ಹಳಿಯಾಳ:- “ನಿಮ್ಮ ಖಾತೆಗಳಿಗೆ 305ರೂ. ಬಾಕಿ ಹಣ ಹಾಕಸೇನಲೇ ಮಕ್ಕಳ್ರಾ” ಎಂದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಾರ್ವಜನೀಕ ಸಭೆಯಲ್ಲಿ ಹೇಳಿದ್ದ ಸಚಿವ ಆರ್.ವಿ.ದೇಶಪಾಂಡೆ ಅವರು ಈಗ ಎಲ್ಲಿ ? ಎಂದು ಖಡಕ್ಕಾಗಿ ಪ್ರಶ್ನೀಸಿರುವ ಕಬ್ಬು ಬೆಳೆಗಾರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಕಳೆದ 18 ದಿನಗಳಿಂದ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸೌಜನ್ಯಕ್ಕೂ ಭೇಟಿ ನೀಡದ ಸಚಿವರ ಬಗ್ಗೆ ಕಿಡಿಕಾರಿದರು.
ಪಟ್ಟಣದ ಮರಾಠಾ ಭವನದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು 2016-17ರ 305ರೂ ಬಾಕಿ ಹಣವನ್ನು ಎಪ್ರಿಲ್ 30 ರ ಒಳಗೆ ರೈತರಿಗೆ ನೀಡುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಕೊಂಡಿದ್ದ ಕಾರ್ಖಾನೆ ಅಧಿಕಾರಿಗಳು ಈವರೆಗೆ ಹಣವನ್ನು ನೀಡದೆ ರೈತರಿಗೆ ಮೊಸ ಮಾಡಿದ್ದಾರೆಂದು ಆರೋಪಿಸಿದರು.
ಜಿಲ್ಲಾಡಳಿತಕ್ಕೂ ಗೌರವ ನೀಡದ ಕಾರ್ಖಾನೆಯ ರೈತ ವಿರೋಧಿ ನೀತಿ ವಿರುದ್ದ ರೈತರು ಅಗಸ್ಟ ದಿ.6ರಿಂದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದು ಚಳಿ, ಮಳೆ- ಗಾಳಿ ಲೆಕ್ಕಿಸದೆ ಕಳೆದ 18 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೇ ಸೌಜನ್ಯಕ್ಕೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಸಚಿವ ಆರ್.ವಿ.ದೇಶಪಾಂಡೆ, ಜನಪ್ರತಿನಿಧಿಗಳು ಹಾಗೂ ತಾಲೂಕಾ ಆಡಳಿತ, ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ರೈತರ ಸಮಸ್ಯೆ ಆಲಿಸದೆ ರೈತ ವಿರೋಧಿ ಧೋರಣೆ ಅನುಸರಿಸಿದ್ದಾರೆಂದು ಆಕ್ರೋಶದಿಂದ ನುಡಿದರು.
ಸಿಎಂ ಭೇಟಿ :- ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ರೈತರು ದಿ.20ರಂದು ಹಳಿಯಾಳ-ಕಲಘಟಗಿ ರೈತರ ನಿಯೋಗವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಕ್ಕರೆ ಸಚಿವ ಕೆಜೆ ಜಾರ್ಜ ಹಾಗೂ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಗ್ಗೆ ಮಾಹಿತಿ ನೀಡಿದ ಕಾಜಗಾರ ರೈತರ ಮನವಿಗೆ ಕೂಡಲೇ ಸ್ಪಂದಿಸಿದ ಕುಮಾರಸ್ವಾಮಿ ದೂರವಾಣಿ ಮೂಲಕ ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆಂದರು.
ಕಾರ್ಖಾನೆ ನೀತಿಯಿಂದ ಬೇಸತ್ತ ಹಳಿಯಾಳ ಭಾಗದ ರೈತರು ಬೇರೆ ಸಕ್ಕರೆ ಕರ್ಖಾನೆಗಳಿಗೆ ಕಬ್ಬು ಸಾಗಿಸಲು ಮುಂದಾದಾಗ 2016-17ನೇ ಸಾಲಿನ 305ರೂ. ಬಾಕಿ ನೀಡುವುದಾಗಿ ಕಂಪೆನಿ ಕರಪತ್ರಗಳನ್ನು ಹಂಚಿ ರೈತರಿಂದ ಕಬ್ಬು ಪಡೆದಿತ್ತು ಆದರೇ ಬಳಿಕ ಹಣ ನೀಡದೆ ಬಹಿರಂಗವಾಗಿ ಮೋಸ ಮಾಡಿದೆ ಎಂದು ಕಿಡಿಕಾರಿದ ಕಬ್ಬು ಬೆಳೆಗಾರ ಸಂಘದ ರಾಜ್ಯ ಉಪಾಧ್ಯಕ್ಷ ಎಮ್.ವಿ.ಘಾಡಿ ರೈತರ ಖಾತೆಗೆ ಬಾಕಿ ಹಣ ಜಮೆ ಆಗುವವರೆಗೆ ಧರಣಿ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ಹಿರಿಯ ರೈತ ಮುಖಂಡರಾದ ಎಸ್.ಕೆ.ಗೌಡಾ ಹಾಗೂ ಉಡಚಪ್ಪಾ ಬೋಬಾಟಿ ಮಾತನಾಡಿ ಸಿಎಂ ಭರವಸೆ ಹಿನ್ನೆಲೆಯಲ್ಲಿ ಹಾಗೂ ಹಳಿಯಾಳ ಪುರಸಭೆ ಚುನಾವಣೆ ಮುಗಿಯುವವರೆಗೆ ರೈತರು ಶಾಂತಯುತವಾಗಿ ಧರಣಿ ಮುಂದುವರೆಸಲಿದ್ದಾರೆ. ಒಂದಾನುವೇಳೆ ಸಿಎಂ ಅವರ ಮಾತಿಗೂ ಕಾರ್ಖಾನೆ ಗೌರವ ನೀಡದೆ ಇದ್ದರೇ ಮುಂದೆ ಹಳಿಯಾಳ ಬಂದಗೆ ಕರೆ ನೀಡುವುದು ಹಾಗೂ ಬೆಂಗಳೂರಿನ ಸಿಎಂ ಕಚೇರಿ, ಸಕ್ಕರೆ ಆಯುಕ್ತರ ಕಚೇರಿ ಎದುರು 2000ರೈತರು ಅನಿರ್ಧೀಷ್ಠಾವಧಿ ಧರಣಿ ನಡೆಸಲು ಚಿಂತನೆ ನಡೆಸಲಾಗುತ್ತಿದ್ದು ರೈತರ ತಾಳ್ಮೆಯ ಕಟ್ಟೆ ಒಡೆದರೇ ಪ್ರತಿಭಟನೆ ಯಾವ ಸ್ವರೂಪ ಪಡೆಯಲಿದೆ ಎಂದು ಹೇಳುವುದು ಕಷ್ಟ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ರೈತ ಮುಖಂಡರಾದ ಅಶೋಕ ಮೇಟಿ, ಗಿರಿಶ ಟೋಸುರ, ಜೀವಪ್ಪಾ ಭಂಡಾರಿ ಇದ್ದರು.
Leave a Comment