ಹಳಿಯಾಳ : ಹಿಂದೆಂದಿಗಿಂತಲೂ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಅತ್ಯಂತ ಶ್ರದ್ದಾ-ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣ ಮಾತ್ರವಲ್ಲದೇ ಗ್ರಾಮಾಂತರ ಭಾಗದಲ್ಲಿ ಕೂಡ 63 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘಟನೆಯವರು ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ಬೀದಿ, ವೃತ್ತಗಳಲ್ಲಿ ಕನ್ನಡ ಬೃಹತ್ ಬಾವುಟಗಳನ್ನು, ಬ್ಯಾನರ್, ಬಂಟಿಗ್ಸ್ಗಳನ್ನು ಹಚ್ಚುವ ಮೂಲಕ ರಾಜ್ಯೋತ್ಸವಕ್ಕೆ ಕಳೆ ತಂದಿದ್ದಾರೆ ಅಲ್ಲದೇ ಕನಾಟಕ ರಕ್ಷಣಾ ವೇದಿಕೆಯವರು 196 ಅಡಿ(63 ಮೀಟರ್) ಉದ್ದದ ಬೃಹತ್ ಕನ್ನಡ ಬಾವುಟದ ಪ್ರದರ್ಶನ ಹಾಗೂ ಮೇರವಣಿಗೆ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾಕಷ್ಟು ಮೇರಗು ನೀಡಿತು.
ಪಟ್ಟಣದ ಯಲ್ಲಾಪೂರ ನಾಕಾದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿ, ಅರ್ಬನ್ ವೃತ್ತದಲ್ಲಿರುವ ಸಂಗೋಳ್ಳಿ ರಾಯಣ್ಣ ಪುಥ್ಥಳಿ, ಶಿವಾಜಿ ವೃತ್ತದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಪ್ರತಿಮೆ, ಬಸವೇಶ್ವರ ಪುಥ್ಥಳಿ ಮತ್ತು ಕನ್ನಡಾಂಭೆದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಯ ಕರ್ನಾಟಕ ಸಂಘಟನೆಯವರು ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು.
ಬೆಳಿಗ್ಗೆ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ತಾಲೂಕಾ ದಂಡಾಧಿಕಾರಿ ವಿದ್ಯಾಧರ ಗುಳಗಳಿ ಧ್ವಜಾರೋಹಣ ನೆರವೆರಿಸಿ ಮಾತನಾಡಿ ನಾಡು ನುಡಿ, ರಾಷ್ಟ್ರದ ಬಗ್ಗೆ ಎಲ್ಲರು ಅಭಿಮಾನ ಹೊಂದಿರಬೇಕು ನೆಲ,ಜಲ ರಕ್ಷಣೆ ಹಾಗೂ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಿ ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಚ್ಚತಾ ಅಭಿಯಾನದಲ್ಲಿ ನಿರಂತರವಾಗಿ ಪಾಲ್ಗೊಂಡವರನ್ನು, ಕನ್ನಡ ಮಾಧ್ಯಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಥಬ್ದ ಚಿತ್ರ
ಇಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೇರವಣಿಗೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಬಳಿಕ ಪಥ ಸಂಚಲನ, ಪ್ರಭಾತ ಪೇರಿ ಹಾಗೂ 63ಮೀ. ಉದ್ದದ ಕನ್ನಡ ಬಾವುಟದ ಮೇರವಣಿಗೆಯು ವಿವಿಧ ರೂಪಕಗಳೊಂದಿಗೆ ಜಾಥಾ ನಡೆಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ಜೀಜಾಮಾತಾ ಸಂಘಟನೆಯ ಮಂಗಲಾ ಕಶೀಲಕರ, ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ತಾಪಂ ಸದಸ್ಯರು, ಪುರಸಭೆ ಎಲ್ಲ ನೂತನ ಸದಸ್ಯರು, ಮುಖಂಡ ರಾಜೂ ಧೂಳಿ, ಹಿರಿಯ ನಾಗರಿಕ, ಕ್ಷೇಮಾಭಿವೃದ್ದಿ ಸಂಘದವರು, ಸಿಂಹಕೂಟದವರು, ತಾಪಂ ಇಓ ಮಹೇಶ ಕುರಿಯವರ, ಅಧಿಕಾರಿ ವರ್ಗದವರು ಮೊದಲಾದವರು ಇದ್ದರು.
Leave a Comment