ಹಳಿಯಾಳ : ವಿದ್ಯುನ್ಮಾನ ಮತಯಂತ್ರಗಳ ಸಮೇತ ಇನ್ನಿತರ ಪರಿಕರಗಳು, ಸಿಬ್ಬಂದಿಗೆ ತರಬೇತಿ ಸೇರಿದಂತೆ ಲೋಕಸಭಾ ಚುನಾವಣೆಗೆ ಸಿದ್ದತೆಗಳು ಭರದಿಂದ ಸಾಗಿದೆ. ಜಿಲ್ಲಾ ಕೇಂದ್ರದಿಂದ ಮತಯಂತ್ರಗಳನ್ನು ತಂದು ತಾಲೂಕಿನ ಹವಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ನಿರ್ಮಿಸಲಾದ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದ್ದು ಅದಕ್ಕೆ ಸೂಕ್ತವಾದ ಪೋಲಿಸ್ ಭದ್ರತೆಯನ್ನು ನೀಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು.
ಭದ್ರತಾಕೋಠಡಿ ಇರುವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕಾಲೇಜಿನ ನಾಲ್ಕು ಕೊಠಡಿಗಳನ್ನು ಮತಯಂತ್ರಗಳನ್ನು ಸುರಕ್ಷಿತವಾಗಿ ಇಡಲು ಕಳೆದ ಒಂದು ವಾರದ ಹಿಂದೆಯೇ ಪಡೆದು ಲೋಕೋಪಯೋಗಿ ಇಲಾಖೆ, ಪೋಲಿಸ್, ಹೆಸ್ಕಾಂ, ಕಂದಾಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಅದಕ್ಕೆ ಬೇಕಾದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಲಾಗಿದೆ. ಕಾರವಾರದಿಂದ 217 ಮತಗಟ್ಟೆಗಳಿಗೆ ಬೇಕಾಗುವ ಎಲ್ಲಾ ಯಂತ್ರಗಳ ಸಮೇತ ಹೆಚ್ಚುವರಿ ಯಂತ್ರಗಳನ್ನು ಬೀಗಿ ಪೋಲಿಸ್ ಭದ್ರತೆಯೊಂದಿಗೆ ತಂದು ಕೊಠಡಿಗಳಲ್ಲಿ ಸಂಗ್ರಹಿಸಲಾಗಿದೆ. ಭದ್ರತೆಯ ದೃಷ್ಠಿಯಿಂದ ಭದ್ರತಾ ಕೊಠಡಿಗಳ ಸುತ್ತಮುತ್ತಲು 9 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ಬೆಳಕಿನ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸಲಾಗಿದೆ ಎಂದರು.
2 ಭದ್ರತಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು ಇದರ ಜೊತೆಗೆ ಭದ್ರತೆಗಾಗಿ ನಿಯೋಜನೆಗೊಂಡಿರುವ ಪೋಲಿಸರಿಗಾಗಿ ಅದರ ಪಕ್ಕದಲ್ಲಿಯೇ ಇನ್ನೊಂದು ಕೊಠಡಿಯನ್ನು ನೀಡಲಾಗಿದೆ. ದಿನದ 24 ಗಂಟೆಯು ಭದ್ರತೆಗಾಗಿ ಡಿವೈಎಸ್ಪಿ ಮೋಹನಪ್ರಸಾದ, ಸಿಪಿಐ ಮತ್ತು ಪಿಎಸೈ ಅವರ ನೇತೃತ್ವದಲ್ಲಿ ಪ್ರತಿದಿನ ತಪಾಸಣೆ ನಡೆಯಲಿದೆ. ಅಲ್ಲದೇ ಎಎಸೈ, ಓರ್ವ ಹೆಡ್ ಕಾನಸ್ಟೇಬಲ್ ಮತ್ತು ನಾಲ್ವರು ಶಸ್ತ್ರಸಜ್ಜಿತ ಪೋಲಿಸರು ಸೇರಿದಂತೆ ಕಾಯ್ದಿಟ್ಟ ಪೋಲಿಸ್ ಪಡೆ ಕಾವಲು ಕಾಯಲಿದ್ದಾರೆ. ಪ್ರತಿ ದಿನ ಪೋಲಿಸ ಹಿರಿಯ ಅಧಿಕಾರಿಗಳು ಸೇರಿದಂತೆ ಚುನಾವಣಾ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಭದ್ರತಾ ಕೊಠಡಿಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸೀಲ್ ಮಾಡಲಾಗಿದ್ದು, ಅಭ್ಯರ್ಥಿಗಳ ಘೋಷಣೆಯ ನಂತರ ಬೆಂಗಳೂರಿನಿಂದ ಆಗಮಿಸುವ ಇಂಜನಿಯರ್ಗಳ ತಂಡವು ಮತಯಂತ್ರಗಳಲ್ಲಿ ಅಭ್ಯರ್ಥಿಗಳ ವಿವರ ಹಾಕಲಿದೆ ಎಂದರು.
ಈ ಸಂದರ್ಭದಲ್ಲಿ ಹಳಿಯಾಳ ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ, ದಾಂಡೇಲಿಯ ಚಾಮರಾಜ್ ಪಾಟೀಲ್.ಸಿಪಿಐ ಬಿ.ಎಸ್.ಲೋಕಾಪೂರ, ಗ್ರೇಡ್ 2 ತಹಶೀಲದಾರ ಜಿ.ಕೆ.ರತ್ನಾಕರ, ಪಿಎಸೈ ಆನಂದಮೂರ್ತಿ ಸಿ, ಚುನಾವಣಾ ಶಿರಸ್ತೇದಾರ ಅನಂತ ಚಿಪ್ಪಲಕಟ್ಟಿ ಇದ್ದರು.
Leave a Comment