
ಹಳಿಯಾಳ:- ಮರಾಠಾ ಸಮುದಾಯ ಭವನಗಳಿಗಾಗಿ ಬಂದ ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡಿದ್ದು ತನಿಖೆಗೆ ಸಹಕರಿಸುವುದನ್ನು ಬಿಟ್ಟು ದೂರು ಕೊಟ್ಟವರ ಹಾಗೂ ಈ ಬಗ್ಗೆ ಪ್ರಶ್ನೇ ಕೇಳಿದವರ ವಿರುದ್ದವೇ ಕಾನೂನು ಕ್ರಮ ಕೈಗೊಳ್ಳುತ್ತೇನೆಂದು ಹೆದರಿಸುತ್ತಿರುವ ವಿಧಾನ ಪರಿಷತ್ ಸದಸ್ಯರ ನಡೆ ಸಮಂಜಸವಾದುದಲ್ಲ ಎಂದು ಕರ್ಣಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಕ ಜಿಲ್ಲಾದ್ಯಕ್ಷ ಎನ್.ಎಸ್.ಜಿವೋಜಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಹಳಿಯಾಳದಲ್ಲಿ ಛತ್ರಪತಿ ಶಿವಾಜಿ ಮೊದಲಾದ ಮಹಾನ್ ನಾಯಕರ ಹೆಸರಿನಿಂದ ಮರಾಠಾ ಸಮುದಾಯದ ವಿವಿಧ ಭವನಗಳ ಹೆಸರಿನಿಂದ ಸರ್ಕಾರ ನೀಡಿರುವ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆಗಳ ಬಗ್ಗೆ ತನಿಖೆ ಮಾಡಿ ಸತ್ಯಾಂಶ ಸರ್ವಜನಿಕಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಪ್ರಕಾರ ಉಪವಿಭಾಗಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಆದರೆ ಎಸ್.ಎಲ್. ಘೋಟ್ನೇಕರ ಅವರು ಸಾರ್ವಜನಿಕರ ದಾರಿ ತಪ್ಪಿಸಲು ಈ ಕಾರ್ಯದ ಹಿಂದೆ ಬೇರೆ ಸಮಾಜದವರಿದ್ದಾರೆಂದು ಹೇಳಿಕೆ ನೀಡುತ್ತಿರುವದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದಿದ್ದಾರೆ.
ಬೇರೆ ಸಮಾಜದವರು ಇದರ ಹಿಂದೆ ಇದ್ದಾರೆ ಎಂದು ಬಿಂಬಿಸಿ ಸಮಾಜದ ಕನಿಕರ ಪಡೆಯಲು ಅವರು ಮಾಡುತ್ತಿರುವ ಸರ್ಕಸ್ ನೋಡಿ ಕನಿಕರವಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ಹೇಳಿಕೆಯಲ್ಲಿ 2003 ರಿಂದ ಸಮಾಜದ ಅಭಿವೃದ್ಧಿ ಮಾಡುತ್ತಿದ್ದೇನೆ, ಸಮಾಜ ಸಂಘಟಿಸುತ್ತಿದ್ದೇನೆ ಅನ್ನುವ ವಿಧಾನ ಪರೀಷತ್ ಸದಸ್ಯರು ಈಗ ತಾವು ಆಶ್ರಯ ಪಡೆದಿರುವ ಮರಾಠ ಭವನಕ್ಕೆ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕಳೆದ 8-9 ವರ್ಷಗಳ ಅವರ ಅವಧಿಯಲ್ಲಿ ಎಷ್ಟು ಅನುದಾನ ನೀಡಿದ್ದಾರೆ ಎಂದು ಬಹಿರಂಗ ಪಡಿಸಲಿ. ಬಿಡಿಗಾಸು ಅನುದಾನ ನೀಡಿದ್ದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲು ನಾನು ತಯಾರಿದ್ದೇನೆ ಎಂದು ಜೀವೊಜಿ ಸವಾಲ್ ಹಾಕಿದ್ದಾರೆ.
ಯಾರಾದರು ಪ್ರಶ್ನೆ ಕೇಳಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೆದರಿಸುವದನ್ನು ಬಿಟ್ಟು ತನಿಖೆಗೆ ಸಹಕಾರ ನೀಡಲಿ, ಸತ್ಯಾಂಶ ಹೊರ ಬಿಳುವವರೆಗೆ ತಾಳ್ಮೆಯಿಂದಿರಬೇಕು ಎಂದು ಅಗ್ರಹಿಸುತ್ತೇವೆ. ಇವರೆ ಪತ್ರಿಕಾಗೋಷ್ಠಿ ನಡೆಸಿ ಮರಾಠಾ ಸಮಾಜಕ್ಕೆ ಮೀಸಲಾದ ಅನುದಾನದಡಿ 20 ಲಕ್ಷ ರೂ.ಗಳನ್ನು ಸೂಕ್ತ ಸ್ಥಳ ದೊರಕದ ಹಿನ್ನಲೆಯಲ್ಲಿ ಅನುದಾನವನ್ನು ತಮ್ಮ ಹೆಸರಿನ ಶಾಲೆಯ ಮೇಲೆ ಸಮುದಾಯ ಭವನ ಕಟ್ಟಡ ನಿರ್ಮಿಸಲು ಬಳಸಿರುವುದಾಗಿ ಒಪ್ಪಿಕೊಂಡಿದ್ದು ಒಂದೆಡೆಯಾದರೆ ಇನ್ನೊಂದೆಡೆ ಅನುದಾನ ದುರುಪಯೋಗ ಪಡಿಸಿಕೊಂಡಿದ್ದು ಸಾಬೀತಾದರೆ ರಾಜಕೀಯ ನಿವೃತ್ತರಾಗುವುದಾಗಿ ಹೇಳಿಕೆಯನ್ನು ನೀಡಿದ್ದು, ಸಮಾಜದ ಅನುದಾನ ತಮ್ಮ ಶಾಲೆಗೆ ಬಳಸಿಕೊಂಡಿದ್ದು ತಪ್ಪು ಅನಿಸುತ್ತಿಲ್ಲವೇ? ಅವರ ಹೇಳಿಕೆಯಂತೆ ಘೊಟ್ನೇಕರ ರಾಜಕೀಯ ನಿವೃತ್ತಿ ಘೋಷಿಸಲಿ ಎಂದು ಆಗ್ರಹಿಸಿದ್ದಾರೆ.
Leave a Comment