ಹಳಿಯಾಳ:- ಕನ್ನಡ ರಂಗಭೂಮಿಯ ದಿಗ್ಗಜರಾಗಿದ್ದ ಅನನ್ಯ ಪ್ರತಿಭೆಯ ಮಾಸ್ಟರ್ ಹಿರಣ್ಣಯ್ಯರವರ ನಿಧನವು ಕನ್ನಡ ರಂಗಭೂಮಿಯು ಒಂದು ಅನನ್ಯ ಹಾಗೂ ಅಸಾಧಾರಣ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ ತೀವೃ ಸಂತಾಪ ವ್ಯಕ್ತಪಡಿಸಿರುವ ಅವರು ನಾಟಕ ರಂಗ, ಕಿರುತೆರೆ, ಸಿನಿಮಾ ಸೇರಿದಂತೆ ರಂಗಭೂಮಿಯ ಅಭಿನಯ ಚತುರರಾಗಿದ್ದ ಅಸಾಧಾರಣ ಪ್ರತಿಭೆಯ ಶ್ರೀ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ನೇರ ಹಾಗೂ ದಿಟ್ಟ ಮಾತಿಗೆ ಸದಾ ಹೆಸರಾಗಿದ್ದಲ್ಲದೆ ಸಮಾಜದ ಅಂಕು-ಡೊಂಕು, ಡೋಂಗಿತನ, ಭ್ರಷ್ಟತೆ ಇತ್ಯಾದಿ ಸಾಮಾಜಿಕ ಪಿಡುಗುಗಳನ್ನು ತಮ್ಮ ಮೊನಚು ಹಾಗೂ ವಿಡಂಭನಾತ್ಮಕ ಮಾತುಗಳಿಂದಲೇ ಖಂಡಿಸುವ, ಹಾಸ್ಯ ಚಟಾಕಿಗಳನ್ನು ಹಾರಿಸಿ ಪ್ರೇಕ್ಷಕರನ್ನು ನಗಿಸುವ ಜೊತೆಗೆ ಅವರನ್ನು ಚಿಂತನೆಗೆ ಹಚ್ಚುವ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಕಾಯಕಯೋಗಿಯಂತೆ ನಿತ್ಯನಿರಂತರ ಮಾಡುತ್ತಲೇ ಬಂದಿದ್ದರು ಎಂದು ದೇಶಪಾಂಡೆ ವಿವರಿಸಿದ್ದಾರೆ.
ತಂದೆಯ ನಿಧನ ನಂತರ ‘ಹಿರಣ್ಣಯ್ಯ ಮಿತ್ರಮಂಡಳಿ’ಯನ್ನು ತಾವೇ ವಹಿಸಿಕೊಂಡು ‘ಲಂಚಾವತಾರ’ ನಾಟಕ ರಚಿಸಿ ರಂಗ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಲ್ಲದೆ, ಜನಪ್ರಿಯತೆಯ ಜೊತೆಗೆ ‘ನಟರತ್ನಾಕರ’ ಎಂಬ ಬಿರುದು ಕೂಡ ಪಡೆದಿದ್ದರು. ನಡು ಬೀದಿ ನಾರಾಯಣ, ಸದಾರಮೆ, ಕಪಿಮುಷ್ಟಿ, ಮಕ್ಮಲ್ ಟೋಪಿ, ದೇವದಾಸಿ ಮುಂತಾದವು ಜನರನ್ನು ಅಪಾರವಾಗಿ ಆಕರ್ಷಿಸಿದ ನಾಟಕಗಳು. ಕನ್ನಡ ರಂಗಭೂಮಿಗೆ ನೀಡಿದ ಅಪಾರ ಕೊಡುಗೆಗಾಗಿ ಇವರಿಗೆ ಪ್ರತಿಷ್ಠಿತ ಪ್ರಶಸ್ತಿ, ಬಿರುದು-ಸನ್ಮಾನಗಳು ಲಭಿಸಿದ್ದವು. ರಂಗಭೂಮಿಗೆ ಹೊಸ ದಿಸೆಯನ್ನು ನೀಡುವುದರ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದ ಶ್ರೀಯುತರ ನಿಜ ನಾಮದೇಯ ನರಸಿಂಹಮೂರ್ತಿ ಆಗಿದ್ದರೂ ಜನರು ಇವರನ್ನು ಪ್ರೀತಿಯಿಂದ ‘ಮಾಸ್ಟರ್ ಹಿರಣ್ಣಯ್ಯ’ ಎಂದೇ ಕರೆಯುತ್ತಿದ್ದರು.
ತಮಗೆ ಆತ್ಮೀಯರಾಗಿದ್ದ ಹಿರಣ್ಣಯ್ಯನವರ ಅಗಲಿಕೆ ತೀವೃ ದುಃಖದ ಸಂಗತಿಯಾಗಿದ್ದು ಅವರ ಸಾವಿನ ಶಕ್ತಿಯನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಕ್ಕೆ ಭಗವಂತ ದಯಪಾಲಿಸಲಿ ಎಂದು ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Leave a Comment