ಹಳಿಯಾಳ:- ಕುಸ್ತಿಯ ತವರೂರು, ರಾಜ್ಯ ರಾಜಕಾರಣದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ, ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾಗಿರುವ ಹಳಿಯಾಳ ಕ್ಷೇತ್ರದಲ್ಲಿ ಪುರಸಭೆ ಚುನಾವಣೆ ಕಾವು ರಂಗೇರಿದೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷ ಹೇಗಾದರೂ ಮತ್ತೇ ಪುರಸಭೆ ಗದ್ದುಗೆ ಏರಬೇಕೆಂದು ಹಾಗೂ ಬಿಜೆಪಿ ಪಕ್ಷ ಈ ಬಾರಿ ಪುರಸಭೆ ಪ್ರವೇಶಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಏನಿಲ್ಲದ ಕಸರತ್ತು ನಡೆಸಿದ್ದು. ಹಳಿಯಾಳ ಪುರ ಚುನಾವಣೆ ಬಿಜೆಪಿ ಮತ್ತು ಕಾಂಗ್ರೇಸ್ ನಡುವಿನ ನೇರ ಹಣಾಹಣಿ ಎಂದೆ ಹೇಳಲಾಗುತ್ತಿದೆ.
23 ವಾರ್ಡಗಳನ್ನು ಹೊಂದಿರುವ ಹಳಿಯಾಳ ಪುರಸಭೆ 9096 ಪುರುಷ, 9023 ಮಹಿಳಾ ಹೀಗೆ ಒಟ್ಟೂ 18,199 ಮತದಾರರನ್ನೊಳಗೊಂಡಿದೆ. ಕಾಂಗ್ರೇಸ್-ಬಿಜೆಪಿ ತಲಾ 23, ಜೆಡಿಎಸ್-15 ಹಾಗೂ ಪಕ್ಷೇತರ-9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹಳಿಯಾಳ ಕ್ಷೇತ್ರದಲ್ಲಿ ನೆಲೆಯೇ ಇಲ್ಲವಾಗಿದ್ದ ಬಿಜೆಪಿಗೆ ಮಾಜಿ ಶಾಸಕ ಸುನೀಲ್ ಹೆಗಡೆ ಸೇರ್ಪಡೆಯಾದ ಬಳಿಕ ಸಾಕಷ್ಟು ಸಂಘಟಿತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 56ಸಾವಿರ ಮತಗಳನ್ನು ಪಡೆದು 2ನೇ ಅತಿದೊಡ್ಡ ಪಕ್ಷವಾಗಿ ಬೆಳೆದು ನಿಂತಿರುವ ಬಿಜೆಪಿ ಈ ಬಾರಿ ಪ್ರಥಮ ಬಾರಿಗೆ ಹಳಿಯಾಳ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಭದ್ರಕೋಟೆಯಾಗಿರುವ ಪಟ್ಟಣದಲ್ಲಿ ಸೆಡ್ಡು ಹೊಡೆದು ನಿಂತಿದ್ದು ನೇರ ಸ್ಪರ್ದೆಗೆ ಇಳಿದಿದೆ. ತಮ್ಮ ಅಭ್ಯರ್ಥಿಗಳ ಪರ ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ ಭಾರಿ ಪ್ರಚಾರ ಕಾರ್ಯ ಮಾಡಿದ್ದಾರೆ.
ಇನ್ನೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಚುನಾವಣೆ ಎದುರಿಸುತ್ತಿದ್ದು ಘೊಟ್ನೇಕರ ಅವರು ತಮ್ಮ ಅಭ್ಯರ್ಥಿಗಳ ಪರ ಸಾಕಷ್ಟು ಪ್ರಚಾರ ನಡೆಸಿದ್ದಾರೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷ ಅಭ್ಯರ್ಥಿಗಳನ್ನು ಗೆಲ್ಲಿಸಿದರೇ ಪಟ್ಟಣದ ಅಭಿವೃದ್ದಿ ಸಾಧ್ಯವೆಂದು ಮನವರಿಕೆ ಮಾಡುತ್ತಾ ಅಭ್ಯರ್ಥಿಗಳ ಗೆಲುವಿಗೆ ಪಣ ತೊಟ್ಟಿದ್ದು ಚುನಾವಣೆ ಅವರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಈ ಬಾರಿ ತಮ್ಮ ಸ್ವಕ್ಷೇತ್ರದಲ್ಲಿಯೇ ಪ್ರಚಾರಕ್ಕೆ ಆಗಮಿಸದೆ ಸ್ಥಳೀಯ ಮುಖಂಡರಿಗೆ ಚುನಾವಣೆ ಉಸ್ತುವಾರಿ ನೀಡಿದ್ದು ಚರ್ಚೆಗೆ ಎಡೆಮಾಡಿದೆ. ಕಳೆದ ಅವಧಿಯ ಕಾಂಗ್ರೇಸ್ ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ಮುಳುಗಿದ್ದರ ಬಗ್ಗೆ ಸಾರ್ವಜನೀಕ ವಲಯದಲ್ಲಿ ಚರ್ಚೆಗಳು ಆರಂಭವಾಗುತ್ತಿದ್ದಂತೆ ಇದನ್ನು ಸೂಕ್ಷ್ಮವಾಗಿ ಅರಿತ ಸಚಿವ ದೇಶಪಾಂಡೆ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ಪಕ್ಷದ ಅಭ್ಯರ್ಥಿಗಳಿಗೆ ಸೂಕ್ಷ್ಮ ಸಲಹೆ-ಸೂಚನೆಗಳನ್ನು ನೀಡಿ ತನ್ನ ಆಪ್ತ ವಿಪ ಸದಸ್ಯ ಘೊಟ್ನೇಕರ ಅವರಿಗೆ ಚುನಾವಣೆ ಉಸ್ತುವಾರಿ ನೀಡಿ ತನ್ನ ಪ್ರಾಮಾಣಿಕ ನಿಲುವನ್ನು ತೊರ್ಪಡಿಸಿದ್ದಾರೆ.
ಪಟ್ಟಣದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳಿಂದ ಈ ಬಾರಿಯ ಪುರಸಭೆ ಚುನಾವಣೆಯನ್ನು ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ನಡುವಿನ ಕಾಳಗ ಎಂದೆ ಬಿಂಬಿಸಲಾಗುತ್ತಿದ್ದು ಇವರೇ ಪಟ್ಟಣದಲ್ಲಿ ಸ್ಟಾರ್ ಪ್ರಚಾರಕರಾಗಿರುವುದು ಇದಕ್ಕೆ ಇಂಬು ನೀಡಿದ್ದು ಯಾರು ಬಹುಮತ ಸಾಧಿಸಲಿದ್ದಾರೆಂದು ಕಾದು ನೋಡಬೇಕಿದೆ.
ನೆಲೆ ಕಳೆದುಕೊಂಡಿರುವ ಜೆಡಿಎಸ್ ಪಕ್ಷ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಗೆ ಬಂದು ತಲುಪಿದ್ದು ಚುನಾವಣಾ ಕಣದಲ್ಲಿ ಧುಮುಕಿರುವ ಪಕ್ಷೇತರರ ಪಾಡು ಅದೇ ಆಗಿದ್ದು 2 ರಾಷ್ಟ್ರೀಯ ಪಕ್ಷಗಳ ನಡುವೆ ತೀವೃ ಪೈಪೊಟಿ ನಡೆಯುತ್ತಿದ್ದು ಮತದಾರರು ಯಾರಿಗೆ ಆಶೀರ್ವದಿಸಲಿದ್ದಾರೆಂದು ಕಾದು ನೋಡಬೇಕಿದೆ.
Leave a Comment