ಹಳಿಯಾಳ:- ಪ್ರಾರಂಭದಲ್ಲಿ ಲೋಕಸಮರದ ಚುನಾವಣೆ ಪ್ರಚಾರದ ಭರಾಟೆ ಕಾಣದ ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ಪರ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿ ನಡೆದಿದೆ.
ಲೋಕಸಭಾ ಚುನಾವಣೆ ಘೊಷಣೆಗೂ ಮೊದಲೆ ಪ್ರಚಾರದ ಕಣಕ್ಕೆ ಇಳಿದಿದ್ದ ಬಿಜೆಪಿ ಪ್ರಚಾರದಲ್ಲಿ ಮುಂಚುಣಿಯಲ್ಲಿದೆ. ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರು ಮನೆ ಮನೆ ತೆರಳಿ ಹಾಗೂ ಬಹಿರಂಗ ಸಭೆಗಳ ಮೂಲಕ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರ ಮತಯಾಚನೆ ಮಾಡುತ್ತಿದ್ದಾರೆ.
ಇನ್ನೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡದ ಕಾರಣ ಮುನಿಸಿಕೊಂಡಿದ್ದ ಕೈ ಪಡೆ ನಾಯಕರು ತಡವಾಗಿ ಹೈಕಮಾಂಡ ನಿರ್ಣಯಕ್ಕೆ ಮಣಿದು ಮೈತ್ರಿ ಧರ್ಮ ಪಾಲನೆ ಮಾಡಬೇಕಾಗಿದೆ ಎಂದು ಹೇಳುತ್ತಾ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಹಳಿಯಾಳ ಭಾಗದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ನೇತೃತ್ವದಲ್ಲಿ ಕೆಲವು ಮುಖಂಡರು ಹಾಗೂ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ ನೇತೃತ್ವದಲ್ಲಿ ಯುವ ಕಾಂಗ್ರೇಸ್ ಪಡೆ, ಜಿಪಂ ಸದಸ್ಯರ ನೇತೃತ್ವದಲ್ಲಿ ಒಂದು ಗುಂಪು ಹೀಗೆ ಕೊನೆಯ ಹಂತದಲ್ಲಿ ಕಾಂಗ್ರೇಸ್ ಕೂಡ ಭರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಕಳೆದ 3 ದಿನಗಳಿಂದ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲೇ ಬಿಡುಬಿಟ್ಟಿರುವ ಸಚಿವ ಆರ್.ವಿ.ದೇಶಪಾಂಡೆ ಕೂಡ ಮೈತ್ರಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.
ಹಳಿಯಾಳ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಯ ಕೊರತೆ ಇದ್ದು ಎನ್.ಎಸ್.ಜಿವೋಜಿ, ಎಸ್.ಎ.ಶೇಟವಣ್ಣವರ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ.
ಬಹಿರಂಗ ಪ್ರಚಾರಕ್ಕೆ ಒಂದು ದಿನ ಬಾಕಿ ಉಳಿದಿರುವಂತೆಯೇ ಎಲ್ಲ ಪಕ್ಷಗಳ ಮುಖಂಡರು, ನಾಯಕರು, ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರ ಮತಬೇಟೆಯಾಡುತ್ತಿದ್ದು ಮತದಾರ ಯಾರಿಗೆ ಮಣೆ ಹಾಕಲಿದ್ದಾನೆಂಬುದೇ ಯಕ್ಷ ಪ್ರಶ್ನೇಯಾಗಿದೆ.
Leave a Comment