ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಸಿದ್ದಿ ಸಮುದಾಯವನ್ನು ಬುಡಕಟ್ಟು ಮೂಲ ನಿವಾಸಿಗಳೆಂದು ಘೋಷಿಸಬೇಕು, ಉಕ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಿಸಬೇಕು ಹಾಗೂ ಇತರೆ ಅರಣ್ಯವಾಸಿಗಳಿಗೆ 2006ರ ಆದೇಶದ ಪ್ರಕಾರ ಅರಣ್ಯ ಕಾಯ್ದೆ ಅಡಿಯಲ್ಲಿ ಸಮುದಾಯಿಕ ಹಕ್ಕು ಹಾಗೂ ಭೂಮಿಯನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ನೇತೃತ್ವದಲ್ಲಿ ಸಿದ್ದಿ ಸಮುದಾಯದವರು ಸೋಮವಾರ ಹಳಿಯಾಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಿನ್ ಇಂಡಿಯಾ ಟ್ರಸ್ಟ್ ದಾಂಡೆಲಿ, ಸಿದ್ದಿ ಸಮುದಾಯ ಸಂಘಟನೆಗಳು ಹಾಗೂ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ನೇತೃತ್ವದಲ್ಲಿ ನೂರಾರು ಸಿದ್ದಿ ಸಮುದಾಯದವರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೇರವಣೀಗೆ ಮೂಲಕ ಇಲ್ಲಿಯ ಮಿನಿ ವಿಧಾನಸೌಧ ಎದುರು ಆಗಮಿಸಿ ಪ್ರತಿಭಟನೆ ನಡೆಸಿದರು.
ಅರಣ್ಯವಾಸಿಗಳು ಹಾಗೂ ತೀರಾ ಹಿಂದೂಳಿದ ಸಮುದಾಯವಾದ ಬುಡಕಟ್ಟು ಸಿದ್ದಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು 1977-78ನೇ ಸಾಲಿನಿಂದ ಅನೇಕ ಸಂಘಟನೆಗಳನ್ನು ಕಟ್ಟಿಕೊಂಡು ಸಾವಿರಾರು ಹೊರಾಟಗಳನ್ನು ನಡೆಸಿಕೊಂಡು ಬಂದಿದ್ದರು ಈವರೆಗೆ ಸಮಾಜಕ್ಕೆ ಸಿಗಬೇಕಾದ ನ್ಯಾಯ ದೊರಕಿಲ್ಲ ಎಂದು ಮುಖಂಡ ದಿಯೋಗ ಬಸ್ತ್ಯಾಂವ ಸಿದ್ದಿ ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಸರ್ಕಾರಕ್ಕೆ ಬರೆದ ಮನವಿಯ ಪ್ರತಿಯನ್ನು ಸಲ್ಲಿಸಿದರು.
ಮನವಿಯಲ್ಲಿ ಪ್ರಕೃತಿ, ನೆಲ-ಜಲ-ಅರಣ್ಯ ಆರಾಧಕರಾದ ಬುಡಕಟ್ಟು ಸಿದ್ದಿ ಸಮುದಾಯವನ್ನು ಶೋಷಣೆ ಮಾಡಲಾಗುತ್ತಿದೆ. 25-12-2005ರ ಪೂರ್ವದ ದಾಖಲೆಗಳು ಹೊಂದಿದ್ದರೇ ಅರಣ್ಯ ಹಕ್ಕು ಮಾನ್ಯ ಮಾಡಬೇಕೆಂದು ಆದೇಶವಿದ್ದರು. ರಾಜಕಾರಣಿಗಳು ಹಾಗೂ ಅರಣ್ಯ ಇಲಾಖೆ ಷಡ್ಯಂತ್ರದಿಂದ ಜಿಪಿಎಸ್ ಮಾಡುವ ಸಂದರ್ಭದಲ್ಲಿ 2005ರ ನಂತರದ ಅತಿಕ್ರಮಣ ಜಮೀನೆಂದು ಬಿಂಬಿಸಿ ಸಿದ್ದಿ ಜನರ ಭೂಮಿಯನ್ನು ಕಸಿದುಕೊಳ್ಳುವ ಸಂಚು ರೂಪಿಸಲಾಗಿದೆ ಎಂದು ಗಂಭೀರ ಆಪಾದನೆ ಮಾಡಲಾಗಿದೆ.
ಅಲ್ಲದೇ 2006ರ ಆದೇಶದಂತೆ ಗಿರಿಜನರ ಮೂಲ ಹಕ್ಕು ನೀಡುವುದರ ಅಡಿಯಲ್ಲಿ ಅರಣ್ಯವನ್ನೇ ಅವಲಂಬಿತ ಸಿದ್ದಿಗಳಿಗೆ 4 ಹೆಕ್ಟರ್ ಭೂಮಿ ಪ್ರತಿ ಕುಟುಂಬಕ್ಕೆ ಮಾನ್ಯ ಮಾಡಿ ಇತರೇ ಸಮುದಾಯಗಳಂತೆ ಜೀತ ಪದ್ದತಿಯಿಂದ ಮುಕ್ತ ಮಾಡಿ ಬದುಕಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಲಾಗಿದೆ.
ಮನವಿಯ ಪ್ರತಿಗಳನ್ನು ಸಚಿವ ಆರ್.ವಿ.ದೇಶಪಾಂಡೆ ಹಾಗೂ ಅರಣ್ಯ ಖಾತೆ ಸಚಿವರಿಗೂ ರವಾನಿಸಲಾಗಿದೆ. ಪ್ರತಿಭಟನೆಯಲ್ಲಿ ಮುಖಂಡ ದಿಯೋಗ ಸಿದ್ದಿ, ಅಲಿಸಾಬ, ಇಮಾಮ, ಬಿಯಾಮಿ, ನನ್ನೆಸಾಬ, ಸುನೀಲ್ ಸಿದ್ದಿ,. ಮರಿಯಾಂಬಿ, ಗಫಾರಸಾಬ ಸಿದ್ದಿ, ಹುಸೇನಸಾಬ, ಬುಡ್ಡೇಸಾಬ ಸಿದ್ದಿ ಇತರರು ಇದ್ದರು.
Leave a Comment