ಹಳಿಯಾಳ:- ಸಾರ್ವಜನೀಕರೊಂದಿಗೆ ಸೌಜನ್ಯತೆಯಿಂದ ವರ್ತಿಸದ ಹಾಗೂ ಸರ್ಕಾರದ ಯೋಜನೆಗಳನ್ನು ರೈತರಿಗೆ ತಿಳಿಸದೆ, ಕರ್ತವ್ಯದಲ್ಲಿ ನೀರ್ಲಕ್ಷ್ಯ ತೋರುತ್ತಿರುವ ತಾಲೂಕಿನ ಸಾಂಬ್ರಾಣ ಹೊಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಸಹಾಯಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ಎಸ್.ಅಳವಂಡಿಯನ್ನು ಕೂಡಲೇ ವರ್ಗಾಯಿಸುವಂತೆ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಮನವಿ ಮೂಲಕ ಆಗ್ರಹಿಸಲಾಗಿದೆ.
ಗ್ರಾಮಸ್ಥರು ಹಾಗೂ ರೈತರು ಹಳಿಯಾಳ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗುಂಡೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲೂ ಕೂಡ ಈ ಬಗ್ಗೆ ಚರ್ಚೆಯಾಗಿದ್ದು ಸಾರ್ವಜನೀಕರ ದೂರಿನಂತೆ ಆರ್.ಎಸ್.ಅಳವಂಡಿ ಕಳೆದ 10-15 ವರ್ಷಗಳಿಂದ ಸಾಂಬ್ರಾಣ ರೈತ ಸಂಪರ್ಕ ಕೇಂದ್ರದಲ್ಲಿ (ಎಎಒ) ಕೃಷಿ ಸಹಾಯಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ರೈತರಿಗೆ ತಲುಪಿಸುವುದಿಲ್ಲ, ರೈತರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ವಿಳಂಬ ನೀತಿ ಹಾಗೂ ಕೃಷಿ ಪರಿಕರ ತೆಗೆದುಕೊಳ್ಳುವಾಗ ಹಣವನ್ನು ತೆಗೆದುಕೊಳ್ಳುತ್ತಾರೆಂದು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ದೂರಲಾಗಿದೆ. ಕೂಡಲೇ ಈ ಅಧಿಕಾರಿಯನ್ನು ವರ್ಗಾವಣೆ ಮಾಡಿ ಉತ್ತಮ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ.
Leave a Comment