ಹಳಿಯಾಳ:- ಕರ್ನಾಟಕ ರಾಜ್ಯದ ಪೌರಾಡಳಿತ ಸಚಿವರಾಗಿದ್ದ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿಯವರು ಶುಕ್ರವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ದಿ ತಿಳಿದು ತೀವ್ರ ಆಘಾತ ಹಾಗೂ ಅತೀವ ದು:ಖವಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.
ಧೀಮಂತ ನಾಯಕ:-
ತಮ್ಮ ಶೋಕ ಸಂದೇಶದಲ್ಲಿ ಶಿವಳ್ಳಿಯವರು ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಆಯ್ಕೆಯಾಗಿ, ರಾಜ್ಯದ ಪೌರಾಡಳಿತ ಸಚಿವರಾಗಿ, ರಾಜ್ಯ ಸರ್ಕಾರದ ಸಂಸದೀಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದು, ರಾಜ್ಯ ಕಂಡ ಅತ್ಯಂತ ಸರಳ, ಸಜ್ಜನ, ಸಮಾಜಮುಖಿ, ಬಡವರ ಪರ, ರೈತಪರ, ಜನಾನುರಾಗಿ ವ್ಯಕ್ತಿತ್ವ ಹೊಂದಿದ್ದ ಇವರು ಸಾಮಾನ್ಯ ಜನರ ಧೀಮಂತ ನಾಯಕರಾಗಿದ್ದರೆಂದು ಕೊಂಡಾಡಿದ್ದಾರೆ.
ಧಾರವಾಡದ ಕುಮಾರೇಶ್ವರ ನಗರದಲ್ಲಿ ದಿ.19ರಂದು ನಿರ್ಮಾಣ ಹಂತದಲ್ಲಿದ್ದ ಕಟ್ಟಡವು ಆಕಸ್ಮಿಕವಾಗಿ ಕುಸಿದ ಕಾರಣ ನಾನು ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಳ್ಳಿ ಅವರು ನನ್ನ ಜೊತೆ ಖುದ್ದು ಸ್ಥಳದಲ್ಲಿದ್ದರು. ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಗೆ ನೆರವಾಗಿದ್ದಲ್ಲದೆ ಅಂದಿನಿಂದ ಈವರೆಗೆ ಕಟ್ಟಡ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ಅತ್ಯಂತ ಕಾಳಜಿಯಿಂದ ಸಮರ್ಪಕವಾಗಿ ನಿರ್ವಹಿಸಿದ್ದರು.
ಶಿವಳ್ಳಿ ಸೇವೆ ನಾಡಿಗೆ ಅವಶ್ಯಕತೆ ಇತ್ತು :-
ಸದಾ ಬಡವರ, ಕೂಲಿ ಕಾರ್ಮಿಕರ ಹಾಗೂ ರೈತರ ಏಳಿಗೆಗಾಗಿ ಚಿಂತಿಸುತ್ತಿದ್ದ ಶಿವಳ್ಳಿ ಇತ್ತೀಚೆಗೆ ಪುನರ್ ರಚನೆಯಾದ ರಾಜ್ಯದ ಮಂತ್ರಿ ಮಂಡಲದಲ್ಲಿ ಸಚಿವರಾಗಿ ನೇಮಕಗೊಂಡ ಅತ್ಯಲ್ಪ ಕಾಲದಲ್ಲೇ ವಿಧಿವಶರಾಗಿರುವುದು ಅತ್ಯಂತ ದು:ಖಕರವಾಗಿದೆ ಎಂದಿರುವ ದೇಶಪಾಂಡೆ ಇನ್ನೂ ಶಿವಳ್ಳಿ ಅವರ ಸೇವೆ ಈ ನಾಡಿಗೆ ಮತ್ತು ದೇಶಕ್ಕೆ ಅತ್ಯಗತ್ಯವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಂಬಲಾರದ ನಷ್ಠ :-
ಸಚಿವರ ಅಕಾಲಿಕ ಮರಣವು ರಾಜ್ಯ ರಾಜಕಾರಣ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಠವಾಗಿದ್ದು, ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃಧ್ಧಿಗೆ ತೀವ್ರ ಹಿನ್ನೆಡೆಯಾಗಿದೆ ಮತ್ತು ವೈಯಕ್ತಿಕವಾಗಿ ನನಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ದುಃಖ ವ್ಯಕ್ತಪಡಿಸಿರುವ ದೇಶಪಾಂಡೆ ಮೃತರÀ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ವರ್ಗದವರಿಗೆ, ಅಭಿಮಾನಿ ಬಳಗ, ಸ್ನೇಹಿತರಿಗೆ ಈ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Leave a Comment