ಬೆಂಗಳೂರು, ನವೆಂಬರ್ 9, 2018- ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ನವೆಂಬರ್ 12ರಿಂದ 18ರವರೆಗೆ ಕಂದಾಯ ಇಲಾಖೆಯಲ್ಲಿ `ಕಡತ ವಿಲೇವಾರಿ ಸಪ್ತಾಹ’ವನ್ನು ಆಚರಿಸಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆಯವರು ಶುಕ್ರವಾರ ತಿಳಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಬಹಳಷ್ಟು ಕಡತಗಳು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗದೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಪ್ತಾಹವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
“ಈ ಅವಧಿಯಲ್ಲಿ ಸಾಮಾನ್ಯ ಕಡತಗಳ ಜತೆಗೆ ಸಮಸ್ಯಾತ್ಮಕ ಕಡತಗಳನ್ನು ಕೂಡ ವಿಲೇವಾರಿ ಮಾಡಲಾಗುವುದು. ಕಡತಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೆಂಬ ಬಗ್ಗೆ ಪ್ರಾದೇಶಿಕ ಆಯುಕ್ತರು, ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮಾಡಲು ಸೂಚಿಸಲಾಗಿದೆ,” ಎಂದು ಸಚಿವ ದೇಶಪಾಂಡೆ ವಿವರಿಸಿದ್ದಾರೆ.
ಸಪ್ತಾಹದ ಕೊನೆಯ ದಿನವಾದ ನ.18ರಂದು ಸಂಬಂಧಿಸಿದ ಎಲ್ಲ ಅಧಿಕಾರಿಗಳೂ ಸಪ್ತಾಹವು ಆರಂಭವಾದ ದಿನವಾದ ನ.12ರಂದು ಬಾಕಿ ಇದ್ದ ಕಡತಗಳೆಷ್ಟು, ಸಪ್ತಾಹದ ಅವಧಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಿರುವ ಕಡತಗಳೆಷ್ಟು ಮತ್ತು ಸಪ್ತಾಹದ ಕೊನೆಯ ಹೊತ್ತಿಗೆ ಇನ್ನೂ ಬಾಕಿ ಇರುವ ಕಡತಗಳೆಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು [email protected] ಗೆ ಕಡ್ಡಾಯವಾಗಿ ಕಳುಹಿಸಬೇಕು ಎಂದು ದೇಶಪಾಂಡೆ ಹೇಳಿದ್ದಾರೆ.
Leave a Comment