ಹಳಿಯಾಳ: ಇಂದಿನ ಆಧುನಿಕ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ತಾಂತ್ರಿಕ ಜ್ಞಾನವನ್ನು ಹೊಂದಿದ ಇಂಜನಿಯರಿಂಗ್ ವಿದ್ಯಾರ್ಥಿಗಳು ಪ್ರತಿ ದಿನ ಜಗತ್ತಿನಲ್ಲಿ ನಡೆಯುವ ಹೊಸ ಸಂಶೋಧನೆಗಳತ್ತ ತಮ್ಮ ಆಸಕ್ತಿಗಳನ್ನು ವಹಿಸಿ ನವೀನ ಮತ್ತು ಕೌಶಲ ಹೊಂದಿದ ತಂತ್ರಜ್ಞಾನಗಳನ್ನು ಆವಿಷ್ಕರಿಸಬೇಕಾಗಿದೆ ಎಂದು ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮುಖ್ಯಸ್ಥ ಡಾ|| ಎ.ಎಚ್ ಮಿಶ್ರಿಕೋಟಿ ಕರೆ ನೀಡಿದರು.
ಪಟ್ಟಣದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ಕ್ವಾಡ್ಕಾಪ್ಟರ್ ಕಾರ್ಯಾಗಾರ ಉಧ್ಘಾಟಿಸಿ ಅವರು ಮಾತನಾಡಿದರು.
ಮೆಕ್ಯಾನಿಕಲ್ ಇಂಜನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಆರ್.ಎನ್ ಪಾಟೀಲ್ ಮಾತನಾಡಿ, ಇಂದಿನ ತಾಂತ್ರಿಕ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಸಂಶೋಧನೆ ಸೇರಿದಂತೆ ಇನ್ನಿತರ ತಾಂತ್ರಿಕ ಅಂಶಗಳ ಕುರಿತು ಮಾಹಿತಿ ನೀಡಲಿದೆ. ಅದರ ಉಪಯೋಗ ಪಡೆದು ಮುಂದಿನ ದಿನಗಳಲ್ಲಿ ಹೆಚ್ಚಿನ ತಾಂತ್ರಿಕ ಅಧ್ಯಯನ ನಡೆಸಬೇಕೆಂದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಕ್ವಾಡ್ಕಾಪ್ಟರ್ ತಂತ್ರಜ್ನಾನ, ನಿರ್ಮಾಣ ಮತ್ತು ಕಾರ್ಯ ವೈಖರಿಯ ಕುರಿತು ತರಬೇತಿಯನ್ನು ನೀಡಲಾಯಿತು. ಮಹಾವಿದ್ಯಾಲಯದ ಆವರಣದಲ್ಲಿ ನೀಡಿದ ಕ್ವಾಡ್ಕಾಪ್ಟರ್ ಹಾರಾಟ ಪ್ರಾತ್ಯಕ್ಷೀಕೆಯು ನೋಡುಗರ ಕಣ್ಮನ ಸೆಳೆಯಿತು. ಹುಬ್ಬಳ್ಳಿಯ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ಕ್ವಾಡ್ಕಾಪ್ಟರ್ ಬಳಗವಾದ ಎರೊ ಕೆಎಲ್ಇಯ 10 ಸದಸ್ಯರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.ಪ್ರೊ. ನವೀನ್ ಸಿ ಎಸ್, ಪ್ರೊ. ದೀಪಕ ಲೋಕರೆ ಇದ್ದರು.
Leave a Comment