ಹಳಿಯಾಳ:- ಅರಣ್ಯ ಹಕ್ಕು ಕಾಯ್ದೆ 2006ರನ್ವಯ ವಿಚಾರಣೆಯಾಗುತ್ತಿರುವ ರಿಟ್ ಪಿಟಿಷನ್ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ದಿನಾಂಕ 13 ರಂದು ಹೊರಡಿಸಿರುವ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ರೀಕಾಲ್ ಪಿಟಿಷನ್ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಸಚಿವರು ಸದರಿ ಆದೇಶದಲ್ಲಿ ನ್ಯಾಯಾಲಯವು ಎಲ್ಲಾ ರಾಜ್ಯಗಳಿಗೆ ದಿ.27.07.2019ರ ಗಡುವು ನಿಗದಿಪಡಿಸಿ ಅರಣ್ಯ ಭೂಮಿಗಳಲ್ಲಿ ತಮ್ಮ ಹಕ್ಕನ್ನು ಸಾಬೀತುಪಡಿಸಲು ವಿಫಲರಾದಂತಹ ಅರ್ಜಿದಾರನ್ನು ಸದರಿ ಅರಣ್ಯ ಭೂಮಿಗಳಿಂದ ತೆರವುಗೊಳಿಸಲು ನಿರ್ದೇಶನ ನೀಡಿದ್ದು, ಸದರಿ ನಿರ್ದೇಶನದ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಅರಣ್ಯ ಪ್ರದೇಶಗಳಲ್ಲಿ ವಾಸವಿದ್ದ ಅರ್ಹ ಅರ್ಜಿದಾರರ ಬಹಳಷ್ಟು ಅರ್ಜಿಗಳನ್ನು ಸಹಜ ನ್ಯಾಯದಡಿಯಲ್ಲಿ ಅಹವಾಲು ಸಲ್ಲಿಸುವ ಅವಕಾಶ ನೀಡದೇ ವಿವಿಧ ಹಂತಗಳಲ್ಲಿ ತಿರಸ್ಕರಿಸಿರುವುದಾಗಿ ತಿಳಿದು ಬಂದ ಕೂಡಲೇ ತಮ್ಮ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಸಚಿವರು ಮತ್ತು ಅರಣ್ಯ ಸಚಿವರ ಉಪಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.
ಈ ರೀತಿ ತಿರಸ್ಕøತಗೊಂಡ ಅರ್ಜಿಗಳ ಬಗ್ಗೆ ಸೂಕ್ತ ಕ್ರಮ ವಹಿಸಿ ಅರ್ಹ ಅರ್ಜಿದಾರರಿಗೆ ನ್ಯಾಯಯೋಚಿತವಾದ ಅವಕಾಶವನ್ನು ಕಲ್ಪಿಸಲು ಅನುವಾಗುವಂತೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಉಸ್ತುವಾರಿ ಸಮಿತಿಯ ಸಭೆಯನ್ನು ನಡೆಸಲಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮತ್ತು ಇತರೇ ರಾಜ್ಯಗಳೂ ಸಹ ಸರ್ವೋಚ್ಛ ನ್ಯಾಯಾಲಯದ ಮೇಲ್ಕಂಡ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ರೀಕಾಲ್ ಪಿಟಿಷನ್ ದಾಖಲಿಸಲು ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದಿಂದಲೂ ಸಹ ರಿಕಾಲ್ ಪಿಟಿಷನ್ ಅನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿರುವ ದೇಶಪಾಂಡೆ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಇತರೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Leave a Comment