ಹಳಿಯಾಳ :- 7 ತಿಂಗಳಿಂದ ವೇತನ ನೀಡದೆ ಸತಾಯಿಸಿದ್ದು ಅಲ್ಲದೇ ಕಳೆದ 2 ತಿಂಗಳಿಂದ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ(ನಾನ ಕ್ಲಿನಿಕ್) ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ತಾಲೂಕಾ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ವಿದ್ಯಮಾನ ಮಂಗಳವಾರ ನಡೆಯಿತು.
ಕೆಲಸದಿಂದ ವಂಚಿತರಾಗಿರುವ 9 ಜನ ಮಹಿಳಾ ಸಿಬ್ಬಂದಿಗಳು ತಮ್ಮ ಕುಟುಂಬದವರೊಡನೆ ಪಟ್ಟಣದ ತಾಲೂಕಾ ಆಸ್ಪತ್ರೆ ಎದುರು ತಮಗಾದ ಅನ್ಯಾಯದ ವಿರುದ್ದ ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದರು. ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಹಾಗೂ ಸಿಪಿಐ ಲೋಕಾಪುರ ಅವರು ಮನವೊಲಿಸಲು ಯತ್ನಿಸಿದಾಗ ಕೇಳದ ಪ್ರತಿಭಟನಾಕಾರರು ತಹಶೀಲ್ದಾರ್ ಅವರು ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದರು.
ತಮಗಾದ ಅನ್ಯಾಯದ ಕುರಿತು ಹಳಿಯಾಳದ ಮಾತೆ ಸಾವಿತ್ರಿಬಾಯಿ ಪುಲೆ ಮಹಿಳಾ ಅಭಿವೃದ್ದಿ ಸಂಘದ ಅಧ್ಯಕ್ಷೆ ಶಾಂತಾ ಅನಂತಸೇನ ಕುಲಕರ್ಣಿ, ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಮುಖ ಹರೀಶ ನಾಯ್ಕ, ಜೀಜಾಮಾತಾ ಕ್ಷತ್ರೀಯ ಮರಾಠಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಂಗಲಾ ಕಶೀಲಕರ, ದಲಿತ ಸಂಘಟನೆಯ ಭರಮೋಜಿ ವಡ್ಡರ, ದಲಿತ ಸಂಘರ್ಷ ಸಮೀತಿ ಕೆಂಪು ಸೇನೆಯ ಅಧ್ಯಕ್ಷ ವಿಬಿ ರಾಮಚಂದ್ರ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಸೇರಿದಂತೆ ಮೊದಲಾದವರಿಗೆ ಮನವಿ ಸಲ್ಲಿಸಿದ್ದು ಮಂಗಳವಾರ ನಡೆದ ಪ್ರತಿಭಟನೆಗೆ ಈ ಎಲ್ಲ ಸಂಘಟನೆಗಳವರು ಈ 9 ಮಹಿಳಾ ಸಿಬ್ಬಂದಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಪತ್ರಿಕಾ ಹೇಳಿಕೆ ನೀಡಿರುವ ಪ್ರತಿಭಟನಾಕಾರರು ಕಳೆದ 10-15 ವರ್ಷಗಳಿಂದ ತಾಲೂಕಾ ಆಸ್ಪತ್ರೆ ಹಳಿಯಾಳದಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿದ್ದೇವೆ. ಆದರೇ ತಾಲೂಕಾ ಆಸ್ಪತ್ರೆ ಗುತ್ತಿಗೆದಾರರಾದ ಚೆನ್ನಬಸಪ್ಪಾ ಗುಳನ್ನವರ ಮತ್ತು ದಿಲೀಪ ನಾಯ್ಕ ತಮಗೆ 7 ತಿಂಗಳ ಸಂಬಳವನ್ನು ನೀಡಿಲ್ಲ ಮಾತ್ರವಲ್ಲದೇ ಕೆಲಸದಿಂದಲೇ ತೆಗೆದು ಹಾಕಿದ್ದಾರೆ. ತಮಗೆ ಪ್ರತಿ ತಿಂಗಳಿಗೆ 5285/- ವೇತನ ನೀಡುತ್ತಿದ್ದರು. ಇದರಲ್ಲಿ 7 ಜನರಿಗೆ ಪ್ರತಿಯೊಬ್ಬರಿಂದ 785 ರೂ. ಮತ್ತು 5 ಜನರಿಗೆ ಪ್ರತಿಯೊಬ್ಬರಿಂದ 1285/- ಸಂಬಳದ ಪಾಲು ಕೇಳುತ್ತಿದ್ದರು ಎಂದು ಆರೋಪಿಸಿರುವ ಅವರು ಇದನ್ನು ಪ್ರಶ್ನೀಸಲು ಪ್ರಾರಂಭಿಸಿದಾಗ ಸಂಬಳವನ್ನು ತಡೆಹಿಡಿದು ಕೆಲಸದಿಂದ ಕಿತ್ತು ಹಾಕಿದ್ದಾರೆಂದು ಹೇಳಿದರು.
ಅಲ್ಲದೇ ತಮಗೆ ಪಿಎಫ್ ಮಾಡದೆ ಇರುವುದರ ಬಗ್ಗೆ ನಾವು ಕಾರ್ಮಿಕರ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಿದ್ದನ್ನು ಈ ಗುತ್ತಿಗೆದಾರರು ಖಂಡಿಸಿ ತಮಗೆ ಸಾಕಷ್ಟು ಸಮಸ್ಯೆ ಮಾಡಿದ್ದಾರೆಂದು ತಮ್ಮ ಅಳಲನ್ನು ತೊಡಿಕೊಂಡಿರುವ ಮಹಿಳಾ ಪ್ರತಿಭಟನಾಕಾರರು ತಮ್ಮ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ತೀರಾ ಬಡಕುಟುಂಬದವರಾದ ತಮಗೆ ಮತ್ತೇ ಕರ್ತವ್ಯಕ್ಕೆ ತೆಗೆದುಕೊಳ್ಳುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ತಾಲೂಕಾ ದಂಡಾಧಿಕಾರಿಯು ಆಗಿರುವ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಪ್ರತಿಭಟನಾಕಾರರ ಅಳಲನ್ನು ಆಲಿಸಿ ದಿ.21 ರಂದು ಹಳಿಯಾಳದಲ್ಲಿ ಈ ಕುರಿತು ಸಭೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಗಳ ಸಮಕ್ಷಮದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದಾಗ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಅನ್ಯಾಯಕ್ಕೊಳಗಾದ ಸಿಬ್ಬಂದಿಗಳಾದ ನಯೋಮಿ ಮಾದರ, ಶಕುಂತಲಾ ಕಲ್ಲವಡ್ಡರ, ಶಾಂತವ್ವಾ ವಡ್ಡರ, ಲಕ್ಷ್ಮೀ ಪೂಜಾರಿ, ರಾಧಾ ಮಾದರ, ಮಾದೇವಿ ವಡ್ಡರ, ಮುಬಾರಕ ಅರ್ಲವಾಡ, ನಾಗವ್ವಾ ವಡ್ಡರ ಹಾಗೂ ಲಕ್ಷ್ಮೀ ವಡ್ಡರ ಸೇರಿದಂತೆ ಅವರ ಕುಟುಂಬದವರು ಇದ್ದರು.
Leave a Comment