ಹಳಿಯಾಳ : ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟ್ ಸಂಸ್ಥೆಯವರು ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು “ಉದ್ಯೋಗ ವಾಹಿನಿ” ಸಂಚಾರಿ ವಾಹನ ನೂತನ ಯೋಜನೆ ಜಾರಿಗೊಳಿಸಿದ್ದು ಈ ವಾಹನಕ್ಕೆ ಸಂಸ್ಥೆಯ ಕಾರ್ಯಕಾರಣಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಆರ್ ದೇಶಪಾಂಡೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ರುಡಸೆಟ್ ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಉದ್ಯೋಗ ವಾಹಿನಿ” ಸಂಚಾರಿ ಮಾರಾಟ ಮಳಿಗೆಗೆ ಚಾಲನೆ ನೀಡಿ ಮಾತನಾಡಿದ ಪ್ರಸಾದ ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟ್ ಸಂಸ್ಥೆ ಗ್ರಾಮಿಣ ಭಾಗದ ಯುವಕ ಯುವತಿಯರಿಗೆ ಸ್ವ-ಉದ್ಯೋಗ ತರಬೇತಿಗಳನ್ನು ಆಯೋಜಿಸಿ ಸ್ವಾವಲಂಬಿ ಜೀವನ ನಡೆಸಲು ಸಹಕರಿಸುತ್ತಿದೆ. ಇದರ ಜೊತೆಗೆ ಸ್ವ ಸಹಾಯ ಸಂಘಗಳನ್ನು ರಚಿಸಿ ಅವರಿಗೆ ಆದಾಯದಾಯಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತರಬೇತಿಗಳನ್ನು ನೀಡಿ ಸ್ವಾವಲಂಭಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ.
ಅಲ್ಲದೇ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತರಬೇತಿ ಪಡೆದ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು “ ಉದ್ಯೋಗ ವಾಹಿನಿ” ಎಂಬ ವಿನೂತನ ಯೋಜನೆಯನ್ನು ರೂಪಿಸಿ ಮಹಿಳೇಯರ ಆರ್ಥಿಕ ಸಬಲತೆಗೆ ಹೆಜ್ಜೆ ಇಟ್ಟಿದೆ. ಈ ಉದ್ಯೋಗ ವಾಹಿನಿ- ಸಂಚಾರಿ ವಾಹನವಾಗಿದ್ದು, ಮಹಿಳಾ ಉದ್ಯಮಿಗಳ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅವರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿದೆ ಎಂದು ದೇಶಪಾಂಡೆ ಮಾಹಿತಿ ನೀಡಿದರು.
ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಆರ್ ವೈದ್ಯ ಹಾಗೂ ಹಿರಿಯ ಮಾರ್ಗದರ್ಶಿ ಅನಂತಯ್ಯಾ ಆಚಾರ ಮಾತನಾಡಿ, ಸಮೃದ್ಧಿ ಮಹಿಳಾ ಮಹಾ ಒಕ್ಕೂಟದ ಮೂಲಕ ಸಂಸ್ಥೆ ಈ ಕಾರ್ಯಚಟುವಟಿಕೆಯನ್ನು ಹಮ್ಮಿಕೊಂಡಿದ್ದು, ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಂಸ್ಥೆಯ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಶ್ಯಾಮ ಕಾಮತ, ವಿಆರ್ಡಿಎಮ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಸಮೃದ್ಧಿ ಮಹಿಳಾ ಮಹಾ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಉದ್ಯಮಿಗಳು, ಡಿಪಿಐಟಿಐ, ಸಿಬಿಎಸ್ಸಿ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಸಿಂಬಂದ್ಧಿ ವರ್ಗದರು ಇದ್ದರು.
Leave a Comment