ಹಳಿಯಳ : ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ನ್ಯಾಯಯುತವಾದ ಬೇಡಿಕೆಗಳು ಸೇರಿದಂತೆ ಪ್ರತಿ ತಿಂಗಳು ಸಂಬಳ ವಿತರಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘದ ಹಳಿಯಾಳ ಶಾಖೆಯ ಕಿರಿಯ ಆರೋಗ್ಯ ಸಹಾಯಕರು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ.
ಸಚಿವ ದೇಶಪಾಂಡೆ ಅವರ ಹಳಿಯಾಳದ ಜನಸಂಪರ್ಕ ಕಾರ್ಯಾಲಯಕ್ಕೆ ಆಗಮಿಸಿದ ಕಿರಿಯ ಆರೋಗ್ಯ ಪುರುಷ ಮತ್ತು ಮಹಿಳಾ ಸಹಾಯಕರು ಸಚಿವರ ಆಪ್ತ ಸಹಾಯಕ ಬಸಯ್ಯಾ ಪತ್ರಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕಳೆದ 6 ತಿಂಗಳಿಂದ ಸಂಬಳ ಬಟವಟೆಯಾಗದ ಕಾರಣ ಜೀವನ ನಿರ್ವಹಣೆಯು ದುಸ್ತರವಾಗಿದೆ. ಅಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತೊಂದರೆಯಾಗುತ್ತಿದೆ. ಇಗಾಗಲೇ ಹಲವಾರು ಬಾರಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ತಾಲೂಕಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರತಿ ತಿಂಗಳು ಸಂಬಳ ಬಟವಟೆ ಮಾಡುವಂತೆ ಆಗ್ರಹಿಸಿದ್ದಾರೆ.
ಪ್ರತಿ ವರ್ಷವು ಈ ಸಮಸ್ಯೆಯನ್ನು ಎದುರಿಸುತ್ತಾ ಸೇವೆಯಲ್ಲಿ ನಿರತರಾಗಿದ್ದೇವೆ. ಜನತೆಗೆ ಆರೋಗ್ಯ ಸೇವೆ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೈ ಜೋಡಿಸಿದ್ದೇವೆ. 5 ರಿಂದ 6 ತಿಂಗಳಿಗೊಮ್ಮೆ ಸಂಬಳವಾಗುತ್ತಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಹೆಜ್ಜೆ ಹಾಕಬೇಕಾಗಿದೆ. ಪ್ರತಿ ತಿಂಗಳು ಜೀವನ ನಿರ್ವಹಣೆ ಸೇರಿದಂತೆ ಇನ್ನಿತರ ವೆಚ್ಚಗಳನ್ನು ಭರಿಸುವುದು ಅಸಾಧ್ಯವಾಗಿದೆ ಎಂದಿದ್ದಾರೆ.
ಚಾರ್ಜ ಅಲವೇನ್ಸ್ಗಳು ಪ್ರತಿ ತಿಂಗಳು ಬಟವಡೆಯಾಗಬೇಕು, ಆರೋಗ್ಯ ಸಹಾಯಕರ ಲೆಕ್ಕ ಶೀರ್ಷಿಕೆಗಳಾದ 02,03 ಮತ್ತು 08 ಪ್ರವಾಸ ಭತ್ಯೆಗಳನ್ನು ಮೂರು ತಿಂಗಳಿಗೊಮ್ಮೆ ಬಡವಟೆ ಮಾಡಬೇಕು, ಪ್ರತಿಯೊಂದು ಸಭೆಗಳಲ್ಲಿ ನಮಗೆ ಕಡ್ಡಾಯವಾಗಿ ನಮ್ಮ ಮೂಲ ಪದನಾಮ ಹೊಂದಿದ್ದ ಆರೋಗ್ಯ ಸಹಾಯಕರು ಎಂದು ಕರೆಯಬೇಕು, ಆರೋಗ್ಯ ಸಹಾಯಕರ ಸೇವಾ ಪುಸ್ತಕವನ್ನು ದ್ವಿಪ್ರತಿಯಲ್ಲಿ ನಿರ್ವಹಿಸಲು ಅವಕಾಶ ನೀಡಬೇಕು, ಹೊಸದಾಗಿ ನೇಮಕವಾಗಿರುವವರ ವೇತನವನ್ನು ತಕ್ಷಣ ನೀಡಬೇಕು, ವಿಶೇಷ ಭತ್ಯೆಯನ್ನು ಕಿರಿಯ ಹಾಗೂ ಹಿರಿಯ ಸಹಾಯಕರಿಗೆ ಸಿಗುವಂತೆ ಮಾಡಬೇಕು ಹಾಗೂ ಟೈಂ ಬಾಂಡ್ಗಳನ್ನು ಸರಿಯಾದ ಸಮಯದ ಒಳಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಿರ್ವಹಿಸಿ ಜಿಲ್ಲಾ ಮಟ್ಟಕ್ಕೆ ಕಳುಹಿಸಲು ಸೂಚನೆ ನೀಡುವಂತೆ ಮನವಿಯ ಮೂಲಕ ಆಗ್ರಹಿಸಿದ್ದಾರೆ.
Leave a Comment