ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ತಮಗೆ ಕವಡೆ ಕಾಸಿನ ಕಿಮತ್ತು ನೀಡಲಾಗುತ್ತಿಲ್ಲ ಎಂದು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿರುವ ಉ.ಕ.ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತನವರು ಅಭಿವೃದ್ದಿ ಕಾರ್ಯಗಳಿಗೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ನಡೆಸಿದ ತುರ್ತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನಪ್ರತಿನಿಧಿಗಳಿಗೆ ಗೌರವ ಇತ್ತು ಆದರೇ ಈ ಸರ್ಕಾರದ ಅವಧಿಯಲ್ಲಿ ಜನಪ್ರತಿನಿಧಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ ಎಂದು ಬೇಸರದಿಂದ ನುಡಿದರು.
ಸಚಿವ ದೇಶಪಾಂಡೆ ವಿರುದ್ದ ಅಸಮಾಧಾನ :- ಜಿಲ್ಲೆಯಲ್ಲಿ ಉಧ್ಭವಿಸಿರುವ ಮರಳು ಸಮಸ್ಯೆಯಿಂದ ಕಾಮಗಾರಿಗಳು ಸ್ಥಗಿತವಾಗಿದ್ದು ಕಾರ್ಮಿಕರು ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾಗಿದೆ. ಅಲ್ಲದೇ ಸಾವಿರಾರು ಜನರು ನಿರ್ಗತೀಕರಾಗುವ ಆತಂಕದಲ್ಲಿದ್ದಾರೆ. ಸಮಸ್ಯೆ ಬಗ್ಗೆ 3-4 ತಿಂಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಗಮನಕ್ಕೆ ತಂದರೂ ಕೂಡ ಅವರು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಅಲ್ಲದೇ ಅಧಿಕಾರಿಗಳ ಮೇಲೆ ಅವರ ಹಿಡಿತವಿಲ್ಲವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ತಮ್ಮದೇ ಪಕ್ಷದ ಸಚಿವರ ವಿರುದ್ದ ಘೋಟ್ನೇಕರ ಬಹಿರಂಗವಾಗಿ ಅಸಮಾಧಾನ ಹೋರಹಾಕಿದರು.
ಎಮ್.ಎಲ್.ಸಿ.ಸ್ಥಾನ ಹೋದರು ಚಿಂತೆಯಿಲ್ಲ:- ಜೋಯಿಡಾದ ರಾಮನಗರದಲ್ಲಿ ಹೇರಳವಾಗಿ ನೈಸರ್ಗಿಕವಾಗಿ ಮರಳು ದೊರೆಯುತ್ತದೆ ಇಲ್ಲಿ ಮರಳುಗಾರಿಕೆಯೇ ಕಸುಬಾಗಿತ್ತು ಆದರೇ ಮರಳುಗಾರಿಕೆಗೆ ಕಡಿವಾಣ ಹಾಕಿರುವುದರಿಂದ ಈ ಭಾಗದ ನೂರಾರು ಜನರು ಕೆಲಸವಿಲ್ಲದೇ ಪ್ರತಿನಿತ್ಯ ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ. ಕಾನೂನು ಪ್ರಕಾರ ಸಾಂಪ್ರದಾಯಿಕ ಮರಳುಗಾರಿಕೆಗೆ ಪರವಾನಿಗೆ ನೀಡಿ ಎಂದು ಆಗ್ರಹಿಸಿದ ಘೋಟ್ನೇಕರ ಮರಳು ಸಮಸ್ಯೆ ಕುರಿತು ಹೋರಾಟ ನಡೆಸುತ್ತಿರುವವರಿಗೆ ನನ್ನ ಸಂಪೂರ್ಣ ಬೆಂಬಲಿದೆ. ಈ ಸಮಸ್ಯೆ ಬಗೆಹರಿಯದೆ ಇದ್ದರೇ ತಾವು ಕೂಡ ಬಹಿರಂಗವಾಗಿ ಸರ್ಕಾರದ ವಿರುದ್ದವು ಹೋರಾಟಕ್ಕೆ ಸಿದ್ದ ಇದಕ್ಕಾಗಿ ತಮ್ಮ ಎಮ್.ಎಲ್.ಸಿ ಸ್ಥಾನ ಹೋದರು ಚಿಂತೆಯಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸರ್ವಾಧಿಕಾರಿ ಧೋರಣೆ :- ಗುಡ್ಡಗಾಡು ಪ್ರದೇಶಗಳಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಈ ಸ್ವತ್ತುವಿನಿಂದ ರೀಯಾಯತಿ ನೀಡಲಾಗಿತ್ತು ಆದರೇ ಮನುಷ್ಯತ್ವ, ಅಂತಃಕರಣ ಇಲ್ಲದ ಅಧಿಕಾರಿಗಳು ಈ ಸ್ವತ್ತನ್ನು ಮತ್ತೇ ಜಾರಿಗೆ ತಂದಿದ್ದು ಇದಕ್ಕೆ ತಮ್ಮ ವ್ಯಾಪಕ ವಿರೋಧವಿದೆ ಎಂದು ಹೇಳಿದ ಘೋಟ್ನೇಕರ ಎಲ್ಲಾ ಇಲಾಖೆಗಳ ಮೇಲೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಹಸ್ತಕ್ಷೇಪ ಮಾಡುತ್ತಿದ್ದು ಸರ್ವಾಧಿಕಾರಿ ಧೊರಣೆ ತೊರುತ್ತಿದ್ದಾರೆ ಎಂದು ಗಂಭೀರ ಆಪಾದನೆ ಮಾಡಿದರು.
ಇನ್ನೂ ಹಳಿಯಾಳ ಭಾಗದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಗುತ್ತಿಗೆ ಕಾಮಗಾರಿಗಳನ್ನು ನೀಡದೆ ಆಂಧ್ರ, ತಮಿಳ್ನಾಡು ರಾಜ್ಯಗಳ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಮೂಲಕ ಸ್ಥಳೀಯ ಗುತ್ತಿಗೆದಾರರ ಬದುಕನ್ನು ಅಭದ್ರಗೊಳಿಸುವ ಹುನ್ನಾರ ಅಧಿಕಾರಿಗಳು ನಡೆಸಿದ್ದಾರೆ. ಕಾಮಗಾರಿಗಳಿಗೆ ಟೆಂಡರ್ ಹಾಕಿದಾಗ ಘೋಟ್ನೇಕರ ಹೆಸರು ಬಂದ ತಕ್ಷಣ ಉದ್ದೇಶಪೂರ್ವಕವಾಗಿ ಆ ಟೆಂಡರ್ಗಳನ್ನು ರದ್ದುಗೊಳಿಸಲಾಗುತ್ತಿದೆ. ಕಾಮಗಾರಿಗಳು ನಡೆಸಿ 6 ತಿಂಗಳಿಗೂ ಹೆಚ್ಚು ಕಾಲ ಕಳೆದರು, ಸರ್ಕಾರದಿಂದ ಹಣ ಜಮೆಯಾಗಿದ್ದರೂ ಸಹ ಕಾಮಗಾರಿ ಮಾಡಿದವರಿಗೆ ಬಿಲ್ ಪಾವತಿಸದೆ ಸತಾಯಿಸಲಾಗುತ್ತಿದೆ. ಪ್ರಭಾವಿಗಳಿಗೆ ಈ ರೀತಿ ಅಧಿಕಾರಿಗಳು ಸತಾಯಿಸುತ್ತಿರುವಾಗ ಉಳಿದ ಜನಸಾಮಾನ್ಯರ ಪಾಡೇನು ಎಂದು ಘೋಟ್ನೇಕರ ಆತಂಕ ವ್ಯಕ್ತಪಡಿಸಿದರು.
ಇನ್ನೂ ಜಿಲ್ಲೆಯಲ್ಲಿ ಮರಳು ಮಾಫಿಯಾ ಇಲ್ಲ ಅಧಿಕಾರಿಗಳೇ ಮಾಫಿಯಾ ಕಿಂಗ್ ಆಗಿದ್ದಾರೆ ಎಂದು ಕಿಡಿಕಾರಿದ ಅವರು ಪರಿಸರವಾದಿಗಳಿಂದಲೇ ಇಂದು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
Leave a Comment