ಹಳಿಯಾಳ :- ಕೇಂದ್ರ ಬಿಜೆಪಿ ಸರ್ಕಾರ ಪೇಟ್ರೋಲ್, ಡಿಸೆಲ್ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದು. ಹಗಲು ದರೊಡೆ ನಡೆಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕಿಡಿ ಕಾರಿದರು.
ಕಾಂಗ್ರೇಸ್ ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅವರ ಹಾಗೂ ಬ್ಲಾಕ್ ಕಾಂಗ್ರೇಸ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೇರವಣಿಗೆ ಬಳಿಕ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಎನ್ಡಿಎ ಸರ್ಕಾರ ತನ್ನ ಅವೈಜ್ಞಾನಿಕ ನೀತಿ ಹಾಗೂ ಧೋರಣೆಗಳಿಂದ ದೇಶದ ಜನತೆಯ ಬದುಕನ್ನು ವಿನಾಶದ ಅಂಚಿಗೆ ತಂದಿದೆ. ಕೇವಲ ಪೊಳ್ಳು ಭಾಷಣಗಳ ಮೂಲಕ ಅನೇಕ ಭ್ರಮೆಗಳನ್ನು ಸೃಷ್ಠಿಸಿ ರೈತರಿಗೆ, ಕೂಲಿಕಾರರು, ಬಡವರು, ಮೀನುಗಾರರು ಇತರರಿಗೆ ಜೀವನ ನಿರ್ವಹಣೆ ಮಾಡಲು ಆಗದಂತಹ ಸಂಕಷ್ಠದ ಕೂಪಕ್ಕೆ ತಳ್ಳಿದ್ದಾರೆಂದು ಆರೋಪಿಸಿದರು.
ಯುಪಿಎ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್-60,ಡಿಸೆಲ್-40 ಹಾಗೂ ಎಲ್ಪಿಜಿ 400ರೂ ಇತ್ತು ಆದರೇ ಈಗ 83,75 ಹಾಗೂ 810 ರೂ. ಆಗಿರುವುದು ಖಂಡನೀಯ. ನೋಟಬ್ಯಾನ್ ಮಾಡಿ ಕೂಡ ಜನಸಾಮಾನ್ಯರಿಗೆ ತೊಂದರೇ ನೀಡಿರುವ ಬಿಜೆಪಿ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ ಏರಿಕೆ ಆಗಿರುವ ದರಗಳನ್ನು ಇಳಿಸಿ ಜನಸಾಮಾನ್ಯರಿಗೆ ಸಹಕರಿಸುವಂತೆ ಘೊಟ್ನೇಕರ ಆಗ್ರಹಿಸಿದರು.
ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೇರವಣಿಗೆ ಮೂಲಕ ಶಿವಾಜಿ ವೃತ್ತದ ವರೆಗೆ ಪ್ರತಿಭಟನಾ ಮೇರವಣಿಗೆ ನಡೆದು ಕೇಂದ್ರ ಸರ್ಕಾರದ ವಿರುದ್ದ ಘೊಷಣೆಗಳನ್ನು ಮೊಳಗಿಸಲಾಯಿತು. ಬೆಳಿಗ್ಗೆಯಿಂದ ಕಾಂಗ್ರೇಸ್ ಕಾರ್ಯಕರ್ತರು ಬೈಕ್ಗಳಲ್ಲಿ ಪಟ್ಟಣದಾದ್ಯಂತ ಸಂಚರಿಸಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಬಂದ್ಗೆ ಸಹಕರಿಸುವಂತೆ ಆಗ್ರಹಿಸಿದರು.
ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ಗಳು ಹಾಗೂ ಖಾಸಗಿ ವಾಹನಗಳು ರಸ್ತೆಗಳು ಇಳಿಯಲಿಲ್ಲ. ಶಾಲಾ-ಕಾಲೇಜುಗಳಿಗ ರಜೆ ಘೋಷಿಸಲಾಗಿತ್ತು. ಬಹುತೇಕ ಎಲ್ಲ ಅಂಗಡಿ ಸಂಕೀರ್ಣಗಳು, ಹೊಟೆಲ್ಗಳು ಮುಚ್ಚಲ್ಪಟ್ಟಿದ್ದವು. ಮಧ್ಯಾಹ್ನ 2 ಗಂಟೆಯ ಬಳಿಕ ವಾಹನ ಸಂಚಾರ ಆರಂಭವಾದರೇ ಅಂಗಡಿ, ಹೊಟೆಲ್ಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟು ಆರಂಭಿಸಿದವು.
ಮುಖಂಡರಾದ ಖಯ್ಯಾಮ ಮುಗದ, ಉಮೇಶ ಬೋಳಶೆಟ್ಟಿ, ನೂತನ ಪುರಸಭಾ ಸದಸ್ಯರಾದ ಸುವರ್ಣಾ ಮಾದರ, ಬಸಾಪುರ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಪುರಸಭೆ ಸದಸ್ಯರಾದ ಅಜರ ಬಸರಿಕಟ್ಟಿ, ಅನಿಲ ಚವ್ವಾಣ, ಸುರೇಶ ತಳವಾರ ಇತರ ಪ್ರಮುಖರು ಇದ್ದರು.
ಬಾಕ್ಸ್ ಐಟಮ್ :- ಪಟ್ಟಣದ ಶಿವಾಜಿ ವೃತ್ತದಲ್ಲಿ ಪ್ರತಿಭಟನಾಕಾರರು ಟಯರ್ಗಳನ್ನು ಸುಡಲು ಮುಂದಾದಾಗ ಪೋಲಿಸ್ ಇಲಾಖೆಯವರು ಪರಿಸರ ಮಾಲಿನ್ಯವಾಗುತ್ತದೆ ಟಯರ್ಗೆ ಬೆಂಕಿ ಹಚ್ಚದಂತೆ ಮನವಿ ಮಾಡಿದರು ಕೇಳದ ಪ್ರತಿಭಟನಾಕಾರರು 3 ಟಯರ್ಗಳಿಗೆ ಬೆಂಕಿ ಹಚ್ಚಿದರು ಇದರಿಂದ ಸುತ್ತಲ ಪರಿಸರದಲ್ಲಿ ಭಾರಿ ಪ್ರಮಾಣದಲ್ಲಿ ದುರ್ವಾಸನೆಯುಕ್ತ ಹೊಗೆ ಆವರಿಸಿತು. ತಕ್ಷಣ ಪೋಲಿಸರು ಬಕೆಟ್ಗಳಲ್ಲಿ ನೀರು ತಂದು ಸುರಿದು ಬೆಂಕಿ ನಂದಿಸಿ ವಾಯುಮಾಲಿನ್ಯ ತಡೆದು ತಮ್ಮ ಪರಿಸರ ಕಾಳಜಿ ತೊರ್ಪಡಿಸಿದರು.
Leave a Comment