ಹಳಿಯಾಳ : ಎಲ್ಲ ಧರ್ಮಗಳು ಮಾನವೀಯ ಮೌಲ್ಯವನ್ನೇ ಸಾರುತ್ತವೆ. ಅಂತಹ ಧರ್ಮಗ್ರಂಥಗಳನ್ನು ರೇಶ್ಮೆ ಬಟ್ಟೆಯಲ್ಲಿ ಸುತ್ತಿಟ್ಟು ಪೂಜಿಸಿದರೇ ಸಾಲದು ಧರ್ಮ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದು ಭಟ್ಕಳದ ಶಮ್ಸ್ ಶಾಲೆಯ ಮುಖ್ಯೋಪಾಧ್ಯಾಯ ರಜಾ ಮಾನ್ವಿ ಹೇಳಿದರು.
ಪಟ್ಟಣದ ಸಂದೇಶ ಗಾರ್ಡನ್ ಸಭಾಂಗಣದಲ್ಲಿ ರಾಬತಾಯೆ ಮಿಲತ್ ವತಿಯಿಂದ ಆಯೋಜಿಸಿದ ಪ್ರವಾದಿ ಮಹಮ್ಮದ ಪೈಗಂಬರವರ ಜಯಂತಿ ಅಂಗವಾಗಿ ಪೈಗಂಬ ಸಂದೇಶ ಸಾರುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಭಾರತ ಜಾತ್ಯಾತೀತ ರಾಷ್ಟ್ರ ಇಲ್ಲಿ ರಾಮ, ರಹಿಮ, ಜೊಸೆಫ್ ಎಲ್ಲರೂ ಒಂದಾಗಿ ಬಾಳುವುದು ಮುಖ್ಯ. ಧಾರ್ಮಿಕ ವಾದ ಬೇರೆ, ಧಾರ್ಮಿಕ ಪ್ರಜ್ಞೆ ಬೇರೆ. ಧಾರ್ಮಿಕ ವಾದ ಕೆಲವೊಂದು ಬಾರಿ ವಿವಾದವನ್ನು ಹಬ್ಬಿಸಬಹುದು. ಆದರೇ ಧಾರ್ಮಿಕ ಪ್ರಜ್ಞೆ ಅರಿವನ್ನು ಮೂಡಿಸುವುದು. ಕಾರಣ ನಾವುಗಳೆಲ್ಲ ನಮ್ಮ ಧರ್ಮಗ್ರಂಥಗಳನ್ನು ಸರಿಯಾಗಿ ಅರ್ಥೈಯಿಸಿಕೊಂಡು ಬದುಕಿನಲ್ಲಿ ಅಳವಡಸಿಕೊಳ್ಳಬೇಕಿದೆ ಎಂದರು.
ಪ್ರವಾದಿ ಮಹಮ್ಮದ ಪೈಗಂಬರವರು ಮನುಷ್ಯನ ಎಲ್ಲ ಸ್ಥಿತಿಯಲ್ಲೂ ಸ್ಥಿತಪ್ರಜ್ಞೆಯನ್ನು ಕಾಯ್ದುಕೊಳ್ಳುವ ಸಂದೇಶವನ್ನು ಸಾರಿದ್ದಾರೆ. ಎಲ್ಲರೂ ನಮ್ಮವರೆಂದು ಭಾವಿಸಿ ಅವರು ಸುಖ-ದುಃಖಕ್ಕೆ ಸ್ಪಂದಿಸಬೇಕು. `ಬೆವರು ಆರುವ ಮುನ್ನ ಕಾರ್ಮಿಕನಿಗೆ ಸಂದಬೇಕಾದ ಹಣವನ್ನು ನೀಡಬೇಕು’ ಎಂದೂ ಹೀಗೆ ನಮ್ಮ ನಡೆ-ನುಡಿ, ಬದುಕು ಭಾವವನ್ನು ತಿದ್ದುವ ಸಂದೇಶಗಳನ್ನು ಸಾರಿದ ಪೈಗಂಬರವರು ಎಲ್ಲೂ ನಾನೇ ದೇವರೆಂದಾಗಲೀ, ದೈವಾಂಶ ಸಂಭೂತಿ ಎಂದಾಗಲಿ ಹೇಳಿಕೊಳ್ಳದೇ ಸೃಷ್ಟಿಕರ್ತನ ಸಂದೇಶ ಸಾರುವ ಸಾಮಾನ್ಯ ಮನುಷ್ಯ ನಾನೆಂದು ಹೇಳಿಕೊಂಡಿದ್ದನ್ನು ಅರಿಯಬೇಕೆಂದರು.
ಸಾನಿಧ್ಯ ವಹಿಸಿದ್ದ ಮೌಲಾನಾ ಮುಫ್ತಿ ಫಯಾಜ್ ಮಾತನಾಡಿ ಇಸ್ಲಾಂ ಎಂಬುದರ ಅರ್ಥವೇ ಶಾಂತಿ ಸಂದೇಶ ಸಾರುವವ ಎಂದು. ದೇಶದಲ್ಲಿ ಶೇ.95ರಷ್ಟು ಜನರಿಗೆ ಅನ್ನ, ಅಶನ, ಶಾಂತಿ, ನೆಮ್ಮದಿ ಅಷ್ಟೇ ಬೇಕಾಗಿದೆ. ಜಗತ್ತಿನ ಯಾವ ಧರ್ಮವೂ ದ್ವೇಷವನ್ನು ಪ್ರಚೋದಿಸುವುದಿಲ್ಲ. ದ್ವೇಷ ಮಾಡುವವರಿಗೆ ಧರ್ಮವೇ ಇಲ್ಲ. ಅವರನ್ನು ಧರ್ಮಿಗಳನ್ನಾಗಿ ನೋಡುತ್ತಿರುವುದರಿಂದಲೇ ಕೋಮುಗಲಭೆಗಳಿಗೆ ನಾಂದಿಯಾಗುತ್ತಿದೆ. ಇಂಥಹ ಮನಃಸ್ಥಿತಿಯನ್ನು ಪರಿವರ್ತಿಸಿಕೊಂಡು ಬದುಕಿನ ಮಹತ್ವ ತಿಳಿದುಕೊಂಡು ಪರಸ್ಪರ ಪ್ರೀತಿ, ಪ್ರೇಮ, ಸ್ನೇಹ, ಸಂಹಿಷ್ಣತೆಯಿಂದ ಬಾಳಬೇಕಿದೆ ಎಂದರು.
ಭಟ್ಕಳದ ಶಮ್ಸ್ ಶಾಲೆಯ ನಿರ್ದೇಶಕ ಮಹಮ್ಮದ ತಲಹಾ ಹಾಗೂ ಬಸವಕೇಂದ್ರದ ಅಧ್ಯಕ್ಷ ಚಂದ್ರಕಾಂತ ಅಂಗಡಿ, ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ಶ್ರೀಕಾಂತ ಹೂಲಿ ಸಾಂದರ್ಭಿಕ ಮಾತನಾಡಿದರು.
ವೇದಿಕೆಯ ಮೇಲೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಶೋಕ ಪಾಟೀಲ, ರಾಬತಾಯೆ ಮಿಲತ್ನ ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಪಿ. ಮುಜಾವರ, ಮೌಲಾನಾ ನಸ್ಸರುಲ್ಲಾ, ದಿಲೀಪ ಪಡ್ನಿಸ್, ಜಿ.ಡಿ. ಗಂಗಾಧರ, ಇರ್ಫಾನ್ ದೊಡ್ಡಮನಿ, ಮಹಮ್ಮದಗೌಸ ಮುಲ್ಲಾ, ಅಶೋಕ ಕಣ ಮೆಹಳ್ಳಿ ಇದ್ದರು.
Leave a Comment