ಹಳಿಯಾಳ:- ದೇಶದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ತೀವ್ರ ಸಂತಾಪ ಸೂಚಿಸಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ ಸಂತಾಪ ಸೂಚಿಸಿರುವ ದೇಶಪಾಂಡೆ ಅವರು ಸರಿ ಸುಮಾರು 5 ದಶಕಗಳ ಕಾಲ ಜನಪ್ರತಿನಿಧಿಯಾಗಿ, ಅತ್ಯುತ್ತಮ ಸಂಸದೀಯ ಪಟುಗಳಾಗಿದ್ದರು. ಅವರು ಸದನದಲ್ಲಿ ನಡೆಸುತ್ತಿದ್ದ ಚರ್ಚೆಗಳಿಂದ ಭಾರತದ ಪ್ರಜಾಪ್ರಭುತ್ವ ಬಲಗೊಂಡಿದೆ ಎಂದಿದ್ದಾರೆ.
ಜನಸಂಘದ ಸಂಸ್ಥಾಪಕರಾದ ಶಾಮಪ್ರಸಾದ ಮುಖರ್ಜಿಯವರ ನಿಕಟವರ್ತಿಗಳಾಗಿದ್ದ ವಾಜಪೇಯಿಯವರು ಮೊರಾರ್ಜಿ ದೇಸಾಯಿಯವರ ಜನತಾ ಪಕ್ಷದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಮೂಡಿಸಿದ ಛಾಪು ಎಂದಿಗೂ ಮರೆಯುವಂಥದ್ದಲ್ಲ ಎಂದು ದೇಶಪಾಂಡೆ ಹೇಳಿದ್ದಾರೆ.
ಪಕ್ಷಾತೀತ ವರ್ಚಸ್ಸನ್ನು ಬೆಳೆಸಿಕೊಂಡಿದ್ದ ವಾಜಪೇಯಿಯವರು ನಿಜವಾಗಿಯೂ ಅಜಾತಶತ್ರುವಾಗಿದ್ದರು. ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣವಾಗಲು ವಾಜಪೇಯಿ ನೀಡಿದ ಒತ್ತಾಸೆ ಮೌಲಿಕವಾದುದು. ಎಂದು ಸಚಿವರು ಅಗಲಿದ ನಾಯಕನ ಗುಣಗಾನ ಮಾಡಿದ್ದಾರೆ.
ವಿಭಿನ್ನ ವಿಚಾರಧಾರೆಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ವಾಜಪೇಯಿಯವರು ಉದಾರವಾದ ಮೌಲ್ಯಗಳನ್ನು ಹೊಂದಿದ್ದರು. ಅಪ್ಪಟ ಕವಿಯಾಗಿದ್ದ ಅವರು ಜೀವಪರವಾದ ಸಂವೇದನೆಗಳನ್ನು ಸದಾ ಜನತದಿಂದ ಕಾಪಾಡಿಕೊಂಡಿದ್ದರು. ಅವರೊಂದಿಗಿನ ವೈಯಕ್ತಿಕ ಒಡನಾಟದ ನೆನಪುಗಳು ಸದಾ ನಮ್ಮ ನೆನಪಿನಲ್ಲಿ ಇರಲಿವೆ ಎಂದು ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.
ಮೂರು ಬಾರಿ ದೇಶದ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದಿದ್ದ ವಾಜಪೇಯಿಜಿಯವರು ದೇಶವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿದ್ದರು. ಜೊತೆಗೆ ಜಗತ್ತಿನ ಯಾವ ಶಕ್ತಿಗಳಿಗೂ ಹೆದರದೆ ಅಣುಶಕ್ತಿ ಪರೀಕ್ಷೆ ನಡೆಸುವ ಮೂಲಕ ದೇಶವನ್ನು ಬಲಾಢ್ಯಗೊಳಿಸಿದ್ದರು ಎಂದು ಮುಕ್ತ ಕಂಠದಿಂದ ವಾಜಪೇಯಿ ಅವರನ್ನು ಗುಣಗಾಣ ಮಾಡಿರುವ ಸಚಿವ ದೇಶಪಾಂಡೆ ಅಭಿಮಾನಿಗಳಿಗೆ, ಬಂಧು ಬಳಗಕ್ಕೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ದೇವರು ಭರಿಸಲಿ ಎಂದು ಪ್ರಾರ್ಥಿಸಿದ್ದಾರೆ.
Leave a Comment