ಹಳಿಯಾಳ:- ಇ.ಐ.ಡಿ ಪ್ಯಾರಿ ಶುಗರ್ಸ್ ಹುಲ್ಲಟ್ಟಿ, ಆರ್.ಟಿ.ಓ ದಾಂಡೇಲಿ, ಪೋಲಿಸ್ ಇಲಾಖೆ ಹಳಿಯಾಳ ಹಾಗೂ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕದ ವತಿಯಿಂದ ಕಬ್ಬು ಸಾಗಿಸುವ ವಾಹನಗಳ ಚಾಲಕರು ಹಾಗೂ ಮಾಲಕರಿಗಾಗಿ ಅಪಘಾತ ತಡೆಗಟ್ಟುವ ಬಗ್ಗೆ ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ದಾಂಡೇಲಿ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಸಿ.ಡಿ. ನಾಯ್ಕ ಹಾಗೂ ಅಸಾದುಲ್ಲಾ ಬೇಗ್ ಮಾತನಾಡಿ ಕಬ್ಬಿನ ಓವರ್ ಲೋಡಿಂಗ, ಮೊಬೈಲ್ ಬಳಸಿ ಹಾಗೂ ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿಸಿದರು ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸುವ ಎಚ್ಚರಿಕೆಯನ್ನ ನೀಡಿದರು.
ಸಿ.ಪಿ.ಐ ಬಿ.ಎಸ್.ಲೋಕಾಪುರ ಮಾತನಾಡಿ ಓವರ ಲೋಡಿಂಗ, ಲೌಡಸ್ಪೀಕರ್ ಬಳಕೆ, ಪ್ರಖರ ಬೆಳಕನ್ನು ಸೂಸುವ ದೀಪಗಳನ್ನು ವಾಹನಗಳಿಗೆ ಅಳವಡಿಸದಂತೆ ಸೂಚಿಸಿ, ದಾರಿಯಲ್ಲಿ ಕೆಟ್ಟು ನಿಲ್ಲುವ ವಾಹನಗಳಿಗೆ ಸೂಕ್ತ ಎಚ್ಚರಿಕೆಯನ್ನು ಸೂಚಿಸುವ ಫಲಕಗಳನ್ನು ಬಳಸಿ ರಾತ್ರಿ ಸಮಯದಲ್ಲಿ ಆಗುವ ಅಪಘಾತಗಳನ್ನು ತಡೆಯುವಂತೆ ವಾಹನ ಚಾಲಕರಿಗೆ ತಿಳಿಸಿದರು. ಕಂದಾಯ ಇಲಾಖೆಯ ಉಪ ತಹಶಿಲ್ದಾರ್ ಜಿ.ಕೆ ರತ್ನಾಕರ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಕಬ್ಬಿನ ಗಾಡಿಗಳನ್ನು ಸುರಕ್ಷಿತವಾಗಿ ಚಾಲನೆ ಮಾಡುವಂತೆ ಸೂಚಿಸಿದರು.
ಇ.ಐ.ಡಿ ಪ್ಯಾರಿ (ಇಂಡಿಯಾದ) ಜಿ.ಎಮ್ ರವಿಂದ್ರ ದೇಸಾಯಿ ಮಾತನಾಡಿ ಕಬ್ಬು ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಕೆಂಪು ಪಟ್ಟಿಯನ್ನು ಬಳಸಿ ರಾತ್ರಿಯಲ್ಲಿ ಜರಗುವ ಅಪಘಾತಗಳನ್ನು ತಪ್ಪಿಸಲು ಸೂಚಿಸಿದರು.
ಈ ಸಂದಂರ್ಭದಲ್ಲಿ ಎನ್.ಎಸ್.ಎಸ್ ವಿಧ್ಯಾರ್ಥಿಗಳ ಸಹಯೋಗದೊಂದಿಗೆ ಟ್ರ್ಯಾಕ್ಟರಗಳಿಗೆ ಕೆಂಪು ಪಟ್ಟಿಗಳನ್ನು ಹಾಕಲಾಯಿತು. ಕಾರ್ಯಕ್ರಮದಲ್ಲಿ ಎ.ಜಿ.ಎಮ್ ನಾರಾಯಣ ಹಿರೇಮಠ, ಡಿ.ಪಿ.ಐ.ಟಿ.ಐ ಎನ್.ಎಸ್.ಎಸ್ ಅಧಿಕಾರಿ ದಿನೇಶ ಡಿ ನಾಯ್ಕ, ರಾಜೇಂದ್ರ ಮೂಳೆ ಇತರರು ಇದ್ದರು.
Leave a Comment