ಹಳಿಯಾಳ:- ಪಟ್ಟಣದ ಅಂಚಿನಲ್ಲಿರುವ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ನೂರಾರು ವಾಹನಗಳಿಂದ ಪಟ್ಟಣದಲ್ಲಿ ಪ್ರತಿನಿತ್ಯ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದ್ದು ಸಾರ್ವಜನೀಕರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಬಂದೊದಗಿದೆ.
ಪಟ್ಟಣದ ಯಲ್ಲಾಪೂರ ನಾಕಾದಿಂದ ಕೇವಲ 1 ಕೀಮಿ ಅಂತರದಲ್ಲಿರುವ ಹುಲ್ಲಟ್ಟಿ ಪ್ರದೇಶದಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಪ್ರಸ್ತುತ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು ಪ್ರತಿನಿತ್ಯ ಡಬಲ್ ಟ್ರಾಲಿ ಟ್ರಾಕ್ಟರ್, ಲಾರಿಗಳು ಹೀಗೆ ನೂರಾರು ವಾಹನಗಳು ಕಾರ್ಖಾನೆಗೆ ಕಬ್ಬು ಸಾಗಿಸುತ್ತಿವೆ.
ಪ್ರತಿಬಾರಿ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿ ಕೊನೆಯಾಗುವ 4-5 ತಿಂಗಳು ಪಟ್ಟಣದಲ್ಲಿ ಟ್ರಾಫಿಕ್(ಸಂಚಾರ) ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆ ಉಧ್ಭವಿಸುತ್ತಿದ್ದು ಪಾದಚಾರಿಗಳು, ವಾಹನ ಸವಾರರು, ವಿದ್ಯಾರ್ಥಿಗಳು ಹೀಗೆ ಸಾರ್ವಜನೀಕರೆಲ್ಲರೂ ಸಾಕಷ್ಟು ಸಮಸ್ಯೆ ಎದುರಿಬೇಕಾಗುತ್ತಿದೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಮಾತ್ರವಲ್ಲದೇ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗಿದೆ.ಬಗ್ಗೆ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಜೀಜಾಮಾತಾ ಮಹಿಳಾ ಸಂಘಟನೆ, ಹಿರಿಯ ನಾಗರಿಕರ ವೇದಿಕೆ, ಲಯನ್ಸ್ ಕ್ಲಬ್, ದಲಿತ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ತಾಲೂಕಾಡಳಿತಕ್ಕೆ ಲಿಖಿತವಾಗಿ ದೂರು ನೀಡಿದರು. ಮನವಿಗಳನ್ನು ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನ ಕಂಡು ಬರುತ್ತಿಲ್ಲ. ಬದಲಾಗಿ ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಲೇ ಇರುವುದು ಸಾರ್ವಜನೀಕರಿಗೆ ತೀವೃ ಬೇಸರವನ್ನುಂಟು ಮಾಡಿದೆ.
ಇನ್ನೂ ಸ್ಥಳೀಯ ಸಕ್ಕರೆ ಕಾರ್ಖಾನೆಯವರು ತಮ್ಮ ಕಂಪೆನಿಗೆ ಕಬ್ಬು ಸಾಗಿಸುವ ವಾಹನಗಳನ್ನು ತಾವು ಭೂಸ್ವಾಧಿನ ಪಡಿಸಿಕೊಂಡಿರುವ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ನಿಲ್ಲಿಸಬೇಕಾಗುತ್ತದೆ. ಆದರೇ ಕಂಪೆನಿಯವರು ಮಾತ್ರ ಅವೈಜ್ಞಾನಿಕವಾಗಿ ಸ್ವಲ್ಪವೇ ಜಾಗವನ್ನು ಕಬ್ಬು ಸಾಗಿಸುವ ವಾಹನಗಳಿಗೆ ಪಾರ್ಕಿಂಗ್ಗೆ ನಿಗದಿ ಪಡಿಸಿರುವದರಿಂದ ಪಟ್ಟಣದ ಜನರು ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಎದುರಿಸಲು ಕಾರಣವಾಗಿದೆ ಎಂದು ಹಲವಾರು ಜನರು ದೂರುತ್ತಿದ್ದಾರೆ.
ಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲುವ ಕಬ್ಬು ಸಾಗಿಸುವ ವಾಹನಗಳು ರಸ್ತೆಯುದ್ದಕ್ಕೂ ನಿಂತು ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿದ್ದಾರೆ. ಮಾತ್ರವಲ್ಲದೇ ರುಡಸೆಟ್ ಪಕ್ಕದ ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಬಂದು ಮುಖ್ಯರಸ್ತೆಗೆ ಸೇರಲು ಹರಸಾಹಸ ಪಡಬೇಕಾದ ಪರಿಸ್ಥಿತಿಯನ್ನು ಈ ವಾಹನಗಳಿಂದ ಅನುಭವಿಸುತ್ತಿದ್ದು ಅವರು ಕೂಡ ಮತ್ತೊಮ್ಮೆ ತಾಲೂಕಾಡಳಿತಕ್ಕೆ ದೂರು ನೀಡಲು ಸಿದ್ದತೆ ನಡೆಸಿದ್ದಾರೆ.
ಅಲ್ಲದೇ ಕಂಪೆನಿಯಲ್ಲಿ ಕಬ್ಬು ನುರಿಸುವ ಸಂದರ್ಭದಲ್ಲಿ ಆಗುವ ಕೆಲವು ತಾಂತ್ರಿಕ ತೊಂದರೆಗಳಿಂದ ಕಂಪೆನಿ ತನ್ನ ಕಾರ್ಯ ನಿಲ್ಲಿಸಿದಾಗ ಈ ವಾಹನಗಳ ಸಂಖ್ಯೆ ದುಪ್ಪಟ್ಟಾಗಿ ಇನ್ನೂ ಹೆಚ್ಚಿನ ಸಮಸ್ಯೆ ಎದುರಾಗುತ್ತಿದೆ. ಆದರೇ ಸಕ್ಕರೆ ಕಾರ್ಖಾನೆಯವರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಹಳಿಯಾಳ ಜನತೆಗೆ ತೊಂದರೆ ನೀಡುತ್ತಿರುವುದು ಎಷ್ಟು ಸರಿ ಎನ್ನುವುದು ಪಟ್ಟಣದ ಪ್ರಜ್ಞಾವಂತ ಜನರ ಪ್ರಶ್ನೇಯಾಗಿದೆ. ಇನ್ನೂ ಇತ್ತೀಚೆಗೆ ಈ ಬಗ್ಗೆ ಮನವಿ ಸಲ್ಲಿಸಿದ್ದ ಸಂಘಟನೆಗಳು ಮತ್ತೊಮ್ಮೆ ಕಂಪೆನಿ ವಿರುದ್ದ ಪ್ರತಿಭಟನೆ ನಡೆಸಲು ಸಜ್ಜಾಗಿವೆ.
Leave a Comment