ಹಳಿಯಾಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ಮಹಿಳೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಲು ಅತ್ಯುತ್ತಮ ಕೌಶಲ್ಯಗಳನ್ನು ಹೊಂದಿ ಸ್ವಾವಲಂಬಿಯಾಗಿ ಬದುಕಲು ಕಲಿಯಬೇಕು ಎಂದು ಹಳಿಯಾಳದ ಕಾವಲವಾಡ ಜಿಲ್ಲಾ ಪಂಚಾಯತ ಸದಸ್ಯೆ ಲಕ್ಷ್ಮೀ ಸುಭಾಷ ಕೊರ್ವೇಕರ ಹೇಳಿದರು.
ಅವರು ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟ ಪ್ರಾಯೋಜಿತ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವತಿಯಿಂದ ತಾಲೂಕಿನ ಸಂಕನಕೊಪ್ಪ ಗ್ರಾಮದ ಮಹಿಳೆಯರಿಗಾಗಿ 1 ತಿಂಗಳ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಕಲಿತ ವಿದ್ಯೆ ನಿಂತ ನೀರಾಗದೆ ಹರಿಯುವ ನದಿಯಾಗಬೇಕು. ಮಹಿಳೆಯು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಬೇಕು ಮತ್ತು ಉದ್ಯಮಶೀಲ ಮಹಿಳೆಯಾಗಬೇಕು ಎಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಮಾತನಾಡಿ ಮಹಿಳೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಿ ಅರ್ಥಿಕವಾಗಿ ಸ್ವಾವಲಂಬನೆ ಬದುಕು ಸಾಗಿಸುವ ಮೂಲಕ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ ಸಂಸ್ಥೆಯ ಯೋಜನಾಧಿಕಾರಿ ಸಂತೋಷ ಪರೀಟ, ಸಂಕನಕೊಪ್ಪ ಗ್ರಾಮದ ಹಿರಿಯರಾದ ಪಾರ್ವತಿ ಎಮ್. ಕೊರ್ವೇಕರ, ಸಂಪನ್ಮೂಲ ವ್ಯಕ್ತಿ ರಾಧಾ ಸುಭಾಷ ಖಂಡೆಕರ, ಉಳವಯ್ಯಾ ಬೆಂಡಿಗೇರಿ ಇದ್ದರು.
Leave a Comment