ಹಳಿಯಾಳ: ದೇಶಕ್ಕೆ ಐಐಎಮ್ ನ ಕೊಡುಗೆ ಅಂತಹ ಮಟ್ಟದಲ್ಲಿ ಇಲ್ಲ ಬದಲಾಗಿ ಎನ್.ಜಿ.ಓ, ಓದ್ಯೋಗಿಕ ತರಬೇತಿ ಕೇಂದ್ರಗಳು, ಆವಿಷ್ಕಾರ, ಸಂಶೋಧನೆ ಕೇಂದ್ರಗಳು ಹಾಗೂ ರುಡಸೆಟ್ನಂತಹ ಸಂಸ್ಥೆಗಳಿಂದ ಗ್ರಾಮೀಣ ಮಟ್ಟದಿಂದ ದೇಶ ಅಭಿವೃದ್ದಿ ಸಾಧಿಸುತ್ತಿದ್ದು, ಕೌಶಲ್ಯ ಆಧಾರಿತ ಶಿಕ್ಷಣವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಖ್ಯಾತ ಸೆಲ್ಕೊ ಇಂಡಿಯಾ ಸಿಇಓ ಡಾ.ಹರೀಶ ಹಂದೆ ಅಭಿಪ್ರಾಯಪಟ್ಟರು. ಪಟ್ಟಣದ ಕೆಎಲ್ಎಸ್ ಮಹಾವಿದ್ಯಾಲಯದಲ್ಲಿ ನಡೆದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ 14ನೇ ವರ್ಷಾಚರಣೆಯ, ವಾರ್ಷಿಕ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ವಾರ್ಷಿಕ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜಗತ್ತು ತಾಂತ್ರಿಕತೆಯೆಡೆಗೆ ವಾಲುತ್ತಿದ್ದು ತಂತ್ರಾಂಶ ಅಭಿವೃದ್ದಿಯಿಂದ ಜಗತ್ತಿನ ವಿದ್ಯಮಾನಗಳು ಅಂಗೈಯಲ್ಲಿ ದೊರೆಯುತ್ತಿವೆ. ಹೆಚ್ಚೆಚ್ಚಾಗಿ ಆವಿಷ್ಕಾರ, ಸಂಶೋಧನೆ ಹಾಗೂ ಜ್ಞಾನ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮ ಉಧ್ಘಾಟಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾರತ ದೇಶ ಎಲ್ಲ ಹಂತದಲ್ಲಿ ಪ್ರಗತಿ ಹೊಂದುತ್ತಿದೆ ಆದರೇ ಉದ್ಯೋಗ ಸಮಸ್ಯೆ ದೇಶದ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದ್ದು, ಉದ್ಯೋಗ ಸಮಸ್ಯೆ ನಿವಾರಣೆಗೆ ರುಡಸೆಟ್ನಂತಹ ಸಂಸ್ಥೆಗಳು ಹಾಗೂ ಸರ್ಕಾರಗಳು ನೂತನ ಕಾರ್ಯಯೋಜನೆಗಳನ್ನು ರೂಪಿಸುತ್ತಿವೆ. ತರಬೇತಿ ಬಳಿಕ ಉದ್ಯೋಗ ಸಿಗಬೇಕು ಇಲ್ಲವೇ ಸ್ವಯಂ ಉದ್ಯೋಗ ಪ್ರಾರಂಭಿಸಬೇಕು ಆ ನಿಟ್ಟಿನಲ್ಲಿ ಕುಶಲಕರ್ಮಿ, ಕೌಶಲ್ಯ ಆಧಾರಿತ ತರಬೇತಿ ನೀಡುವ ಮೂಲಕ ಗ್ರಾಮೀಣ ಮಟ್ಟದಿಂದ ಉದ್ಯೋಗ ಸೃಷ್ಠಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು. ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರಿನ ಡಿಜಿಎಮ್ ವಿ. ರಾಮಚಂದ್ರ ಹಾಗೂ ಎಜಿಎಮ್ ಬಿ.ಪಾಶ್ವನಾಥ ಮಾತನಾಡಿ ಬಡತನ ಮತ್ತು ನಿರುದ್ಯೋಗ ದೇಶದ ಪೆಡಂಭೂತವಾಗಿದೆ. ಯುವ ಶಕ್ತಿಯ ಸರಿಯಾದ ಸದ್ಬಳಕೆ ಮಾಡಿಕೊಂಡು ಹಳ್ಳಿಗಳನ್ನು ಅಭಿವೃದ್ದಿ ಪಡಿಸಿದರೇ ದೇಶದ ಅಭಿವೃದ್ದಿ ಸಾಧ್ಯ ಎಂದು ಹೇಳಿ ರುಡಸೆಟ್ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೆನರಾಬ್ಯಾಂಕ್ ಸಿಎಸ್ಆರ್ ಅನುದಾನದಡಿ ಪ್ರತಿ ವರ್ಷ 100 ರಿಂದ 200ಕೊಟಿ ಸಾಮಾಜಿಕ ಕಾರ್ಯಗಳಿಗೆ ನೀಡುತ್ತಿದೆ ಎಂದರು. ಹಳಿಯಾಳದ ಸಿಬಿಡಿ ಆರ್ಸೆಟ್ ದೇಶದಲ್ಲೇ 2ನೇ ಸ್ಥಾನಗಳಿಸಿರುವುದು ಶ್ಲಾಘನೀಯ ಸಂಗತಿ ಮುಂದೆ ಇನ್ನು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು. ಆರ್ಸೆಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ದೇಶಪಾಂಡೆ ಸಂಸ್ಥೆಯು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿ ಈವರೆಗೆ 18ಸಾವಿರಕ್ಕೂ ಹೆಚ್ಚು ಯುವಕ,ಯುವತಿಯರಿಗೆ ಸ್ವಾವಲಂಬಿಗಳಾಗಿ ರೂಪಿಸಿರುವ ರುಡಸೆಟ್ ಸಂಸ್ಥೆ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡಲು ಉತ್ಸುಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅರ್ಧವಾರ್ಷಿಕ ವಾರ್ತಾಪತ್ರಿಕೆ ‘ಕೌಶಲ್ಯ’ವನ್ನು ಅನಾವರಣಗೊಳಿಸಲಾಯಿತು. ಯಶಸ್ವಿ 5 ಸ್ವಸಹಯ ಗುಂಪುಗಳನ್ನು, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧೆನೆಗೈದ ವಿದ್ಯಾರ್ಥಿಗಳನ್ನು ಹಾಗೂ ಕೆಲವು ಸಾಧಕರನ್ನು ಗಣ್ಯರು ಗೌರವಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ, ಶ್ಯಾಮ ಕಾಮತ, ಕೆನರಾ ಬ್ಯಾಂಕ್ ಬೆಳಗಾವಿ ಎಜಿಎಮ್ ಕೃಷ್ಣಾ ಕುಲಕರ್ಣಿ, ಆರ್ಸೆಟ್ ರಾಜ್ಯ ನಿರ್ದೇಶಕ ರಾಮಕೃಷ್ಣ ಮಾನೆ, ಹಿರಿಯ ಅಧಿಕಾರಿ ಅನಂತಯ್ಯಾ ಆಚಾರಿ, ನಬಾರ್ಡ ಜಿಲ್ಲಾ ಅಧಿಕಾರಿ ಯೋಗೇಶ ಎಸ್ಎಲ್ ಮೊದಲಾದ ಗಣ್ಯರು ಇದ್ದರು.
Leave a Comment