ಹಳಿಯಾಳ:- ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ರಾಜ್ಯದ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿ ಸಾಕಷ್ಟು ಭಾಗ್ಯಗಳನ್ನು ನೀಡಿ ಜನಪರ ಕೆಲಸ ಮಾಡಿತ್ತು ಆದರೇ ಜನರು ಅಭಿವೃದ್ದಿ ಪರವಾಗಿಲ್ಲದಿರುವುದು ಬೇಸರವನ್ನುಂಟು ಮಾಡಿದೆ ಎಂದು ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ರಾಜ್ಯದ ಹಿರಿಯ ಕಾಂಗ್ರೇಸ್ ಮುಖಂಡ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು. ಭಾನುವಾರ ಪಟ್ಟಣದ ಬಾಬು ಜಗಜ್ಜೀವನರಾಮ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅರಣ್ಯದ ಅಂಚಿನಲ್ಲಿರುವ ಪರಿಶಿಷ್ಠ ವರ್ಗದ ಸಿದ್ದಿ ಬುಡಕಟ್ಟು ಜನಾಂಗದವರಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮ ಉಧ್ಘಾಟಿಸಿ ಆಹಾರ ವಿತರಿಸಿ ಮಾತನಾಡಿದರು. ಉತ್ತಮ ಕೆಲಸಗಳು ನಡೆದಾಗ ಅದನ್ನು ಗೌರವಿಸಬೇಕು ಅದು ನಿಜವಾದ ಮಾನವ ಧರ್ಮ ಹಾಗಾದರೇ ಜನಪ್ರತಿನಿಧಿಗಳಿಗೂ ಇನ್ನೂ ಹೆಚ್ಚಿನ ಅಭಿವೃದ್ದಿ ಕೆಲಸ ಮಾಡಲು ಪ್ರೋತ್ಸಾಹನ ದೊರೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು ವಿಧಾನ ಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ತೀವೃ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂದಿತು. ಸರ್ಕಾರ ರೈತರಿಗೆ, ಬಡವರಿಗೆ,ದಿನ ದಲಿತರಿಗೆ, ಮಹಿಳೆಯರಿಗೆ ಎಲ್ಲಾ ವರ್ಗದವರಿಗೂ ಹಲವಾರು ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದ್ದು ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಸರ್ಕಾರದ ಯೋಜನೆಗಳು ಸರಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಹಾಗಾದರೇ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು. ಬುಡಕಟ್ಟು ಸಿದ್ದಿ ಜನಾಂಗದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಸರ್ಕಾರದ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಅಭಿವೃದ್ದಿ ಹೊಂದುವಂತೆ ಹೇಳಿದರು. ಬುಡಕಟ್ಟು ಸಿದ್ದಿ ಜನಾಂಗದ ಹಿರಿಯ ಮುಖಂಡ ದಿಯೋಗ ಸಿದ್ದಿ ಮಾತನಾಡಿ ಸರ್ಕಾರ ನಮ್ಮ ಸಮಾಜಕ್ಕೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿ ಯುವಕರು ದುಶ್ಚಟಗಳಿಂದ ದೂರ ಇರುವಂತೆ ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸಿದ್ದಿ ಜನಾಂಗಕ್ಕೆ ಪೌಷ್ಠಿಕ ಆಹಾರ ಅಕ್ಕಿ-15,ತೋಗರಿ ಬೆಳೆ5ಕೆಜಿ, ಅಲಸಂದಿ-1ಕೆಜಿ, ಹೆಸರು,ಹುರುಳಿ,ಬೆಲ್ಲ, ಸಕ್ಕರೆ ತಲಾ 2ಕೆಜಿ, ತುಪ್ಪ 1ಕೆಜಿ, ಅಡುಗೆ ಎಣ್ಣೆ2ಲೀ ಹಾಗೂ 45 ಮೊಟ್ಟೆಗಳನ್ನು ತಲಾ 1746 ಕುಟುಂಬಗಳಿಗೆ ಸಚಿವರು ವಿತರಿಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ,. ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಸದಸ್ಯರಾದ ಉಮೇಶ ಬೊಳಶೆಟ್ಟಿ, ಸತ್ಯಜೀತ ಗಿರಿ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ರಮೇಶ ನಾಯ್ಕ, ತಾಪಂ ಅಧ್ಯಕ್ಷೆ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಕೃಷಿ ಸಹಾಯಕ ನಿರ್ದೇಶಕ ನಾಗೇಶ ನಾಯ್ಕ,ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಸಾವಕ್ಕಾ ಬನಪ್ಪನವರ, ರಮೇಶ ಪಾಟೀಲ್ ಇದ್ದರು.
Leave a Comment