ಳಿ ನನ್ನ ತಾಳ್ಮೆಯನ್ನು ಪರಿಕ್ಷೀಸಬೇಡಿ ಸಾರ್ವಜನಿಕರ ವಿಷಯದಲ್ಲಿ ಅಧಿಕಾರಿಗಳು ಎಡವಿದರೇ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಸರ್ಕಾರದ ಯೋಜನೆಗಳ ಅನುಷ್ಟಾನದಲ್ಲಿ ನಿಷ್ಕಾಳಜಿ, ಅನಗತ್ಯ ವಿಳಂಭ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ನೀಡುವ ಅಧಿಕಾರಿಗಳ ಸಿಬ್ಬಂದಿಗಳ ಪರಿಸ್ಥಿತಿಯೂ ಮುಂದೇ ಗಂಭೀರವಾಗಲಿದೆ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸದೆ ಇದ್ದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಆದ ಕಾರಣ ಜಾಗೃತೆಯಿಂದ ಕಾರ್ಯನಿರ್ವಹಿಸಿರಿ ಎಂದು ಖಡಕ್ ಎಚ್ಚರಿಕೆ ನೀಡಿದರು. ವಿ.ಪ ಸದಸ್ಯ ಎಸ್.ಎಲ್.ಘೋಟ್ನೇಕರ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣ ಪಾಟೀಲ, ಮಹೇಶ್ವರಿ ಮಿಶಾಳೆ, ಲಕ್ಷ್ಮಿ ಕೋರ್ವೆಕರ, ತಾ.ಪಂ ಅಧ್ಯಕ್ಷೆ ರೀಟಾ ಸಿದ್ಧಿ, ಪುರಸಭಾ ಅಧ್ಯಕ್ಷ ಶಂಕರ ಬೆಳಗಾಂವಕರ, ದಾಂಡೇಲಿ ನಗರ ಸಭೆ ಅಧ್ಯಕ್ಷ ನಾಗೇಶ ಸಾಳುಂಕೆ, ಇತರರು ಇದ್ದರು.
Leave a Comment