ಹಳಿಯಾಳ:- ಸರ್ಕಾರ ಮಕ್ಕಳ ಶ್ರೇಯೋಭಿವೃದ್ದಿಗಾಗಿ ಸಾಕಷ್ಟು ಅನುದಾನ ನೀಡುತ್ತಿದೆ. ಮಕ್ಕಳ ಮೇಲೆ ಸರ್ಕಾರ ಖರ್ಚು ಮಾಡುವ ಪೈಸೆ-ಪೈಸೆ ಕೂಡ ಅವರಿಗೆ ತಲುಪಬೇಕು ಎಂದು ಉಕ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ತಾಕಿತು ಮಾಡಿದರು.
ಹಳಿಯಾಳ ತಾಲೂಕಿನ ಬಾಣಸಗೇರಿ ಗ್ರಾಮದಲ್ಲಿ 9.98 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಸಮಾಜದಲ್ಲಿ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಕಡಿಮೆ ಆಗಿದ್ದು ಕಮರ್ಷಿಯಲ್ ಲೈಫ್ ನಡೆಸಲಾಗುತ್ತಿದೆ. ಮಾನವ ಮಾನವನಾಗಿ ಬಾಳಬೇಕು. ಬಡವರ ಮೇಲೆ ಪ್ರೀತಿ ವಿಶ್ವಾಸವಿರಬೇಕು ಎಂದ ಸಚಿವರು ಮೊರಾರ್ಜಿ ವಸತಿ ಶಾಲೆಗಿದ್ದ ನೀರಿನ ಸಮಸ್ಯೆಯನ್ನು ಸ್ಥಳದಲ್ಲೇ ಬಗೆಹರಿಸಿ ಮತ್ತೇ ವಿವಿಧ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ ಹಳಿಯಾಳ ಕ್ಷೇತ್ರ ಶಿಕ್ಷಣ ಕ್ಷೇತ್ರವಾಗಿ ಬದಲಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿಯೊಂದು ಮಕ್ಕಳಿಗೂ ಸರಿಯಾದ ಶಿಕ್ಷಣ ನೀಡುವಲ್ಲಿ ಪಾಲಕರು ಕಾಳಜಿ ವಹಿಸುವಂತೆ ಕರೆ ನೀಡಿದರು.
-:ಜ್ಞಾನೇಶ್ವರಿ ಪಾರಾಯಣ-ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಭೇಟಿ:-
ಬಾಣಸಗೇರಿ ಕಾರ್ಯಕ್ರಮಕ್ಕೂ ಮೊದಲು ಸಚಿವ ದೇಶಪಾಂಡೆ ಅವರು ಹಳಿಯಾಳ ತಾಲೂಕ ವಾರಕರಿ ಸಂಘ ಹಾಗೂ ಸದ್ಬಕ್ತರ ಆಶ್ರಯದಲ್ಲಿ 31ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಹಳಿಯಾಳ ನಗರದ ಬೆಳಗಾಂವ ರಸ್ತೆಯಲ್ಲಿರುವ ಗಣೇಶ ನಗರ(ಗುತ್ತಿಗೇರಿ)ಯಲ್ಲಿ ನಿರ್ಮಿಸಿದ ಮಂದಿರದಲ್ಲಿ ಕಳೆದ 7 ದಿನಗಳಿಂದ ನಡೆಯುತ್ತಿರುವ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಸೋಹಳಾ ಹಾಗೂ ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಮತ್ತು ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಸಾಧು-ಸಂತರ ಆಶೀರ್ವಾದ ಪಡೆದರು.
ಕಾರ್ಯಕ್ರಮಗಳಲ್ಲಿ ವಿ.ಪ.ಸದಸ್ಯ ಘೋಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ ಅವರೊಂದಿಗೆ ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಮಹೇಶ್ರಿ ಮಿಶಾಳೆ, ತಾಪಂ ಅಧ್ಯಕ್ಷೇ ರೀಟಾ ಸಿದ್ದಿ, ನೀಲವ್ವಾ ಮಡಿವಾಳ, ಸದಸ್ಯ ದೇಮಾಣ ಶೀರೋಜಿ, ಬಿಕೆ ಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಮೊದಲಾದವರು ಇದ್ದರು.
Leave a Comment