ಹಳಿಯಾಳ :- ಈ ಹಿಂದಿನ ಹಳಿಯಾಳ ಪುರಸಭೆಯ ಕಾಂಗ್ರೇಸ್ ಆಡಳಿತ ಮಂಡಳಿಯ ದೃಷ್ಟಿಯಲ್ಲಿ ಅನುದಾನದ ಲೂಟಿಯೇ ಅಭಿವೃದ್ಧಿ ಎಂಬಂತಾಗಿತ್ತು. ಅಲ್ಲದೇ ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವಷ್ಟು ಭ್ರಷ್ಟಾಚಾರ ನಡೆಸಿದ್ದು ಆಡಳಿತ ಮಂಡಳಿ ಸಾಧನೆಯಾಗಿದ್ದು, ಪಟ್ಟಣದ ಜನತೆ ಇದನ್ನು ಅರಿತು ಈ ಬಾರಿ ಅಭಿವೃದ್ದಿಪರವಾದವರನ್ನು ಆಯ್ಕೆ ಮಾಡುವಂತೆ ಮಾಜಿ ಶಾಸಕ ಸುನೀಲ್ ಹೆಗಡೆ ವಿನಂತಿಸಿದರು.
ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರು, ಮುಖಂಡರು, ಪುರಸಭೆಗೆ ಸ್ಪರ್ದಿಸಿರುವ ಎಲ್ಲ 23 ಅಭ್ಯರ್ಥಿಗಳ ವಿಶೇಷ ಸಭೆಯ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನದ ರ್ಯಾಂಕಿಂಗ್ನಲ್ಲಿ ಹಳಿಯಾಳ ಪುರಸಭೆ ಹಿಂದುಳಿದಿದ್ದರೂ, ಭ್ರಷ್ಟಾಚಾರದ ರ್ಯಾಂಕಿಂಗ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಲಂಚ ನೀಡದೇ ಇಲ್ಲಿ ಯಾವುದೇ ಕೆಲಸವಾಗುವುದಿಲ್ಲ ಹಾಗೂ ಫೈಲ್ ಮುಂದೇ ಹೋಗುವುದಿಲ್ಲ ಎಂಬ ಪರಿಸ್ಥಿತಿ ಸಾರ್ವಜನೀಕರು ಅನುಭವಿಸಿದ್ದು ಪುರಸಭೆಗೆ ಕಾಲಿಡಲು ಭಯಪಡುತ್ತಿದ್ದರು ಎಂದು ಹೇಳಿದ ಹೆಗಡೆ ಲಕ್ಷಾಂತರ ರೂ. ಲಂಚ ಪಡೆದು ತರಾತುರಿಯಲ್ಲಿ ಸಾಕಷ್ಟು ಎನ್.ಎ ಪ್ರಕರಣಗಳಿಗೆ ಅನುಮತಿ ನೀಡಿದ್ದರು ಹಾಗೂ ಪಟ್ಟಣದಲ್ಲಿ ಸ್ವಚ್ಛತೆಯ ಹೆಸರಿನಲ್ಲಿ ಹಗಲು ದರೋಡೆ ನಡೆದಿತ್ತು. ಈ ಬಗ್ಗೆ ಬಿಜೆಪಿ ಹಳಿಯಾಳ ಘಟಕ ಪ್ರತಿಬಾರಿ ವಿರೋಧಿಸಿತ್ತು ಅಲ್ಲದೇ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿತ್ತು ಆದರೇ ಯಾವುದೇ ಕ್ರಮ ಜರುಗದೆ ಭ್ರಷ್ಟಾಚಾರ ಮುಂದುವರೆದೆ ಇತ್ತು ಎಂದು ಆರೋಪಿಸಿದರು.
ಹಳಿಯಾಳ ಪಟ್ಟಣವನ್ನು ಸಿಂಗಾಪೂರ ಮಾಡುತ್ತೇನೆಂದು ಬಿಗುತ್ತಿದ್ದ ಸಚಿವ ದೇಶಪಾಂಡೆ ಅವರ ಪಕ್ಷದ ಆಡಳಿತ ಮಂಡಳಿ ಸದಸ್ಯರು ಪಟ್ಟಣದಲ್ಲಿ ಶೂನ್ಯ ಅಭಿವೃದ್ದಿ ಸಾಧಿಸಿ, ಹಳಿಯಾಳವನ್ನು ಸಿಂಗಾಪೂರ ಮಾದರಿ ಪಟ್ಟಣ ಮಾಡದೆ ಸಿಂಗಾಪೂರದಲ್ಲಿ ಅವರು ಹೋಗಿ ನೆಲೆಸುವಷ್ಟು ಗಳಿಸಿಕೊಂಡಿದ್ದಾರೆಂದು ವ್ಯಂಗ್ಯವಾಡಿದರು.
ಎನ್ಎ-ಬಿನ್ಶೇತ್ಕಿ ಪ್ರಕರಣ, ಆಶ್ರಯ ಮನೆ ಹಂಚಿಕೆಯಲ್ಲಿ, ಮಹಾತ್ಮಾ ಗಾಂಧಿ ಮಾರುಕಟ್ಟೆ, ಸಂಕೀರ್ಣ ಹಂಚಿಕೆಯಲ್ಲಿ, 24*7 ನೀರು ಸರಬರಾಜು ಯೋಜನೆ, ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿ ಪಟ್ಟಣದಲ್ಲಿ ಬಹುತೇಕ ಕಳಪೆ ಕಾಮಗಾರಿ ನಡೆಸಿ ಕೇವಲ ಕಮಿಷನ್ ಆಧಾರದಲ್ಲಿ ಅನುದಾನ ಲೂಟಿ ಹೋಡೆದ ಕೀರ್ತಿ ಹಿಂದಿನ ಆಡಳಿತ ಪಕ್ಷಕ್ಕೆ ಸಲ್ಲುತ್ತದೆ ಎಂದು ಸುನೀಲ್ ಹೆಗಡೆ ಆರೋಪಗಳ ಸುರಿಮಳೆಗೈದರು.
ಕಾಂಗ್ರೇಸ್ ಪುರಸಭೆ ಆಡಳಿತ ಮಂಡಳಿಯ ಭ್ರಷ್ಟಾಚಾರ, ಅಭಿವೃದ್ದಿ ಕುರಿತು ಇಚ್ಚಾಶಕ್ತಿ ಕೊರತೆ, ಜನರ ನೀರಿಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸದೆ ಇರುವುದನ್ನು ಮನಗೊಂಡಿರುವ ಪಟ್ಟಣದ ಜನತೆ ನಗರದ ಜನರ ನಾಡಿಮಿಡಿತ ಅರಿತು ಅಭಿವೃದ್ದಿಪರ ಯುವ ಅಭ್ಯರ್ಥಿಗಳನ್ನು ಆಯ್ಕೆಮಾಡಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ 23 ವಾರ್ಡಗಳಲ್ಲಿ 21 ವಾರ್ಡ ಗೆಲ್ಲುವುದಾಗಿ ಸುನೀಲ್ ಹೆಗಡೆ ಭವಿಷ್ಯ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಶ್ರೀಕಾಂತ ಹೂಲಿ, ಮಂಗೇಶ ದೇಶಪಾಂಡೆ, ವಿ.ಎಮ್.ಪಾಟೀಲ, ಎಸ್.ಎ.ಶೆಟವಣ್ಣನವರ, ವಿಲಾಸ ಯಡವಿ, ಗಣಪತಿ ಕರಂಜೇಕರ, ಅನಿಲ ಮುತ್ನಾಳ, ಶಂಕರ ಗಳಗಿ, ಪ್ರದೀಪ ಹಿರೇಕರ ಸೇರಿದಂತೆ 23 ವಾರ್ಡಗಳ ಬಿಜೆಪಿ ಅಭ್ಯರ್ಥಿಗಳು ಇತರರು ಇದ್ದರು.
Leave a Comment