ಹಳಿಯಾಳ: ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಕಳೆದ 11 ದಿನಗಳಿಂದ ಕಬ್ಬು ಬೆಳೆಗಾರ ರೈತರು ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಕಾರ್ಖಾನೆಯವರಾಗಲಿ, ತಾಲೂಕಾಡಳಿತ, ಜನಪ್ರತಿನಿಧಿಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಗಮನ ಹರಿಸದಿರುವುದು ರೈತರ ದುರ್ಭಾಗ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕೈತಾನ ಬಾರಬೋಜಾ ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರು ಹಾಗೂ ಜೆಡಿಎಸ್ ಪಕ್ಷದ ಮಾಜಿ ತಾಲೂಕಾಧ್ಯಕ್ಷರು ಆಗಿರುವ ಬಾರಬೋಜಾ ಅವರು ಧರಣಿ ಸ್ಥಳದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಸ್ಥಳೀಯ ತಾಲೂಕಾಡಳಿತ ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ರೈತರ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಆಗಸ್ಟ 6ರಿಂದ ಧರಣಿ ಪ್ರಾರಂಭವಾಗಿದ್ದು ಕಳೆದ ವರ್ಷ ನುರಿಸಿದ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವವರೆಗೆ ಹೋರಾಟ ಮುಂದುವರೆಯಲಿದೆ. ಅಲ್ಲದೇ ಮುಂದೆ ಹಳಿಯಾಳ ತಾಲೂಕಾಡಳಿತದ ಮುಂದೆಯೂ ಧರಣಿ ನಡೆಸಲು ಕಬ್ಬು ಬೆಳೆಗಾರ ರೈತರು ಚಿಂತನೆ ನಡೆಸಿದ್ದು. ಸಂಬಂಧಪಟ್ಟವರು ರೈತರಿಂದ ಮುಂದೆ ಊಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆಯ ವಿರುದ್ದ ರೊಚ್ಚಿಗೆದ್ದ ರೈತರು ಕಾರ್ಖಾನೆಯ ಗೇಟಗೆ ಬೀಗ ಹಾಕಲು ಮುಂದಾದಾಗ ಹಳಿಯಾಳ ಪಿಎಸ್ಐ ಆನಂದಮೂರ್ತಿ ಮಧ್ಯಪ್ರವೇಶಿಸಿ ಕಾನೂನು ಉಲ್ಲಂಘಟನೆ ಮಾಡದಂತೆ ರೈತರ ಮನವೊಲಿಸಿದಾಗ ರೈತರು ಮತ್ತೆ ಧರಣಿ ಸ್ಥಳಕ್ಕೆ ತೆರಳಿ ಧರಣಿ ಮುಂದುವರೆಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ವಾಮನ ಮಿರಾಶಿ, ದಲಿತ ಮುಖಂಡ ಪಿಎಸ್ ದಾನಪ್ಪನವರ, ಮುಖಂಡರಾದ ಯುಕೆ ಬೋಬಾಟಿ, ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಅಶೋಕ ಮೇಟಿ, ಕುಮಾರ ಬೋಬಾಟಿ, ನಸ್ರುಲ್ಲಾಖಾನ್ ಮೊದಲಾದವರು ಇದ್ದರು.
Leave a Comment