ಹಳಿಯಾಳ : ಇಲ್ಲಿಯ ಪುರಸಭೆಯ ಆಶ್ರಯ ಮತ್ತು ಎಸ್ಸಿ ಎಸ್ಟಿ ವಿಭಾಗದ ಸಿಬ್ಬಂದಿಗಳು ಬಡ ಜನರಿಂದ ಒತ್ತಡ ಪೂರ್ವಕವಾಗಿ ಹಣವನ್ನು ಪಡೆಯುತ್ತಿದ್ದಾರೆ. ಅಲ್ಲದೇ ಈ ಕುರಿತು ಕೆಲ ಜನರು ಸಚಿವ ದೇಶಪಾಂಡೆ ಅವರಿಗೆ ದೂರು ಸಲ್ಲಿಸಿದ್ದು, ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಪೋಲಿಸರಿಗೆ ಎಫ್.ಐ.ಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಇದರ ಪರಿಣಾಮ ಕೆಲ ಸಿಬ್ಬಂದಿಯವರು ಶ್ರೀಮಂತರಾಗುತ್ತಿದ್ದು ಇದರ ಕುರಿತು ಮುಖ್ಯಾಧಿಕಾರಿಗಳು ವರದಿಯನ್ನು ಸಿದ್ದ ಪಡಿಸಿ ಅಂತಹ ಸಿಬ್ಬಂದಿಗಳನ್ನು ಅಮಾನತ್ ಮಾಡಲು ಸಿದ್ದತೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಸೂಚನೆ ನೀಡಿದರು. ಪಟ್ಟಣದ ಪುರಸಭೆಯ ಸಭಾಗಂಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಮತ್ತು ಆಶ್ರಯ ಸಮಿತಿಯ ತುರ್ತುಸಭೆಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ ಅವರು, ಪುರಸಭೆಯಲ್ಲಿ ಕೆಲ ಸಿಬ್ಬಂದಿ ವರ್ಗವು ಬ್ರಷ್ಟಾಚಾರದಲ್ಲಿ ಮುಳುಗಿದ್ದು ಅಲ್ಲದೇ ಪ್ರತಿ ದಿನ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುವತ್ತ ಸಾಗಿದ್ದು ಇದರಿಂದ ಪುರಸಭೆಯ ಹೆಸರಿಗೆ ಕಳಂಕ ಉಂಟಾಗಿದ್ದು ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಗುಡುಗಿದರು. ಬಡವರು ತಮ್ಮ ಕೆಲಸ ಕಾರ್ಯಗಳಿಗಾಗಿ ಹಣ ನೀಡುವುದು ತಪ್ಪು. ಆದರೆ ಪುರಸಭೆಯ ಸಿಬ್ಬಂದಿಯವರು ಅವರ ದಾರಿಯನ್ನು ತಪ್ಪಿಸಿ ಅವರಿಂದ ಹಣ ವಸೂಲು ಮಾಡುತ್ತಿದ್ದಾರೆ. ಪುರಸಭೆಯಲ್ಲಿ ಬ್ರಷ್ಟಾಚಾರ ನಡೆಯುತ್ತಿರುವುದು ಇದೇನೂ ಹೊಸತಲ್ಲ. ಈ ಹಿಂದೆಯು ಸಿಬ್ಬಂದಿಗಳು ಜನರಿಂದ ಹಣ ಸುಲಿದ ಪ್ರಕರಣಗಳು ನಡೆದಿವೆ. ಮಧ್ಯದಲ್ಲಿ ನಿಂತು ಹೋದ ಈ ಬ್ರಷ್ಟಾಚಾರ ಮತ್ತು ಅವ್ಯವಹಾರವು ಮತ್ತೇ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಸಚಿವರು ಸಹ ಈ ಘಟನೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಇಂತಹ |ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವಂತೆ ಮುಖ್ಯಾಧಿಕಾರಿ ಕೇಶವ ಚೌಗುಲೆ ಅವರಿಗೆ ಆದೇಶಿಸಿದರು. ನೌಕರರ ಬೃಷ್ಟಾಚಾರದ ಪರಿಣಾಮ ಪುರಸಭೆಯ ಸದಸ್ಯರ ಹೆಸರು ಹಾಳಾಗುತ್ತಿದೆ. ಇದರಿಂದ ಉತ್ತಮ ಹೆಸರು ಗಳಿಸಿರುವ ಪುರಸಭೆಗೆ ಮಸಿ ಬಳಿದಂತಾಗಿದೆ. ಒಟ್ಟಿನಲ್ಲಿ ಪುರಸಭೆಯಲ್ಲಿ ಬೃಷ್ಟಾಚಾರ ಮತ್ತು ಅವ್ಯವಹಾರ ನಡೆದಿರುವುದು ಸತ್ಯವೆಂದು ಪದೇ ಪದೆ ಉಚ್ಚರಿಸಿದ ಎಮ್.ಎಲ್.ಸಿ ಘೋಟ್ನೆಕರ ಇದರ ಬಗ್ಗೆ ಆಡಳಿತ ಮಂಡಳಿ ಗಂಭೀರವಾಗಿ ಚಿಂತನೆ ನಡೆಸುವುದು ಅವಶ್ಯವಾಗಿದೆ ಎಂದು ಸಭೆಯ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಶ್ರೀಕಾಂತ ಹೂಲಿ ಮಧ್ಯ ಪ್ರವೇಶಿಸಿ ಪುರಸಭೆಯಲ್ಲಿ ಬ್ರಷ್ಟಾಚಾರ ಎಸಗುವ ಸಿಬ್ಬಂದಿಗಳ ಮೇಲೆ ನಿರ್ಧಾಕ್ಷಿಣವಾಗಿ ಕ್ರಮ ಜರುಗಿಸುವಂತೆ ಸೃಷ್ಟ ಪಡಿಸಿದರು. ಕೆಲ ನೌಕರರು ಅನಧಿಕೃತ ನೂತನ ಬಡಾವಣೆಗಳಿಗೆ ಹಣ ಪಡೆದು ಎನ್.ಓ.ಸಿ ಪ್ರಮಾಣ ಪತ್ರಗಳನ್ನು ದಯಪಾಲಿಸಿದ್ದು ಅದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು. ಆಶ್ರಯ ಸಮಿತಿಯ ಸದಸ್ಯ ಗುಲಾಬಶಾ ಲತೀಫನವರ ಸಭೆಯಲ್ಲಿ ಭಾಗವಹಿಸಿ, ಜಿ ಪ್ಲಸ್ ಟೂ ಅಡಿಗಲ್ಲು ಸಮಾರಂಭಕ್ಕೆ ಸಮತಿಯವರಿಗೆ ಆಹ್ವಾನ ನೀಡಲಾಗಿಲ್ಲ. ಅಲ್ಲದೇ ನಮ್ಮ ಅವಧಿ ಮುಗಿದಿದೆ ಎಂದು ಹೇಳಲಾಗುತ್ತಿದೆ ಇದಕ್ಕೆ ಸೃಷ್ಠಿಕರಣ ನೀಡುವಂತೆ ಪಟ್ಟು ಹಿಡಿದರು. ನಂತರ ಸದಸ್ಯ ಸುರೇಶ ತಳವಾರ ಮಾತನಾಡಿ, ಪುರಸಭೆಯಲ್ಲಿ ಬೃಷ್ಟಾಚಾರ ತಾಂಡವಾಡುತ್ತಿದೆ. ಇದರ ಮೇಲೆ ಮುಖ್ಯಾಧಿಕಾರಿಗಳು ನಿಯಂತ್ರಣ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ರೇಗಿದಾಗ ಸಭೆಯಲ್ಲಿದ್ದ ಇನ್ನಿತರ ಸದಸ್ಯರು ಬೆಂಬಲ ವ್ಯಕ್ತ ಪಡಿಸಿ, ಮುಂದಿನ ದಿನಗಳಲ್ಲಿ ಇವುಗಳನ್ನು ಸಂಪೂರ್ಣ ನಿಷೇಧಿಸುವಂತೆ ಮಾಡಲು ಕ್ರಮ ಜರುಗಿಸಿ ಎಂದು ಹೇಳಿದರು. ಸಭೆಯಲ್ಲಿ ಅಧ್ಯಕ್ಷ ಶಂಕರ ಬೆಳಗಾಂವಕರ, ಉಪಾಧ್ಯಕ್ಷ ಅರುಣ ಬೂಬಾಟಿ, ಸದಸ್ಯರಾದ ಮಾಲಾ ಬ್ರಿಗಾಂಜಾ, ಫಯಾಜ್ ಶೇಖ, ಸಯ್ಯದಲಿ ಅಂಕೋಲೆಕರ, ಸುಭಾನಿ ಹುಬ್ಬಳ್ಳಿ, ಆಶ್ರಯ ಸಮಿತಿಯ ಜಿ.ಡಿ.ಗಂಗಾಧರ, ವಿಮಲಾಬಾಯಿ ವಡ್ಡರ, ಪರಶುರಾಮ ಹರ್ಲಿ ಇದ್ದರು.
Leave a Comment