ಹಳಿಯಾಳ: ಯಾವುದೇ ಸರಿಯಾದ ಮಾಹಿತಿ, ದಾಖಲೆ ಇಲ್ಲದೇ ಅನವಶ್ಯಕವಾಗಿ ಪುರಸಭೆಯ ಮೇಲೆ ಮಾಜಿ ಶಾಸಕ ಸುನೀಲ್ ಹೆಗಡೆ ಇಲ್ಲ ಸಲ್ಲದ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದು ಹೀಗೆ ಮುಂದುವರೆದರೇ ಇದರ ಪರಿಣಾಮ ಸರಿ ಇರುವುದಿಲ್ಲ ಎಂದು ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಮಾಜಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.ಪುರಸಭೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುರಸಭೆಯ ಆಡಳಿತ ಮಂಡಳಿಯು ಅಧಿಕಾರಿ ವರ್ಗದವರ ಮೇಲೆ ಹಿಡಿತವನ್ನು ಸಾಧಿಸಿ ಉತ್ತಮ ಆಡಳಿತ ನೀಡುತ್ತಿದೆ. ಅಲ್ಲದೇ ರಾಜ್ಯದಲ್ಲಿಯೇ ಪುರಸಭೆಯು ಉತ್ತಮ ಕಾರ್ಯಗಳಿಂದ ಗಮನವನ್ನು ಸೆಳೆದಿದೆ. ಇದನ್ನು ಸಹಿಸದ ಹಾಗೂ ಮುಂದಿನ ದಿನಗಳಲ್ಲಿ ಪುರಸಭೆಯ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ದೃಷ್ಠಿಯಿಂದ ಕಾಂಗ್ರೇಸ್ ಆಡಳಿತದಲ್ಲಿರುವ ಪುರಸಭೆಯ ಬಗ್ಗೆ ಮಾಜಿ ಶಾಸಕ ಹೆಗಡೆ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದು ಹಳಿಯಾಳ ಪುರಸಭೆಯ ಅಧಿಕಾರವನ್ನು ಯಾವುದೇ ಕಾರಣಕ್ಕೂ ಜನತೆ ಅವರ ಕೈಗೆ ನೀಡುವುದಿಲ್ಲ ಎಂದು ಹೇಳಿದರು. ಪುರಸಭೆಯಲ್ಲಿ ಬೃಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪಿಸಿರುವ ಅವರು, ಈ ಹಿಂದೇ ಮೋತಿಕೆರೆಯ ಅಭಿವೃದ್ದಿಯ ಕಾಮಗಾರಿಯಲ್ಲಿ ಲಕ್ಷಾಂತರ ರೂಗಳನ್ನು ನುಂಗಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಆರೋಪಿಸಿ ಪುರಸಭೆಯ ಸದಸ್ಯರು ಜನರ ಸೇವೆಯಲ್ಲಿ ನಿರತರಾಗಿದ್ದು ಯಾವುದೇ ರೀತಿಯಲ್ಲಿ ದಲ್ಲಾಳಿಗಳಂತೆ ವರ್ತನೆ ಮಾಡುತ್ತಿಲ್ಲ. ಪಟ್ಟಣದಲ್ಲಿರುವ ಮೀನು ಮತ್ತು ಚಿಕನ್ ಮಾರಾಟಗಾರರಿಗೆ ಅನುಕೂಲವಾಗುವಂತೆ ಮಾಡಲು ಮುಂದಿನ ಕೆಲವೇ ದಿನಗಳಲ್ಲಿ ಪುರಸಭೆಯು ನೂತನ ಕಟ್ಟಡ ನಿರ್ಮಿಸಿ ಅವರಿಗೆ ನೇರವಾಗಲಿದೆ. ಅಲ್ಲದೇ ಒಣ ಮೀನು ಮಾರಾಟ ಮಾಡುವವರಿಗೆ ಅದರಲ್ಲಿ ಅವಕಾಶ ನೀಡಲಾಗುವುದೆಂದರು. ಸ್ವಚ್ಚತಾ ಆಂದೋಲನದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಸೃಷ್ಟ ಪಡಿಸಿದ ಅಧ್ಯಕ್ಷರು, ಇದನ್ನು ತಹಶೀಲದಾರ ನಿಯಂತ್ರಿಸುತ್ತಾರೆ ಅದು ಸುನೀಲ್ ಅವರ ಗಮನಕ್ಕೆ ಇಲ್ಲವೇ ಎಂದ ಬೆಳಗಾಂವಕರ ಪುರಸಭೆಯು ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ನೀಡುತ್ತಿದೆ ಹೆಗಡೆ ಅವರು ಹೀಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯ ಸುರೇಶ ತಳವಾರ, ಸತ್ಯಜೀತ ಗಿರಿ ಮತ್ತು ಫಯಾಜ್ ಶೇಖ ಇದ್ದರು.
Leave a Comment