ಹಳಿಯಾಳ:- ರಾಜ್ಯದ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಪ್ರಸ್ತುತ ಅನುಸರಿಸುತ್ತಿರುವ ಮಾನವ ಆಧಾರಿತ ಸಾಂಪ್ರದಾಯ ಸರ್ವೆ ಕಾರ್ಯದಲ್ಲಿ ಆಗುತ್ತಿದ್ದ ವಿಳಂಬ ಮತ್ತು ಗೋಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸರ್ವೆ ಅಪ್ ಇಂಡಿಯಾ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಡ್ರೋನ್ ಆಧಾರಿತ ಭೂಮಿ ಮತ್ತು ಆಸ್ತಿ ಸರ್ವೆಯನ್ನು ಪ್ರಾಯೋಗಿಕವಾಗಿ ನಡೆಸಲು ತಿರ್ಮಾನಿಸಲಾಗಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಚಿವ ದೇಶಪಾಂಡೆಯವರು ಸರ್ವೆ ಕಾರ್ಯ ನಡೇಯಬೇಕು ಆದರೆ ಪ್ರಸ್ತುತ ಅನುಸರಿಸುತ್ತಿರುವ ವಿಧಾನಗಳಿಂದ ಬಹಳಷ್ಟು ವಿಳಂಬ ಮತ್ತು ಗೊಂದಲವಾಗುತ್ತಿದ್ದು ಮತ್ತು ಮಾನವ ಆಧಾರಿತ ಸರ್ವೆ ನಿಯಮದಿಂದ ಭೂಮಾಪಕರ ವಿವೇಚನೆಯಂತೆ ಸರ್ವೆ ಕಾರ್ಯ ನಡೆಯುತ್ತಿತ್ತು. ಅಲ್ಲದೆ ಸ್ಪಷ್ಟತೆ ಹಾಗೂ ನಿಖರತೆಯಲ್ಲಿ ಸಹ ಗೊಂದಲವಾಗಿತ್ತು ಈ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಈ ಡ್ರೋನ್ ಆಧಾರಿತ ಸರ್ವೆ ನಡೆಸಲು ಉದ್ದೇಶಿಸಲಾಗಿದೆ ಎಂದರು. ಈಗಾಗಲೇ ಬೆಂಗಳೂರಿನ ಜಯನಗರದ ಸುಮಾರು 4000 ಆಸ್ಥಿಗಳ ಸರ್ವೆ ಕಾರ್ಯವನ್ನು ಈ ವಿಧಾನವನ್ನು ಅನುಸರಿಸಿ ಮಾಡಲಾಗಿದ್ದು ಪ್ರಸ್ತುತ ರಾಮನಗರ ಮತ್ತು ಸುತ್ತಮುತ್ತಲಿನ ಕೃಷಿ ಪ್ರದೇಶಗಳ ಡ್ರೋನ್ ಆಧಾರಿತ ಸರ್ವೆ ಕಾರ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದಿನಾಂಕ 16-07-2018ರಂದು ಚಾಲನೆ ನೀಡಲಿದ್ದಾರೆಂದು ಅವರು ತಿಳಿಸಿದರು. ಡ್ರೋನ್ ಆಧಾರಿತ ಸರ್ವೆಯಿಂದಾಗಿ 2 ತಿಂಗಳಲ್ಲಿ ಮಾಡಬಹುದಾದ ಕೇಲಸವನ್ನು ಕೇವಲ 2 ದಿನಗಳಲ್ಲಿ ಮಾಡಬಹುದಾಗಿದೆ ಮತ್ತು ಭೂಮಾಪಕರ ವಿವೇಚನೆಗೆ ಇಲ್ಲಿ ಅವಕಾಶವಿಲ್ಲದ್ದರಿಂದ ಮತ್ತು ಮಾನವ ಹಸ್ತಕ್ಷೇಪ ಇಲ್ಲದಿರುವುದರಿಂದ ಹೆಚ್ಚು ಸ್ಪಷ್ಟತೆ ಹಾಗೂ ನಿಖರತೆಯೂ ಇರುತ್ತದೆ. ಜೊತೆಗೆ ವೆಚ್ಚವು ಸಹ ಗಣನಿಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಎಂದ ಅವರು ರಾಜ್ಯದಲ್ಲಿ ಸುಮಾರು 2.5 ಕೋಟಿ ಕೃಷಿ ಜಮೀನುಗಳು ಹಾಗೂ 50 ಲಕ್ಷ ನಗರ ಆಸ್ತಿಗಳಿದ್ದು, ಡ್ರೋನ್ ಆಧಾರಿತ ಪ್ರಾಯೋಗಿಕ ಸರ್ವೆ ಕಾರ್ಯದ ಯಶಸ್ಸನ್ನು ಆಧರಿಸಿ ರಾಜ್ಯದ್ಯಾದಂತ ಈ ವಿಧಾನ ಸರ್ವೆ ಕಾರ್ಯ ನಡೆಸುವ ಆಶಾ ಭಾವನೆ ಹೊಂದಿದ್ದು ಈ ಕಾರ್ಯ ಯಶಸ್ವಿಯಾದಲ್ಲಿ ರಾಜ್ಯದ ಸರ್ವೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
Leave a Comment