ಹಳಿಯಾಳ ;- ಯಾವೊಂದು ಮಗುವು ಶಿಕ್ಷಣದಿಂದ ದೂರ ಉಳಿಯದಂತೆ ಹಾಗೂ ವಂಚಿತವಾಗದಂತೆ ನಿಗಾವಹಿಸುವುದು ಸಮಾಜದ ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಳಿಯಾಳ ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ ಅಭಿಪ್ರಾಯಪಟ್ಟರು.
ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಹಯೋಗದಲ್ಲಿ ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ದಾಖಲಾತಿ ಆಂದೋಲನ ಹಾಗೂ ಸಾಮಾನ್ಯ ದಾಖಲಾತಿ ಆಂದೋಲನ ಕಾರ್ಯಕ್ರಮ 2019-20 ಜಾಥಾಕ್ಕೆ ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ ಚಾಲನೆ ನೀಡಿ ಮಾತನಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ ಕುರಿಯವರ ಮಾತನಾಡಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯಕ್ಕೆ ಎಲ್ಲರ ಸಹಕಾರ ಮುಖ್ಯವೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರಅಹ್ಮದ ಮುಲ್ಲಾ ಜಾಥಾದ ವಿವರ ನೀಡಿ,ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಪ್ರತಿಯೊಂದು ವಿದ್ಯಾರ್ಥಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಬೈಸಿಕಲ್, ಬಿಸಿಊಟ, ಹಾಲು, ವಿಟಮಿನ್ ಮತ್ತು ಜಂತುನಾಶಕ ಮಾತ್ರೆ, ವಿಶೇಷಚೇತನ ಮಕ್ಕಳಿಗೆ ವಿಧ್ಯಾರ್ಥಿ ವೇತನ, ಎಸ್ಸಿ ಎಸ್ಟಿ ಮಕ್ಕಳಿಗೆ ಪ್ರೋತ್ಸಾಹ ನೀಡಲು ಶಿಷ್ಯವೇತನ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು ಇದರ ಸದುಪಯೋಗವನ್ನು ಪ್ರತಿಯೊಂದು ಮಗು ಪಡೆಯಬೇಕೆಂದರು.
ಶಾಸಕರ ಮಾದರಿ ಶಾಲೆ ನಂ 1 ರಿಂದ ವಿವಿಧ ಶಾಲೆಯ ಮಕ್ಕಳು ಸೇರಿದಂತೆ ಇಲಾಖೆಯ ಅಧಿಕಾರಿಗಳ ತಂಡವು ತರಕಾರಿ ಮಾರುಕಟ್ಟೆ, ಮೋತಿಕೆರೆ ಪ್ರದೇಶ, ಬಸ್ಸ್ಟಾಂಡ್ ರಸ್ತೆ, ವನಶ್ರೀ ಸರ್ಕಲ್, ಬಜಾರ ಮಾರ್ಗವಾಗಿ ಸಾಗಿ ಶಿವಾಜಿ ಸರ್ಕಲ್ದಲ್ಲಿ ಶಾಲೆ ಕಡೆ ನನ್ನ ನಡೆ ಹೆಸರಿನಲ್ಲಿ ಜಾಥಾ ನಡೆಸಿ, ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಪ್ರಸನ್ನ ಗಾಂವಕರ, ಪಿ.ಬಿ. ನಾಡಗೌಡಾ ಇದ್ದರು.
Leave a Comment