ಹಳಿಯಾಳ :- ವಿದ್ಯಾರ್ಥಿಗಳು ತರಗತಿ ಹಾಗೂ ಶಾಲಾ ಆವರಣದಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸ್ವಚತೆಯ ಅರಿವು ಕುರಿತು ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸದ್ಯ ಹಳಿಯಾಳದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅಪರಿಮಿತ ಮೊಬೈಲ್ ಬಳಕೆಯಿಂದ ವಿವಿಧ ಅಹಿತಕರ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ದಿನಂಪ್ರತಿ ದೂರುಗಳು ಕೇಳಿ ಬರುತ್ತಿವೆ. ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುವ ಅಗತ್ಯತೆ ಎದುರಾಗಿದೆ.
ಶಾಲಾ ಕಾಲೇಜಿನ ಆವರಣದಲ್ಲಿ ಕಡ್ಡಾಯವಾಗಿ ಔಷಧಿಯುಕ್ತ ಸಸಿಗಳನ್ನು ನೆಡಲು ಶಾಲಾ-ಕಾಲೇಜು ಆಡಳಿತ ಮಂಡಳಿಯವರು ಮುಂದಾಗಬೇಕೆಂದು ಸಲಹೆ ನೀಡಿದ ಘೋಟ್ನೇಕರ ಅವರು ಇತ್ತಿಚಿನ ದಿನಗಳಲ್ಲಿ ಮೊಬೈಕ್ ಬಳಕೆಯಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರೀತಿ, ಪ್ರೇಮ ಪ್ರಕರಣಗಳ ದೂರುಗಳು ಸಾಕಷ್ಟು ಕೇಳಿ ಬರುತ್ತಿದ್ದು ಪಾಲಕರು ತಮ್ಮ ಮಕ್ಕಳನ್ನು ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸಬೇಕೆಂದು ಕಿವಿ ಮಾತು ಹೇಳಿದರು.
ಬಾಲಕಿಯರು ಶಾಲೆಗೆ ತೆರಳುತ್ತೇನೆಂದು ಪಾಲಕರಿಗೆ ತಿಳಿಸಿ ಶಾಲೆಯಿಂದ ಬೇರೊಬ್ಬರ ದ್ವಿಚಕ್ರ ವಾಹನದ ಮೇಲೆ ಮುಖಕ್ಕೆ ಮುಸುಕು ಹಾಕಿಕೊಂಡು ತೆರಳುತ್ತಿರುವುದು ಸಹ ಕೇಳಿಬರುತ್ತಿದೆ ಎಂದ ಅವರು ಈ ಬಗ್ಗೆ ಪಾಲಕರು ಸಹ ಎಚ್ಚರಿಕೆ ವಹಿಸುವ ಮೂಲಕ ಮುಂದಾಗುವ ಘಟನೆಗಳಿಗೆ ಶಿಕ್ಷಕರು ಮತ್ತು ಪಾಲಕರು ಮುನ್ನೆಚ್ಚರಿಕೆ ವಹಿಸಬೇಕೆಂದರು.
ಪಟ್ಟಣದಲ್ಲಿ ಇತ್ತಿಚೇಗೆ ಡಿಜೆ, ಡಾಲಬಿಯಂತಹ ಭಾರಿ ಶಬ್ದ ಮಾಡುವ ಸಂಗೀತ ಧ್ವನಿ ವರ್ಧಕಗಳ ಮೂಲಕ ಶಬ್ದ ಮಾಲಿನ್ಯ ಮಾಡಲಾಗುತ್ತಿದ್ದು ಇದರಿಂದ ಸಾರ್ವಜನೀಕರು ಹಾಗೂ ಹಿರಿಯ ವಯಸ್ಸಿನವರು, ಎದೆ ಸಂಬಂಧಿ ಕಾಯಿಲೆಯವರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಕಾರಣ ಕೂಡಲೇ ಎಲ್ಲ ಸಮಾಜದ ಮುಖಂಡರ ಸಭೆ ನಡೆಸಿ ಇನ್ನು ಮುಂದೆ ಹಳಿಯಾಳದಲ್ಲಿ ಡಿಜೆ ಮತ್ತು ಡಾಲಬಿ ಸಂಗೀತ ಧ್ವನಿವರ್ಧಕಗಳನ್ನು ಬಳಸಬಾರದೆಂದು ನಿರ್ಣಯಿಸಬೇಕೆಂದರು.
ತಹಶೀಲ್ದಾರ ವಿದ್ಯಾಧರ ಗುಳಗುಳಿ ಮಾತನಾಡಿ ಪ್ರತಿಯೊಂದು ಶಾಲಾವರ್ಗ ಹಾಗೂ ಶಾಲಾ ಆವರಣದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೇರಾವನ್ನು ಅಳವಡಿಸಿ ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದರು. ವಿದ್ಯಾರ್ಥಿಗಳು ತಾಂತ್ರಿಕತೆಗೆ ಬಹಳಷ್ಟು ಆಕರ್ಷಕರಾಗಿದ್ದು ಪ್ರಕೃತಿಯ ಬಗ್ಗೆ ಸಹ ತಿಳುವಳಿಕೆ ನೀಡಲು ಮುಂದಾಗಿ ಎಂದು ಶಾಲೆಯವರಿಗೆ ಹಾಗೂ ಪಾಲಕರಿಗೆ ತಹಶೀಲ್ದಾರ್ ಕರೆ ನೀಡಿದರು.
ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ ಕುರಿಯವರ, ಬಿಇಓ ಸಮೀರ್ ಅಹಮ್ಮದ್ ಮುಲ್ಲಾ, ಪಿ.ಎಸ್.ಐ. ಅನಂದ ಮೂರ್ತಿ ಇದ್ದರು. ಪುರಸಭೆ ಇಂಜಿನೀಯರ್ ಹರೀಶ ಹಾಗೂ ಪಟ್ಟಣದ ಎಲ್ಲ ಶಾಲಾ ಮುಖ್ಯೋಪಾಧ್ಯಾಯರು -ಶಿಕ್ಷಕರು ಇದ್ದರು.
Leave a Comment