ಹಳಿಯಾಳ : ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ದೇಶದ ಸವೋಚ್ಚ ನ್ಯಾಯಾಲಯವು ಸಹ ರೈತರ ಕಷ್ಟಗಳಿಗೆ ಶೀಘ್ರವಾಗಿ ಸ್ಪಂದಿಸುವಂತೆ ಆಜ್ಞೆ ಮಾಡಿದರೂ ಸಹ ಯಾವುದೇ ಪ್ರಯೋಜನ ಕಂಡು ಬರದ ಕಾರಣ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ “ ವಿಧಾನ ಸೌಧ ಖಾಲಿ ಮಾಡಿ” ಎಂಬ ವಿನೂತನ ಚಳುವಳಿ ನಡೆಸಲಾಗುವುದೆಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ರೈತ ಸಂಘ ಮತ್ತು ಸೇನೆಯ ಉತ್ತರ ಕನ್ನಡ ಜಿಲ್ಲಾ ಸಮಿತಿ ಪುನರಚನೆ ಹಾಗೂ ರೈತರ ಸಮಸ್ಯೆಗಳ ಬಗ್ಗೆ ನಡೆದ ಮಹತ್ವಪೂರ್ಣ ಸಭೆಯ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿಯ ಸಮಿಶ್ರ ಸರ್ಕಾರವು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ವಿರೋಧ ಪಕ್ಷಗಳು ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದ್ದು, ಇವರಿಗ ರೈತರ ಕಷ್ಟಗಳ ಬಗ್ಗೆ ಕಾಳಜಿ ಇಲ್ಲವಾಗಿದೆ. ರಾಜ್ಯದ 155 ತಾಲೂಕುಗಳಲ್ಲಿ ಬರಗಾಲ ಘೋಷಿಸಲಾಗಿದೆ. ಆದರೆ ಈವರೆಗೂ ಬರ ನಿರ್ವಹಣೆ ಯೋಜನೆ ಕಾರ್ಯ ನಡೆಸದೆ ವಿಳಂಬ ಧೋರಣೆಯನ್ನು ಅನುಸರಿಸುವುದರ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಸರ್ಕಾರದಿಂದಲೇ ನಡೆಯುತ್ತಿದ್ದು, ರೈತರ ಸಮಸ್ಯೆಗಳ ನಿವಾರಣೆ ಮತ್ತು ಬರ ನಿರ್ವಹಣೆ ಮಾಡುವಲ್ಲಿ ರಾಜ್ಯದ ಸಮಿಶ್ರ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ರಾಜ್ಯದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ 3 ಸಾವಿರ ಕೋಟಿ ರೂ ಬಾಕಿ ಬರಬೇಕಾಗಿದೆ. ಆದರೆ ಸರ್ಕಾರ ಮಾತ್ರ ಸಕ್ಕರೆ ಕಾರ್ಖಾನೆಗಳ ಮಾಲಿಕರೊಂದಿಗೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುವುದರ ಜೊತೆಗೆ ಸಾಲ ಮನ್ನಾದಂತಹ ಘೋಷಣೆಗಳು ಇನ್ನೂ ಜಾರಿಗೆಯಾಗಿಲ್ಲ. ರೈತರು ಹೊಸ ಸಾಲ ಪಡೆಯಲು ಅನಾನೂಕುಲವಾಗದೆ ಅಂತಿಮವಾಗಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಕೈ ಹಾಕುತ್ತಿದ್ದು ರೈತನ ಬಾಳು ಅಯೋಮಯ ಸ್ಥಿತಿಗೆ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತೆಲೆದೂರಿರುವ ಬಗರ ಹುಕುಂ ಸಮಸ್ಯೆ ಇನ್ನೂವರೆಗೂ ಜೀವಂತವಾಗಿದ್ದು ಪಟ್ಟಾ ನೀಡುವ ಭರವಸೆಯು ಇನ್ನೂವರೆಗೂ ಈಡೇರಿಲ್ಲ. ಅಲ್ಲದೇ ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸುವ ಕಾರ್ಯದಲ್ಲಿ ನಿರತರಾಗಿದ್ದು ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಹಲವಾರು ಬಾರಿ ರೈತರ ಸಂಕಷ್ಟಗಳನ್ನು ದೂರ ಮಾಡುವಂತೆ ಆಗ್ರಹಿಸಿ ಮಾಡಿದ ಹೋರಾಟಗಳಿಗೆ ಗಂಭೀರವಾದ ಸ್ಪಂದನೆ ದೊರೆಯದೇ ರೈತರು ಕಂಗಾಲಾಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದ ಆಹಾರ ಭದ್ರತೆಗೆ ಕಟಂಕ ಉಂಟಾಗುವ ಸಂಭವ ಹೆಚ್ಚಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತು ರೈತರ ಸಹಾಯಕ್ಕಾಗಿ ಧಾವಿಸಬೇಕಾಗಿವೆ ಎಂದರು.
ಅಂತರಜಲ ವೃದ್ದಿ, ಕೆರೆಗಳ ಒತ್ತುವರಿಗಳ ನಿಯಂತ್ರಣ, ಕೆರೆಗಳ ವೈಜ್ಞಾನಿಕ ಹೊಳೆತ್ತುವುದು, ವನಮಹೋತ್ಸವ, ಹಸಿರುಕರಣ ಮತ್ತು ಜಲಾಮೃತ ಯೋಜನೆಯ ಅನುಷ್ಠಾನ ಸೇರಿದಂತೆ ಇನ್ನಿತರ ಕಾರ್ಯಗಳ ಮೂಲಕ ರಾಜ್ಯವನ್ನು ಮುಂದಿನ ದಿನಗಳಲ್ಲಿ ಬರ ಮುಕ್ತ ಕರ್ನಾಟಕ ಮಾಡಲು ರೈತ ಸಂಘ ಮತ್ತು ಹಸಿರು ಸೇನೆಯು ಯೋಜನೆ ರೂಪಿಸಿದ್ದು, ಜುಲೈ 21 ರಂದು ಬೆಳಗಾವಿಯಲ್ಲಿ ಈ ಕುರಿತು ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೊಷ್ಠಿಯಲ್ಲಿ ರಾಜ್ಯ ಮುಖಂಡರಾದ ಕೆ.ಜೆ.ಶಾಂತಸ್ವಾಮಿ, ಜಿ.ಕೆ.ರಾಮಸ್ವಾಮಿ ಶಂಕರ ಕಾಜಗಾರ, ರಾಮಾ ಲಾಡ್, ಜೆ.ಎಂ. ವೀರಸಂಗಯ್ಯ, ಶಿವಪುತ್ರ ಕಲಕುಂಡಿ, ಸುಬ್ರಮಣ್ಯ ಎಸ್.ಆರ್, ರವಿಕಿರಣ ಪುಣಚ್ಚ, ಪಿ.ಗೋಪಾಲ್, ಮಲ್ಲೇಶಿ ಗೌರಿ, ಇಸ್ಮಾಯಿಲ್ಸಾಬ ಜಮಾದಾರ, ಜ್ಯೋತಿಬಾ ಹೈಬತ್ತಿ ಮತ್ತು ವಿಷ್ಣು ಗುಂಡುಪ್ಕರ ಇದ್ದರು.
ಪೋಟೋ :- 15 ಎಚ್.ಎಲ್.ವೈ 4 ಹಳಿಯಾಳ:- ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಮುಖಂಡರು ಸುದ್ದಿಗೊಷ್ಠಿಯಲ್ಲಿ.
Leave a Comment