ಹಳಿಯಾಳ :- ಬಸ್ನಲ್ಲಿ ವೃದ್ದರೊಬ್ಬರ ಕಿಸೆಗೆ ಬ್ಲೇಡ್ ಹಾಕಿ 24 ಸಾವಿರ ರೂ. ಎಗರಿಸಿದ್ದ ಇಬ್ಬರು ಕಿಸೆಗಳ್ಳರನ್ನು ಪ್ರಯಾಣಿಕರ ಸಹಕಾರದೊಂದಿಗೆ ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ.
ಬಂಧಿತ ಕಿಸೆಗಳ್ಳರನ್ನು ಹುಬ್ಬಳ್ಳಿಯ ಸೆಟಲಮೆಂಟ್ ಪ್ರದೇಶದ ಸದ್ದಾಂ ಇಸ್ಮಾಯಿಲಸಾಬ ರಾಯಚೂರಿ ಹಾಗೂ ಮಂಟೂರು ರೋಡನ ನಾಗರಾಜ ಶಿವಪ್ಪಾ ಹೊಸಕೊಟಿ ಎಂದು ಗುರುತಿಸಲಾಗಿದ್ದು. ಇವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪಿಎಸ್ಐ ಆನಂದಮೂರ್ತಿ ಅವರು ಪಿಕಪಾಕೆಟ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾವಲವಾಡ ಗ್ರಾಮದ ವೃದ್ದ ಲಕ್ಷ್ಮಣ ಉಪ್ಪಾರ ಎನ್ನುವವರು ಮುರ್ಕವಾಡ ಗ್ರಾಮದ ಕೆಡಿಸಿಸಿ ಬ್ಯಾಂಕನಿಂದ ಹಣ ಡ್ರಾ ಮಾಡಿಕೊಂಡು ಹಳಿಯಾಳ ಪಟ್ಟಣಕ್ಕೆ ಆಗಮಿಸಿದ್ದರು. ಬಳಿಕ ಮತ್ತೇ ಊರಿಗೆ ತೆರಳಲು ಹಳಿಯಾಳ-ಕಲಘಟಗಿ-ಮುಂಡಗೋಡ ಬಸ್ಸಿಗೆ ಹತ್ತಿದಾಗ ಬಸ್ ನಿಲ್ದಾಣದಲ್ಲಿಯೇ ಈ ಇಬ್ಬರು ಬಂಧಿತ ಕಿಸೆಗಳ್ಳರು ಬ್ಲೇಡ್ನಿಂದ ಕಿಸೆಯನ್ನು ಹರಿದು ಹಣ ಎಗರಿಸಿದ್ದಾರೆ.
ಸಂಶಯಗೊಂಡ ವೃದ್ದ ಕಿಸೆಯನ್ನು ತಡಕಾಡಿದಾಗ ಹಣ ಕಳುವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಕಿರುಚಾಡಿದ ವೃದ್ದ ಆಗಿರುವ ಘಟನೆ ತಿಳಿಸಿದ ಕೂಡಲೇ ಬಸ್ನ ನಿರ್ವಾಹಕರು ಯಾರನ್ನು ಕೆಳಗೆ ಇಳಿಸದೆ ಬಸ್ನ್ನು ನೇರವಾಗಿ ಹಳಿಯಾಳ ಠಾಣೆಗೆ ಒಯ್ದು ಎಲ್ಲರನ್ನು ತಪಾಸಣೆಗೆ ಒಳಪಡಿಸಿದಾಗ ಈ ಇಬ್ಬರು ಆರೋಪಿಗಳು ಕದ್ದಿರುವ ಹಣದ ಸಮೇತ ಪೋಲಿಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
Leave a Comment